Loading Events

« All Events

  • This event has passed.

ಸರಸ್ವತಿಬಾಯಿ ರಾಜವಾಡೆ (ಗಿರಿಬಾಲೆ)

October 3, 2023

೦೩.೧೦.೧೯೧೩ ೨೩..೧೯೯೪ ಸ್ವಾತಂತ್ರ್ಯಪೂರ್ವದಲ್ಲೇ ಪ್ರಗತಿಪರ ಧೋರಣೆಗಳನ್ನು ಹೊಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ತೊಡಗಿಸಿಕೊಂಡು, ಮಹಿಳೆಯರ ಸರ್ವತೋಮುಖ ಬೆಳವಣಿಗೆಗಾಗಿ ದುಡಿದ ಕಮಲಾದೇವಿ ಚಟ್ಟೋಪಾಧ್ಯಾಯ, ಸೀತಾದೇವಿ ಪಡುಕೋಣೆ, ಲೀಲಾಬಾಯಿ ಕಾಮತ್‌, ಆನಂದಿ ಸದಾಶಿವರಾವ್‌ ಮುಂತಾದವರುಗಳಂತೆ ದುಡಿದ ಮತ್ತೋರ್ವ ಮಹಿಳೆ ಸರಸ್ವತಿ ಬಾಯಿ ರಾಜವಾಡೆಯವರು ಹುಟ್ಟಿದ್ದು ಉಡುಪಿಯ ಬಳಿಯ ಒಳಂಜಾಲ ಎಂಬಲ್ಲಿ ೧೯೧೩ ರ ಅಕ್ಟೋಬರ್ ೩ ರಂದು. ತಂದೆ ನಾರಾಯಣ ರಾವ್‌, ತಾಯಿ ಕಮಲಾಬಾಯಿ ಮಹಾರಾಷ್ಟ್ರ ಮೂಲದವರು. ಒಂದೆಡೆ ಕಿತ್ತು ತಿನ್ನುವ ಬಡತನವಾದರೆ ಮತ್ತೊಂದೆಡೆ ಹುಟ್ಟುವ ಮೊದಲೇ ಸಂಸಾರದಲ್ಲಿ ವಿರಕ್ತಿ ಹೊಂದಿ ದೂರ ಹೊರಟುಹೋದ ತಂದೆಯ ಮುಖವನ್ನೇ ಕಾಣದ ಮಗು, ತಂದೆಯ ಈ ರೀತಿಯ ನಡವಳಿಕೆಗೆ ಮಗುವೇ ಕಾರಣವೆಂದು ಜಿಗುಪ್ಸೆ ತಾಳಿದ ತಾಯಿಯ ಪ್ರೀತಿಯಿಂದಲೂ ವಂಚಿತರು. ಗಿರಿಬಾಲೆಯವರಿಗೆ ಮೊದಲಿನಿಂದಲೂ ಓದಿನಲ್ಲಿ ತುಂಬಾ ಆಸಕ್ತಿ ಇದ್ದುದರಿಂದ ತಾಯಿಯನ್ನು ಕಾಡಿಬೇಡಿ ಪುಸ್ತಕ, ಸ್ಲೇಟನ್ನು ಕೊಂಡು ಶಾಲೆಯಲ್ಲಿ ಕಲಿಯತೊಡಗಿದರು. ಆದರೆ ತಾಯಿಗೆ ಇವಳ ಮದುವೆ ಮಾಡಿದರೆ ಸಾಕೆಂದು ೧೫ ರ ಹರೆಯದ ಹುಡುಗಿಯನ್ನು ೫೧ ರ ವಯಸ್ಸಿನ ರಾಯಶಾಸ್ತ್ರಿ ರಾಜವಾಡೆಯವರಿಗೆ ಮದುವೆ ಮಾಡಿಸಿದರು. ಇವರು ಸಿಂಗಪುರದಲ್ಲಿ ಅಕೌಂಟೆಂಟ್‌ ಜನರಲ್‌ ಆಗಿದ್ದರಿಂದ ಸುಖದ ಸುಪ್ಪತ್ತಿಗೆಯೇ ಗಿರಿಬಾಲೆಗೆ ಕಾದಿತ್ತು. ಬಾಲ್ಯದಲ್ಲಿ ತಾಳಲಾರದ ಬಡತನದಿಂದ ಬೇಸತ್ತು ‘ದೇವರು ಭಕ್ತರ ಕಷ್ಟ ನಿವಾರಿಸುತ್ತಾನೆ, ಇಷ್ಟಾರ್ಥ ನೆರವೇರಿಸುತ್ತಾನೆಂದು ತಿಳಿದು, ಕಲೆಕ್ಟರ್ ಗಂಡನನ್ನು ಕೊಡು, ಐಶ್ವರ್ಯವನ್ನು ಕೊಡು’ ಎಂದು ಬೇಡಿ ಪತ್ರ ಬರೆದಿದ್ದರಂತೆ. ಪತ್ರ ತಲುಪಿತೋ ಇಲ್ಲವೋ! ಆದರೆ ತಥಾಸ್ತು ಎಂದ ದೇವರು ಎಲ್ಲವನ್ನೂ ಕೊಟ್ಟ ಆದರೆ ದೊರೆತದ್ದು ವಯಸ್ಸಾದ ಗಂಡ! ಗಂಡನ ಮನೆಗೆ ತೆರಳಿದ ನಂತರವೇ ತಿಳಿದದ್ದು, ಇದೊಂದು ಬಂಗಾರದ ಪಂಜರವೆನ್ನುವುದು. ಎಲ್ಲವನ್ನು ಸಂಶಯಿಸುವ ಗಂಡ. ಕಡೆಗೆ ಮನೆಗೆ ಬರುತ್ತಿದ್ದ ಪತ್ರಿಕೆಗಳನ್ನು ಓದತೊಡಗಿದ್ದಲ್ಲದೆ, ಮನೆಕೆಲಸದ ಹುಡುಗನಿಂದ ತಮಿಳು ಭಾಷೆಯನ್ನು ಕಲಿತರು. ಬರೆದ ಮೊದಲ ಕತೆ ‘ನನ್ನ ಅಜ್ಞಾನ’ ಕಂಠೀರವ ಪತ್ರಿಕೆಯಲ್ಲಿ ಪ್ರಕಟಗೊಂಡು ಬಹುಮಾನ ಬಂದಿದ್ದರಿಂದ ಉತ್ತೇಜಿತರಾಗಿ ಬರವಣಿಗೆಯನ್ನು ರೂಢಿಸಿಕೊಳ್ಳಲು ಪ್ರೇರೇಪಿಸಿತು. ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದನ್ನು ಗಂಡನಿಗೂ ಮೊದಲು ತಿಳಿಸದಿದ್ದರೂ, ಇದು ಹೇಗೋ ತಿಳಿದು ಕಡೆಗೆ ಗಂಡನ ಪ್ರೋತ್ಸಾಹದಿಂದಲೇ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗೆ ಕುಳಿತು ಉತ್ತಮ ಅಂಕ ಪಡೆದು ಉತ್ತೀರ್ಣರಾದರು. ನಂತರ ಹಿಂದಿ ರಾಷ್ಟ್ರಭಾಷಾ, ವಿಶಾರದ ಪರೀಕ್ಷೆಗಳಲ್ಲೂ ಉತ್ತೀರ್ಣರಾದರು. ಹೀಗೆ ಇವರು ಹಿಂದಿ, ತಮಿಳು, ಸಂಸ್ಕೃತ, ಇಂಗ್ಲಿಷ್‌, ಮರಾಠಿ, ಕನ್ನಡ ಮುಂತಾದ ಆರು ಭಾಷೆಗಳನ್ನು ಕಲಿತರು. ೧೯೨೯ರಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದ ಗಿರಿಬಾಲೆಯವರು ಬರೆದದ್ದು ಸುಮಾರು ೬೫ ಕತೆಗಳು. ಮೊದಲ ಕಥಾ ಸಂಕಲನ ‘ಆಹುತಿ ಇತ್ಯಾದಿ ಕಥೆಗಳು’ ೧೯೩೮ರಲ್ಲಿ ಪ್ರಕಟಗೊಂಡಿದ್ದು ‘ದಿ ಹಿಂದೂ’ ಪತ್ರಿಕೆಯಲ್ಲಿ ವಿಮರ್ಶಕರೊಬ್ಬರು ‘ದಿ ಅನ್‌ಕ್ರೌನ್ಡ್ ಕ್ವೀನ್‌ ಆಫ್‌ ಶಾರ್ಟ್ ಸ್ಟೋರೀಸ್‌’ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅಂದಿನ ಸಂದರ್ಭದಲ್ಲಿ ಸಾಹಿತ್ಯ ಲೋಕದಲ್ಲಿ ಮಹಿಳೆಯರ ಪಾಲು ಬಹು ಕಡಿಮೆಯಾಗಿದ್ದು, ಅದರಲ್ಲೂ ಇವರ ಕತೆಗಳಲ್ಲಿನ ವೈವಿಧ್ಯತೆ, ವಸ್ತುವಿನ ಆಯ್ಕೆ, ಕಥಾರಚನೆ, ನಿರೂಪಣಾತಂತ್ರ ಮುಂತಾದ ಸಾಹಿತ್ಯಿಕ ಗುಣಗಳಿಂದ ಗಿರಿಬಾಲೆಯವರು ತಾವೊಬ್ಬ ಪ್ರತಿಭಾನ್ವಿತ ಲೇಖಕಿ ಎಂಬುದನ್ನು ನಿರೂಪಿಸಿದ್ದರು. ನಂತರ ಬಂದ ಮತ್ತೆರಡು ಕಥಾ ಸಂಕಲನಗಳೆಂದರೆ ‘ಕದಂಬ’ ಹಾಗೂ ‘ಪ್ರೇಮ ವಿವಾಹ’. ಇವರು ಬರೆದ ಕಾದಂಬರಿ ‘ವಿಮಲೆ’. ಕತೆ, ಕವನಗಳನ್ನು ಬರೆಯ ತೊಡಗಿದ ಗಿರಿಬಾಲೆಯವರು ೧೯೪೬ರಲ್ಲಿ ‘ಕಥಾವಳಿ’ ಎಂಬ ಪತ್ರಿಕೆಯ ವನಿತಾ ವಿಭಾಗದ ಸಂಪಾದಕತ್ವದ ಹೊಣೆಯನ್ನು ಹೊತ್ತುಕೊಂಡು ‘ಅಕ್ಕನ ಓಲೆ’ ಎಂಬ ಅಂಕಣವನ್ನು ಪ್ರಾರಂಭಿಸಿ ಹಲವಾರು ಭಗಿನಿಯರಿಗೆ ಮಾರ್ಗದರ್ಶಕರಾದರು. ಅಂಕಣದ ಮೂಲಕ ಹಲವಾರು ಸಮಸ್ಯೆಗಳನ್ನೆತ್ತಿ, ಉತ್ತರಿಸಿ, ಚಿಂತನೆಗೆ ದಾರಿಮಾಡಿದರು. ‘ಚಾರು ಚಯನ’ ಎಂಬ ಇನ್ನೊಂದು ಅಂಕಣದಲ್ಲಿ ಉದಯೋನ್ಮುಖ ಲೇಖಕಿಯರ ಕತೆ, ಕವನಗಳನ್ನು ಪ್ರಕಟಿಸಿ ಉತ್ತೇಜನ ನೀಡಿದರು. ಮತ್ತೊಂದು ಪತ್ರಿಕೆ ನಿಸರ್ಗ (೧೯೫೧)ರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಬರೆದರು. ಹೀಗೆ ಹಲವಾರು ಪತ್ರಿಕೆಗಳ ಸಂಪರ್ಕದಿಂದ ಗಿರಿಬಾಲೆ, ವೀಣಾಪಾಣಿ, ವಿಶಾಖ ಎಂಬ ಕಾವ್ಯನಾಮಗಳಿಂದ ಬರೆಯತೊಡಗಿದರು. ಹಲವಾರು