Categories
ಸಂಸ್ಕೃತಿ ಸಮುದಾಯ ಸಂಸ್ಕೃತಿ-ಸಮುದಾಯ

ಧರ್ಮ ಮತ್ತು ಮುಕ್ತವಿಚಾರ

ಕೃತಿ:ಧರ್ಮ ಮತ್ತು ಮುಕ್ತವಿಚಾರ
ಲೇಖಕರು: ಯಳನಾಡು ಅಂಜನಪ್ಪ
ಕೃತಿಯನ್ನು ಓದಿ

Categories
ಸಂಸ್ಕೃತಿ ಸಮುದಾಯ ಸಂಸ್ಕೃತಿ-ಸಮುದಾಯ

ಸಿರಿ ಜನಪದ ಕಾವ್ಯ : ಸಾಂಸ್ಕೃತಿಕ ಮುಖಾಮುಖಿ

ಕೃತಿ:ಸಿರಿ ಜನಪದ ಕಾವ್ಯ

ಲೇಖಕರು: ಡಾ. ವೆಂಕಟೇಶ ಇಂದ್ವಾಡಿ

ಕೃತಿಯನ್ನು ಓದಿ     |     Download

Categories
ಸಂಸ್ಕೃತಿ ಸಮುದಾಯ ಸಂಸ್ಕೃತಿ-ಸಮುದಾಯ

ವ್ಯಾಧ ಚರಿತೆ – ಬೇಡ ಕುಲಮೂಲದ ಕಥನಗಳು

ಕೃತಿ:ವ್ಯಾಧ ಚರಿತೆ – ಬೇಡ ಕುಲಮೂಲದ ಕಥನಗಳು
ಲೇಖಕರು:
ಕೃತಿಯನ್ನು ಓದಿ

Categories
ಸಂಸ್ಕೃತಿ ಸಮುದಾಯ ಸಂಸ್ಕೃತಿ-ಸಮುದಾಯ

ಅಲೆಮಾರಿಗಳ ಸ್ಥಿತಿಗತಿ

ಕೃತಿ:ಅಲೆಮಾರಿಗಳ ಸ್ಥಿತಿಗತಿ
ಲೇಖಕರು:
ಕೃತಿಯನ್ನು ಓದಿ

Categories
ಕನ್ನಡ ಜಾನಪದ ಸಾಹಿತ್ಯ ಸಂಸ್ಕೃತಿ ಸಂಸ್ಕೃತಿ ಸಮುದಾಯ ಸಂಸ್ಕೃತಿ-ಸಮುದಾಯ

ಅಂಕುರ

ಕೃತಿ:ಕನ್ನಡ ಜಾನಪದ ಸಾಹಿತ್ಯ
ಲೇಖಕರು: ಕನ್ನಡ, ಜಾನಪದ ಸಾಹಿತ್ಯ, ಸಂಸ್ಕೃತಿ
ಕೃತಿಯನ್ನು ಓದಿ

Categories
ಅಂಕಣಗಳು ಕುರುವ ಬಸವರಾಜ್ ಅಂಕಣ ಜಾನಪದ ಸಂಸ್ಕೃತಿ ಸಮುದಾಯ ಸಂಸ್ಕೃತಿ-ಸಮುದಾಯ

ಗರಿಕೆ ಎಂಬ ಜನಪದರ ಬೆನವ

ನಮ್ಮ ನೆಲದಲ್ಲಿ ಎಲ್ಲೆಂದರಲ್ಲಿ ಸಹಜವಾಗಿ ಕಾಣಬರುವ ಹಚ್ಚಹಸುರಿನ ಸಸ್ಯ ಗರಿಕೆ. ಗಾಯಕ್ಕೆ ಔಷಧವಾಗುವ ಈ ಸಸ್ಯ ಸಗಣಿ ಬೆನವ ತಲೆ ಏರಿ ಕೂತು ಪೂಜೆಗೂ ಒಳಗಾಗುತ್ತದೆ. ತೀರ ತೆಳುವಾದ ಗಾತ್ರದಲ್ಲಿ, ನೆಲದಲ್ಲೆ ಹಬ್ಬುವ ಗುಣದ ಇದರ ಕುರಿತು ಜನರಲ್ಲಿ ನಾನಾ ತರಹದ ಪ್ರಕ್ರಿಯೆ ಇದೆ. ಎಷ್ಟು ಕಿತ್ತರೂ ನೆಲೆದಲ್ಲೇ ಉಳಿದ ಕೊಂಚ ತುಂಡು ಚಿಗಿತು ಹಬ್ಬಬಲ್ಲ ಸ್ವರೂಪದ್ದು. ಮಳೆಯಿಲ್ಲದೆ ಎಷ್ಟೋ ವರ್ಷಗಳ ಕಾಲ ಒಣಗಿ, ತುಂಡು ಕಡ್ಡಿಯಾಗಿ ಹಾಗೆಯೇ ಬಿದ್ದಿದ್ದರೂ ಆನಂತರ ಅದ್ಯಾವಾಗಲೋ ಹನಿ ಬಿದ್ದರೂ ಮತ್ತೆ ಚಿಗುರಿ ಬೆಳೆಯಬಲ್ಲ ಸಸ್ಯಜಾತಿ ಇದು. ಹಾಗಾಗಿಯೇ ಜನಪದ ಹಾಡುಗಾರ್ತಿ/ ಕವಿ ಗರಿಕೆಯನ್ನು ತವರಿಗೆ ಹೋಲಿಸುತ್ತಾರೆ. ನನ್ನ ತವರು ಗರಿಕೆಯ ಕುಡಿಯಹಾಗೆ ಹಬ್ಬಲಿ ಎಂದು.

ಎಷ್ಟು ಕಿತ್ತರೂ ಅಷ್ಟು ಸುಲಭದಲ್ಲಿ ಅಳಿಸಲಾಗದಷ್ಟು ಪ್ರಮಾಣಕ್ಕೆ ಉಳಿಯುವ, ರೈತರಿಗೆ ಅದರಲ್ಲೂ ಎರೆ/ ಕಪ್ಪನೆ ಮಣ್ಣಿನ ಹೊಲದವರಿಗೆ ಕಳೆಯ ಸಮಸ್ಯೆಯ ಸಸ್ಯವಾಗಿದ್ದರೆ, ನಗರದವರಿಗೆ ತಂಪಿನ ಹುಲ್ಲುಹಾಸು.

ಕರುಂಕೆ, ಕರಿಕೆ, ಕರಕಿ, ಕರಿಕಿ, ಕರ್ಕಿ, ಗರಕೆ, ಗರಿಕೆ (ಕನ್ನಡ, ಕನ್ನಡ ನಿಘಂಟು: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಪುಟ 1661), ಹೀಗೆ ಗರಿಕೆಗಿರುವ ಹಳೆಗನ್ನಡ, ಹೊಸಗನ್ನಡ ಪದಗಳ ಪಟ್ಟಿಯೇ ದೊರೆಯುತ್ತದೆ. ಇದನ್ನೇ ತಮಿಳಿನಲ್ಲಿ ‘ಕರಿಕ’, ತುಳುವಿನಲ್ಲಿ ‘ಕರಿಕೆ’, ತೆಲುಗಿನಲ್ಲಿ ‘ಕರಿಕ’ ಎಂಬ ಸಾಮ್ಯ ಪದಗಳಿರುವುದನ್ನು ಗಮನಿಸಬಹುದು. ಅಂದರೆ ಇಡೀ ದಕ್ಷಿಣ ಭಾರತದ ಮುಖ್ಯ ಭಾಷೆಗಳೆಲ್ಲೆಲ್ಲಾ ಸಮೀಪದ ಪದಗಳಲ್ಲಿ ಬಳಕೆಯಾಗುವುದರಿಂದ ಇದು ಮೂಲ ದ್ರಾವಿಡ ಭಾಷಾ ಪದದ ಮುಂದುವರಿಕೆ ಎನಿಸದಿರದು.ಅಷ್ಟೆ ಅಲ್ಲ ‘ಸಗಣಿ ಬೆನವ’ನ ಮೂರ್ತಿ ಪೂಜೆಯ ಆಚರಣೆಯೂ ಅಂತಹದೆ ವಿಸ್ತಾರತೆಯ ಅಂಶದ್ದೆಂದು ಗುರುತಿಸಬಹುದಾಗಿದೆ.

ಯಾರನ್ನೇ ಕುರಿತಾದರೂ ತಂಬಾ ಬೇಸರಕ್ಕೆ ಒಳಗಾದಾಗ ನೋವಿನಿಂದ ಬೇಸತ್ತು ನುಡಿವ ಹಳ್ಳಿಗಾಡಿನ ಸಾಮಾನ್ಯ ಬೈಗುಳ ‘ನಿನ್ನ ಮನೆ ಎಕ್ಕುಟ್ಟೋಗ’ ಎಂಬುದು. ಅಂದರೆ ನಿನ್ನ ಮನೆ, ಮನೆತನ ನಾಶವಾಗಿ ಇಲ್ಲವಾಗಲಿ ಎಂದರ್ಥ. ವಾಚ್ಯಾರ್ಥದಲ್ಲಿ ನೋಡಿದರೂ ಮನೆಯಲ್ಲಿ ಎಕ್ಕ ಹುಟ್ಟುವುದು ಎಂದರೆ, ಮನೆಯವರು ಯಾರೂ ಇಲ್ಲವಾಗಿ ವಾಸಕ್ಕೂ ಇರಲಾಗದೆ, ಕಸಗುಡಿಸುವವರು ಇಲ್ಲದೆ, ಸಾರಿಸುವವರು ಇಲ್ಲದೆ ಬಹುಕಾಲ ಹಾಳುಬೀಳುವುದು. ಹಾಳುಬಿದ್ದ ಆ ಜಾಗದಲ್ಲಿ ಸ್ವಲ್ಪ ಕಾಲದ ನಂತರ ಹಲವು ಮನೆಗಳಲ್ಲಿ ಎಕ್ಕದ ಗಿಡ ಹುಟ್ಟುವುದು ಸಾಮಾನ್ಯ ಸಹಜ. ಹೀಗೆ ಮನೆಯಲ್ಲಿ ಎಕ್ಕದ ಗಿಡ ಹುಟ್ಟುವುದೆಂದರೆ ಮನೆಯವರೆಲ್ಲ ಹಾಳಾಗಿ ವಾಸವಿಲ್ಲದೆ ಹೋದಾಗ. ಅಂದರೆ ‘ನಿಮ್ಮ ಮನೆ ಹಾಳಾಗಲಿ’ ಎಂಬುದು ಹಳ್ಳಿಗರು ಭಾವಿಸುವ ಅರ್ಥ.

ಇದಕ್ಕೆ ವಿರುದ್ಧವಾಗಿ ‘ಒಳ್ಳೇದಾಗಲಿ’ ಎಂಬುದಕ್ಕೆ ‘ನಿಮಗೆ ಒಳ್ಳೇದಾಗಲಿ’ ಎಂಬ ನೇರ ಪದಗಳ ಬಳಕೆಯೇ ಹೆಚ್ಚು. ಆದರೆ, ಇಲ್ಲಿ ನೋಡಿ ರಾಮನಗರ, ಮಾಗಡಿ, ಕನಕಪುರ ಭಾಗದ ಇರುಳಿಗರು(ಇಲ್ಲಿಗರು) ಬುಡಕಟ್ಟಿನ ಜನರಾದಿಯಾಗಿ ಹೆಚ್ಚಿನ ಜನರಲ್ಲಿ ಸಾವಿನ ನಂತರ ಹೂಳಲು(ಮಣ್ಣಿಗೆ) ಹೋದವರೆಲ್ಲ ಹಿಂದಿರುಗಿ ಬರುವಾಗ ಸತ್ತವರ ಮನೆಯ ಒಳಭಾಕ್ಕೆ ಗರಿಕೆ ಕುಡಿ ಎಸೆದು ದೀಪ ನೋಡಿ ಹೋಗುವ ಪದ್ಧತಿ ಇದೆ. ಅದು ಇವರ ವಂಶ- ಮನೆತನ ಗರಿಕೆ ಕುಡಿಯ ಹಾಗೆ ಹಬ್ಬಲಿ, ಹೆಚ್ಚಲಿ, ಬೆಳೆಯಲಿ ಎಂಬುದರ ಸೂಚಕ- ಸಾಂಕೇತಿಕ ಕ್ರಿಯೆ/ ಆಚರಣೆ.

