ಮುದ್ದಣ್ಣ ಶಿರಹಟ್ಟಿ
July 23
೨೩.೭.೧೯೬೦ ರಂಗದ ಮೇಲೆ ಕಾಣಿಸಿಕೊಳ್ಳುವ ನಟರಷ್ಟೇ ರಂಗಭೂಮಿಯ ನೇಪಥ್ಯದಲ್ಲಿ ದುಡಿಯುವವರಲ್ಲಿ ರಂಗವಿನ್ಯಾಸಕಾರರಾಗಿ, ಬೆಳಕು ಸಂಯೋಜನೆ ತಜ್ಞರಾಗಿ ಪ್ರಮುಖರಾಗಿರುವ ಮುದ್ದಣ ಹುಟ್ಟಿದ್ದು ಹಾವೇರಿಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ರಟ್ಟೀಹಳ್ಳಿ, ತಂದೆ ವೀರಪ್ಪ ಶಿರಹಟ್ಟಿ, ತಾಯಿ ಸುನಂದಮ್ಮ. ಓದಿಗಿಂತ ರಂಗಭೂಮಿಯ ಕಡೆಗೆ ಆಕರ್ಷಿತರಾಗಿ ರಂಗತಜ್ಞರಾದ ಪ್ರಸನ್ನ, ವಿ. ರಾಮಮೂರ್ತಿ, ಸಿಜಿಕೆ, ಪದ್ದಣ್ಣ, ಕಪ್ಪಣ್ಣ, ಆರ್. ನಾಗೇಶ್, ಶಂಕರನಾಗ್, ಪರೇಶ್ ಕುಮಾರ್, ಚಂದ್ರಕುಮಾರ್ ಸಿಂಗ್ ರೊಡನೆ ತರಬೇತು ಪಡೆದು ಕಲಿತಿದ್ದೇ ಜಾಸ್ತಿ. ಸಿಕ್ಕು, ಟಿಂಗರ ಬುಡ್ಡಣ್ಣ, ತಾಯಿ, ಸಂಕ್ರಾಂತಿ, ಹಿಟ್ಟಿನ ಹುಂಜ, ಹುಚ್ಚು ಕುದುರೆ, ಶೋಕಚಕ್ರ, ಹೀಗೆ ಸುಮಾರು ೨೦೦ ಕ್ಕೂ ಹೆಚ್ಚು ನಾಟಕಗಳಿಗೆ ರಂಗವಿನ್ಯಾಸ, ಬೆಳಕು ಸಂಯೋಜನೆ ಹೊಣೆಗಾರಿಕೆ. ಕರ್ನಾಟಕ ನಾಟಕ ಅಕಾಡಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ, ಮಧುರೆಯ ನಾಟಕೋತ್ಸವ, ಶಿವಮೊಗ್ಗದ ಕುವೆಂಪು ನಾಟಕೋತ್ಸವ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳು, ಗಿರೀಶ ಕಾರ್ನಾಡರ ನಾಟಕೋತ್ಸವ, ಮುಂತಾದ ನಾಟಕೋತ್ಸವಗಳಿಗೆ, ಸಾಂಸ್ಕೃತಿಕ ಉತ್ಸವಗಳಿಗೆ ಬೆಳಕು ಸಂಯೋಜನೆಯ ಜವಾಬ್ದಾರಿ. ಚಲನಚಿತ್ರ, ದೂರದರ್ಶದ ಧಾರಾವಾಹಿಗಳಾದ ಸಾವಿತ್ರಿ (ಟಿ.ಎಸ್.ರಂಗ), ಅರಿವು (ಕಟ್ಟೆರಾಮಚಂದ್ರ) ಬಸವಣ್ಣ (ಪ್ರಸನ್ನರ ಹಿಂದಿ ಸೀರಿಯಲ್) ಅವಲೋಕನ (ಶ್ರೀನಿವಾಸ ತಾವರೆಗೇರಿ) ಮುಂತಾದವುಗಳ ಸಂಪನ್ಮೂಲ ವ್ಯಕ್ತಿ. ಇದೀಗ ರಂಗಶಂಕರದ ತಾಂತ್ರಿಕ ನಿರ್ದೇಶಕರು. ಡಾ. ರಾಜ್ ನಾಟಕೋತ್ಸವದಲ್ಲಿ ಹಿಟ್ಟಿನ ಹುಂಜ ನಾಟಕಕ್ಕೆ, ಅವಂತರ ಕಾಲೇಜು ನಾಟಕ ಸ್ಪರ್ಧೆಯ ಸುಲ್ತಾನ್ ಟಿಪ್ಪೂ , ಉಡುಪಿ ನಾಟಕೋತ್ಸವದ ಗುಣಮುಖ, ನಾಟಕಗಳಿಗೆ ರಂಗ ವಿನ್ಯಾಸ, ಅತ್ಯುತ್ತಮ ಬೆಳಕು ಸಂಯೋಜನೆಯ ಪ್ರಶಸ್ತಿ ಪುರಸ್ಕೃತರು. ಇದೇ ದಿನ ಹುಟ್ಟಿದ ಕಲಾವಿದರು ನಾಗೇಂದ್ರಪ್ಪ ಎಂ.ವಿ. – ೧೯೨೩ ಬಾಲಕೃಷ್ಣ ತಂತ್ರಿ – ೧೯೫೧ ನರಸಿಂಹಮೂರ್ತಿ. ಜೆ – ೧೯೬೧ ಲಕ್ಷ್ಮೀಪತಿ ಜೆ – ೧೯೭೩
* * *