ಕವಿತೆಗಳನ್ನು ಬರೆದ ಗಿರಿಬಾಲೆಯವರ ‘ಕಲಿಯೋಣ’ ಮೊದಲ ಕವನವು ಕಥಾವಳಿಯಲ್ಲಿ ೧೯೪೮ರಲ್ಲಿ ಪ್ರಕಟವಾಯಿತು. ಅದರಲ್ಲಿ ಚೇತರಿಸಿ ಭಗಿನಿಯರೇ! ಸಾಕಿನ್ನು ತೂಕಡಿಕೆ ಕ್ರೀತದಾಸಿಯರಾಗಿ ಬಾಳಿದುದು ಸಾಕಾಯ್ತು ಎಂದು ಎಚ್ಚರಿಸುತ್ತಾ ಜಡತ್ವವನ್ನು ತೊರೆದು ಕ್ರಿಯಾಶೀಲ ಬದುಕನ್ನು ರೂಢಿಸಿಕೊಂಡು ಮಹಿಳೆಯರ ಏಳಿಗೆಗಾಗಿ ದುಡಿಯಬೇಕೆಂದು ಕರೆನೀಡಿದರು. ನಾಟಕ ಪ್ರಕಾರದಲ್ಲಿಯೂ ದುಡಿದ ಗಿರಿಬಾಲೆಯವರು ‘ಪರಿಣಯ’ ಎಂಬ ಮರಾಠಿ ಪ್ರಹಸನವನ್ನು ೧೯೪೯ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಲ್ಲದೆ ೧೯೫೨ರಲ್ಲಿ ಸ್ವತಂತ್ರ ನಾಟಕ ‘ಸಾರ್ಥಕ ಜೀವನ’ ಎಂಬುದನ್ನು ರಚಿಸಿದರು. ಈ ನಾಟಕದ ೩ನೆಯ ಅಂಕದ ಏಳು ಮತ್ತು ಎಂಟನೆಯ ದೃಶ್ಯಗಳು ‘ಮಂಥರೆ ಕಂಡ ಅಂತರಂಗ’ ಎಂಬ ಹೆಸರಿನಲ್ಲಿ ೧೯೬೧ರಲ್ಲಿ ಪ್ರಕಟವಾಯಿತು. ವಾಲ್ಮೀಕಿ ರಾಮಾಯಣದಲ್ಲಿ ರಾಮನ ಪಟ್ಟಾಭಿಷೇಕದ ಸುದ್ದಿಯನ್ನು ಮಂಥರೆ ಕೈಕೇಯಿಗೆ ತಿಳಿಸಿ, ಅವಳಿಗೆ ಹೊಟ್ಟೆಕಿಚ್ಚು ಉಂಟಾಗುವಂತೆ ಉದ್ದೀಪನಗೊಳಿಸಿದರೆ, ಇಲ್ಲಿ ಇವರು ಮಂಥರೆಯ ಅಂತರಂಗವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಮರಾಠಿಯಿಂದ ಅನುವಾದಿಸಿದ ಮತ್ತೊಂದು ನಾಟಕವೆಂದರೆ ‘ಬಿರುಗಾಳಿ’ (೧೯೫೭ ) ಮತ್ತು ಹಿಂದಿಯಿಂದ ಅನುವಾದಿಸಿದ ನಾಟಕ ‘ಪ್ರಕಾಶ’. ೧೯೬೧ರಲ್ಲಿ ರಚಿಸಿದ ನಾಟಕ ‘ಸಹೋದರ’, ಇವಲ್ಲದೆ ಸಂತ ಮೀರ, ಸಂಸಾರ, ಡೆಪ್ಟಿ ಕಲೆಕ್ಟರ್ ಮುಂತಾದ ನಾಟಕಗಳನ್ನು ರಚಿಸಿರುವುದಲ್ಲದೆ ನಾಟಕದ ಪಾತ್ರಧಾರಿಯಾಗಿಯೂ ರಂಗದ ಮೇಲೆ ಬಂದಿರುವುದೇ ವಿಶೇಷ. ಕೆಲ ಪತ್ರಿಕೆಗಳ ಸಂಪಾದಕಿ, ಅಂಕಣಕಾರ್ತಿಯಾಗಿ ಪಡೆದ ಅನುಭವದಿಂದ ಇವರೇ ಪ್ರಾರಂಭಿಸಿದ ಪತ್ರಿಕೆ ‘ಸುಪ್ರಭಾತ’ (೧೯೫೨). ಇದರಲ್ಲಿ ಮಹಿಳಾ ಲೇಖನಗಳಿಗೇ ಪ್ರಾಧಾನ್ಯತೆ ನೀಡಿ, ಮಹಿಳೆಯರೇ ತಮಗೆ ಬೇಕಾದ್ದಬೇಡದ್ದನ್ನು ಯಥಾರ್ಥವಾಗಿ ಚಿತ್ರಿಸಲು ಅನುಕೂಲ ಕಲ್ಪಿಸಿದರು. ವೈವಿಧ್ಯಮಯ ವಸ್ತುವಿನ ೫೦ ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದು ಮಹಿಳೆಯರಿಗೆ ದಾರಿದೀಪವಾದರು. ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದ ಗಿರಿಬಾಲೆಯವರು ಉಡುಪಿಯ ಸರಕಾರಿ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಹಣ ಸಹಾಯ ಮಾಡಿದರು. ಕಡೆಗೆ ಅಧ್ಯಾತ್ಮಿಕದತ್ತ ವಾಲಿದ ಗಿರಿಬಾಲೆಯವರು ಕೃಪಾಂತರಂಗ ಭಾಗ ೧,೨; ಸ್ತವನಾಂಜಲಿ, ಶ್ರೀಶಾರದಾಂಬ ಸ್ತುತಿಗೀತೆಗಳು, ಶ್ರೀಶಾರದಾದೇವಿ ಭಕ್ತರಿಗೆ ಪ್ರಕಟಿಸಿದ ಮಹಿಮೆಗಳು ಮುಂತಾದ ಕೃತಿಗಳನ್ನು ರಚಿಸಿದ್ದಲ್ಲದೆ ೧೯೭೬ರಲ್ಲಿ ಉಡುಪಿಯ ಚಿಟ್ಟಾಡಿಯಲ್ಲಿ ಶಾರದಾಂಬ ದೇಗುಲವನ್ನು ಜೀರ್ಣೋದ್ಧಾರ ಮಾಡಿಸಿ, ಶಾರದಾಂಬ ಸೇವೆಗಾಗಿ ನಿಂತು ಭಕ್ತರಿಗೆ ದಾರಿ ತೋರಿಸುತ್ತಾ ವಿರಕ್ತ ಬದುಕನ್ನು ರೂಢಿಸಿಕೊಂಡರು. ಗಿರಿಬಾಲೆಯವರ ಸಾಹಿತ್ಯದ ಕೊಡುಗೆಗಾಗಿ ಅಖಿಲ ಕರ್ನಾಟಕ ಲೇಖಕಿಯರ ಸಂಘವು ೧೯೮೮ರಲ್ಲಿ ನಡೆದ ಎರಡನೆಯ ಲೇಖಕಿಯರ ಸಮ್ಮೇಳನದಲ್ಲಿ ಸನ್ಮಾನಿಸಿದ್ದಲ್ಲದೆ ೧೯೯೪ರಲ್ಲಿ ಅನುಪಮಾ ಪ್ರಶಸ್ತಿಯನ್ನು ನೀಡಿದಾಗ ಸ್ವೀಕರಿಸುವ ಮುನ್ನವೇ ೧೯೯೪ ರ ಏಪ್ರಿಲ್‌ ೨೩ ರಂದು ಎಲ್ಲವನ್ನು ಬಿಟ್ಟು ತೆರಳಿದರು. (ಫೋಟೋ ಕೃಪೆ: ಡಾ. ಸಬಿಹಾ ಭೂಮಿಗೌಡ)

Details

Date:
October 3, 2023
Event Category: