ಭದ್ರಗಿರಿ ಕೇಶವದಾಸರು
July 22
೨೨.೭.೧೯೩೪ ೪.೧೨.೧೯೯೭ ಕರ್ನಾಟಕ, ಹಿಂದೂಸ್ತಾನಿ ಸಂಗೀತದಲ್ಲಿ ಪರಿಣತಿ ಪಡೆದು, ಕೀರ್ತನ ಕಲೆಯನ್ನು ವಿಶ್ವದಾದ್ಯಂತ ಪ್ರಚುರಪಡಿಸಿದ ಕೇಶವದಾಸರು ಹುಟ್ಟಿದ್ದು ಭದ್ರಗಿರಿಯಲ್ಲಿ. ತಂದೆ ವೆಂಕಟರಮಣಪೈ, ತಾಯಿ ರುಕ್ಮಿಣೀಬಾಯಿ. ಸಂಜೆ ವೇಳೆ ಮಕ್ಕಳನ್ನು ಕೂಡಿಸಿಕೊಂಡು ಹೇಳಿಕೊಡುತ್ತಿದ್ದ ಧಾರ್ಮಿಕ ಕಥೆಗಳು, ಭಜನೆಗಳಿಂದ ಪ್ರಭಾವಿತರಾಗಿ ರೂಢಿಸಿಕೊಂಡ ಕೀರ್ತನ ಕಲೆ. ಓದಿದ್ದು ಕಾನೂನು ಪದವಿಯಾದರೂ ನ್ಯಾಯಕ್ಕಾಗಿ ಅನೃತ ನುಡಿಯುವುದಕ್ಕಿಂತ ತತ್ತ್ವವಾದವೇ ಸರಿ ಎನಿಸಿ ಮಾಡಿಕೊಂಡ ಆಯ್ಕೆ. ಶಾಲೆಯಲ್ಲಿದ್ದಾಗಲೇ ಇಂದ್ರಸೇನರಾಜನ ಕಥೆಯನ್ನು ಹರಿಕಥೆಯ ರೂಪದಲ್ಲಿ ನಿರೂಪಿಸಿ ಪಡೆದ ಕೀರ್ತಿ. ಪದವಿಗಾಗಿ ಓದುತ್ತಿದ್ದಾಗಲೇ ಬೇಸಿಗೆಯ ರಜೆಯಲ್ಲಿ ಕಥಾ ಕಾಲಕ್ಷೇಪದಿಂದ ಹಣ ಸಂಗ್ರಹಿಸಲು ಮೈಸೂರು, ಬೆಂಗಳೂರು, ಕೊಡಗು ಮುಂತಾದೆಡೆ ಮಾಡಿದ ಕಥಾ ಕೀರ್ತನ ಕಾರ್ಯಕ್ರಮಗಳು. ಬೆಂಗಳೂರಿನಲ್ಲೂ ನೀಡಿದ ಕಾರ್ಯಕ್ರಮಗಳು. ದಾನಿಗಳು ನೀಡಿದ ಸ್ಥಳದಲ್ಲಿ ರಾಜಾಜಿನಗರದ ಐದನೆಯ ಬ್ಲಾಕಿನಲ್ಲಿ ದಾಸಾಶ್ರಮ ಸ್ಥಾಪನೆ. ಪಾಂಡುರಂಗ, ರುಕ್ಮಾಯಿ, ಈಶ್ವರ, ಸುಬ್ರಹ್ಮಣ್ಯ, ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ. ೧೯೬೪ ರಲ್ಲಿ ಕರ್ನಾಟಕ ಕೀರ್ತನಕಾರರನ್ನೆಲ್ಲಾ ಸಂಘಟಿಸಿ ನಡೆಸಿದ ಕರ್ನಾಟಕ ಕೀರ್ತನಕಾರರ ಸಮ್ಮೇಳನ. ಶ್ರೀಮನ್ ಮಹಾರಾಜರಿಂದ ಉದ್ಘಾಟನೆ. ೧೯೬೬ ರಲ್ಲಿ ಪ್ರಥಮ ವಿಶ್ವಪರ್ಯಟನೆ. ೩೮ ಬಾರಿ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ವಿಶ್ವದಾದ್ಯಂತ ಪಸರಿಸಿದ ಕೀರ್ತಿ. ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ಸ್ಥಾಪಿಸಿದ ವಿಶ್ವಶಾಂತಿ ಆಶ್ರಮ. ೩೨ ಅಡಿಗಳ ಭವ್ಯ ವಿಜಯ ವಿಠಲ ಮೂರ್ತಿ ಸ್ಥಾಪನೆ. ಭಾರತೀಯ ಸಂಸ್ಕೃತಿಯ ಪ್ರೇರಕಶಕ್ತಿಯಾಗಿ, ಅಧ್ಯಾತ್ಮಿಕ ವಿದ್ಯಾಲಯವಾಗಿ ಪಡೆದ ಕೀರ್ತಿ. ಹಲವಾರು ಗ್ರಂಥಗಳ ರಚನೆ. ಕಥಾ ಪ್ರಸಂಗಗಳ ನೂರಾರು ಧ್ವನಿಸುರುಳಿಗಳ ಬಿಡುಗಡೆ. ಹರಿಕಥಾ ಕಲಾವಿಚಕ್ಷಣ, ಕೀರ್ತನ ಕೇಸರಿ, ಕೀರ್ತನನಾಟಕ ವಿಶಾರದ ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಇದೇ ದಿನ ಹುಟ್ಟಿದ ಕಲಾವಿದರು ನಂದ ಎಂ. ಪಾಟೀಲ – ೧೯೬೩ ಲಕ್ಷ್ಮೀ ಟಿ.ಎಸ್ – ೧೯೬೬ ಗವಾನಿ. ಪಿ.ಬಿ – ೧೯೬೭ ವಿರೂಪಾಕ್ಷಯ್ಯ ವಂದಲಿ – ೧೯೭೦
* * *