“ಹಾಲುಂಡ ತವರೀಗೆ ಎನೆಂದು ಹರಸಲೆ
ಹೊಳೆದಂಡೇಲಿರುವ ಕರಕೀಯ| ಕುಡಿಯಂಗ
ಹಬ್ಬಾಲೆ ಅವರ ರಸಬಳ್ಳಿ”
– ಎಂದು ತವರನ್ನು ಹರಸುವ ಸಾಕಷ್ಟು ಜನಪದ ಹಾಡುಗಳಿವೆ.

ಗಣೇಶನ ಪ್ರತೀಕವಾಗಿ ಸಗಣಿಯ ಸಣ್ಣ ಮಿದ್ದೆಯನ್ನು ಮೊಳೆ ಮೇಲಾಗಿರುವ ಬುಗುರಿಯಂತೆ, ಗೋಪುರದ ಆಕಾರದಂತೆ ಮಿದ್ದು, ಅದರ ತುದಿಗೆ ಗರಿಕೆ ಕುಡಿಯನ್ನು ಸಿಕ್ಕಿಸಿದ ರೂಪವನ್ನು ‘ಬೆನವ’, ‘ಸಗಣಿ ಬೆನವ’ ಎಂದು ಕರೆಯುತ್ತೇವೆ. ಯಾವುದೇ ಪೂಜೆಗಳು, ಮಂಗಳಕಾರ್ಯಗಳ ಆರಂಭದಲ್ಲಿ ಈ ಬೆನವನ ಆಕಾರ ಇಟ್ಟು ಪೂಜಿಸುವುದು ಇಂದಿಗೂ ಹಳ್ಳಿಗಾಡಿನಲ್ಲಿ ಆಚರಣೆಯಲ್ಲಿದೆ. ಮಧ್ಯ ಕರ್ನಾಟಕದ ಭಾಗದಲ್ಲಿ ಇದನ್ನು ಕೆರಕ/ ಕೆರಕಪ್ಪ ಎಂದೂ ಕರೆಯಲಾಗುತ್ತದೆ. ಗರಿಕೆ ಪದ ದಕ್ಷಿಣ ಭಾರತದ ಎಲ್ಲಾ ದ್ರಾವಿಡ ಭಾಷೆಗಳಲ್ಲೂ ತುಸು ವ್ಯತ್ಯಾಸದಲ್ಲಿ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ಗರಿಕೆಯನ್ನು ಕರಿಕೆ ಎಂದೂ ಕರೆಯುತ್ತೇವೆ. ಈ ಕರಿಕೆಯನ್ನು ಸಿಕ್ಕಿಸಿದ ರೂಪವೆ ಕೆರಕಪ್ಪ. ಕೆರಕ+ ಅಪ್ಪ= ಕೆರಕಪ್ಪ, ಇಲ್ಲಿನ ಅಪ್ಪ ವಿಶೇಷವಾದುದು. ಕನ್ನಡವು ಸೇರಿದಂತೆ ದ್ರಾವಿಡ ಭಾಷೆಗಳಲ್ಲಿ ಮಕ್ಕಳು ತಮ್ಮ ತಂದೆಯನ್ನು ಸಂಭೋಧಿಸುವುದು ‘ಅಪ್ಪ’ ಎಂದೆ. ಸೋಲಿಗರು, ಇರುಳಿಗರು, ಜೇನುಕುರುಬರು ಒಳಗೊಂಡ ನಮ್ಮ ನಾಡಿನ ಇತರ ಅನೇಕ ಸಮುದಾಯಗಳಲ್ಲೂ ಅವರು ಮುಖ್ಯವಾಗಿ ಪೂಜಿಸುವುದು ಕುಲದ ಹಿರಿಯರನ್ನು. ಈ ಹಿನ್ನೆಲೆಯಲ್ಲಿ ಇಟ್ಟು ನೋಡಿದಾಗ ಹಿರಿಯ ಎಂಬ ಅರ್ಥದಲ್ಲಿ ಅಪ್ಪ ಎಂಬ ವಿಶೇಷಣ ಸೇರಿಸಿ ಕೆರಕಪ್ಪ, ಬೆನಪ್ಪ ಹೀಗೆ ಕರೆದಿರುವುದು, ಕರೆಯುತ್ತಿರುವುದನ್ನು ಗಮನಿಸಬಹುದು. ‘ಪಿಳ್ಳಪ್ಪ’ ಎಂಬುದು ಬೆನಪ್ಪನಿಗೆ ಕರೆಯುವ ಇನ್ನೊಂದು ಹೆಸರು. ಪಿಳ್ಳಪ್ಪದಲ್ಲಿ ಪಿಳ್ಳ ಅಥವಾ ಪಿಳ್ಳೆ ಎಂದರೆ ಚಿಕ್ಕದು, ಎಳೆಯದು, ಮಗು ಎಂಬ ಅರ್ಥಗಳಿವೆ.

ಅಷ್ಟಲ್ಲದೆ ಈ ಬೆನವನ ಆಕಾರ, ಬಳಸಲಾದ ಪರಿಕರ, ಬಳಸುತ್ತಿರುವ ರೂಪ, ಬಳಕೆಯ ಉದ್ದೇಶ, ಪ್ರಾಧಾನ್ಯತೆ ಎಲ್ಲವನ್ನು ಅವಲೋಕಿಸಿದಾಗ ಇದು ಅತ್ಯಂತ ಪ್ರಾಚೀನ ಆಚರಣೆಯ ಇಂದಿನ ಮುಂದುವರಿಕೆಯ ಕುರುಹು ಆಗಿ ಇಲ್ಲಿ ಆಚರಣೆಗೊಳ್ಳುತ್ತಿರುವುದನ್ನು, ಆ ಮೂಲಕ ಭಿತ್ತರಗೊಳ್ಳುತ್ತಿರುವುದನ್ನು ನೋಡಬಹುದು. ನಮ್ಮ ಪುರಾತನ ಮಾನವರು ಆಹಾರ ಧಾನ್ಯಗಳ ಬಳಕೆಯನ್ನು ಕಂಡುಕೊಂಡುದು ಏಳು ಸಾವಿರ ವರ್ಷಗಳ ಹಿಂದೆ ಎಂಬುದು ತಿಳಿಯುತ್ತದೆ. ಅದಾದ ಕೆಲವು ಸಾವಿರ ವರ್ಷಗಳ ನಂತರ; ಅಂದರೆ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಬೇಸಾಯ ಪಶುಪಾಲನೆಗೆ ತೊಡಗಿದ ವಿವರಗಳು ನಮ್ಮ ನೆಲೆದಲ್ಲಿ ದೊರೆಯುತ್ತವೆ.

ಈ ಎಲ್ಲವನ್ನು ನೋಡಿದಾಗ ಬೇಸಾಯ ಕಂಡುಕೊಂಡು, ಉಳುಮೆಗೆ ತೊಡಗಿ, ಬೆಳೆ ಬೆಳೆದು, ಸಗಣಿ ಎಂಬುದು ಬರೀ ಸಗಣಿ ಅಲ್ಲ, ಅದು ಫಲವತ್ತಿನ ಗೊಬ್ಬರ/ ಫರ್ಟಿಲಿಟಿ. ಬೆಳೆ ಬೆಳೆಯುವ ನೆಲಕ್ಕೆ ಬಹುಮುಖ್ಯವಾದ ಫಲವತ್ತತೆಯನ್ನು ಅದು ತಂದುಕೊಡುತ್ತದೆ ಎಂದು ಕಂಡುಕೊಂಡುದರ ರೂಪ ಇದು. ತನಗೆ, ತನ್ನ ಬದುಕಿಗೆ ಅತ್ಯಂತ ಮಹತ್ವದ್ದೆಂದು ಭಾವಿಸುದುದೆಲ್ಲವನ್ನು ಅವನು ದೈವವಾಗಿ ಕಂಡಿದ್ದಾನೆ. ಇಂತಹ ರೈತರ ಆಧಾರಿಯಾದ, ಫಲವತ್ತತೆಯ ಪ್ರತೀಕವಾದ ಸಗಣಿಗೆ ಇಡೀ ಸಸ್ಯ ಸಂಕುಲದ ಪ್ರತೀಕವಾದ ಕರಿಕೆ/ ಗರಿಕೆಯ ತುಂಡೊಂದನ್ನು ಸಿಕ್ಕಿಸುವ ಮೂಲಕ ಮಾಡಿಕೊಂಡ ಆಕಾರ/ ಆಕೃತಿಯನ್ನು ತನ್ನೆಲ್ಲಾ ಮುಖ್ಯ ಪೂಜೆಗಳ ಆರಂಭದಲ್ಲಿ ಸಂಕೇತ ರೂಪವಾಗಿ ಬಳಕೆಗೆ ತಂದುಕೊಂಡಿರುವ ಸಾಧ್ಯತೆಯ ಅಂಶವನ್ನು ಗುರುತಿಸಬಹುದು. ಇದು ಮೂರ್ತಿ ಪೂಜೆಯ ಅತ್ಯಂತ ಪ್ರಾಥಮಿಕ ಮತ್ತು ಆದಿಮ ಆರಂಭದ ಮಟ್ಟದ ಒಂದು ಸಂಕೇತ ಆಕಾರ/ ಆಕೃತಿ ಎಂದು ಒಂದು ನೆಲೆಯಿಂದ ಗುರುತಿಸಬಲ್ಲ ಅಂಶ ಇಲ್ಲಿನದು.

ಬೇಸಾಯ ಸಂಬಂಧಿಯಾದ ಎಲ್ಲಾ ಆಚರಣೆಗಲ್ಲೂ ಇರಲೇಬೇಕಾದ, ಈಗಲೂ ಇಡುತ್ತಿರುವ ಆಕೃತಿ ಇದು. ರೈತರ ಬಹುಮುಖ್ಯ ಹಬ್ಬಗಳಲ್ಲೊಂದಾದ ‘ಹೊನ್ನಾರು’ ಅಥವಾ ‘ಹೊನ್ನೇರು’, ಇಲ್ಲವೆ ಯುಗಾದಿಯ ಹಬ್ಬದ ಭಾಗವಾಗಿ ಹೊಲಕ್ಕೆ ಹೋಗಿ ಸಗಣಿ ಬೆನವನ ಇಟ್ಟು, ಉಳುವ ನೇಗಿಲು ಮತ್ತು ಭೂಮಿಯನ್ನು ಪೂಜಿಸಿಯೇ ಬೇಸಾಯ ಆರಂಭಿಸುವ ‘ಮೊದಲ ಬೇಸಾಯ’ದ ಆಚರಣೆಯಲ್ಲಿ ಇಟ್ಟೇ ಇಡುವ ಆಕಾರ ಈ ಗರಿಕೆ ಬೆನವನದು. ಅಲ್ಲದೆ ಬಿತ್ತುವ ಮೊದಲ ದಿನ ಬಿತ್ತುವ ಕೂರಿಗೆ, ಬಿತ್ತುವ ಧಾನ್ಯವ ಇಟ್ಟು ಪೂಜಿಸುವಾಗಲು, ಕಣದ ಪೂಜೆಯ ಸಂದರ್ಭಗಳಲ್ಲೂ ಗರಿಕೆ ಬೆನವ ಇರಲೇಬೇಕಾದ ಮೂರ್ತಿ.

ಮೊದಲ ಪೂಜೆಯ ಈ ಬೆನವ ನಂತರ ಬಳಕೆಗೆ ಬಂದ ಅದೇ ಉದ್ದೇಶದ/ ಪರಿಕಲ್ಪನೆಯ ಗಣೇಶನಿಗೂ ಆರೋಪಿತಗೊಂಡು ಎರಡೂ ಏಕವಾಗಿದೆ. ಈಗಲೂ ಹಳ್ಳಿಗಾಡಿನಲ್ಲಿ ಸಗಣಿ ಬೆನವನ ಪೂಜೆಯೂ ಇದೆ. ಹಾಗೆಯೆ ಮೂರ್ತಿರೂಪದಲ್ಲಿ ಕೂರಿಸುವ ಗಣೇಶನ ಆರಾಧನೆಯೂ ಇದೆ. ಗಣೇಶನೇ ಬೇರೆ ಬೆನವನೆ ಬೇರೆ. ಮೊದಲ ಪೂಜೆಯ ಅರ್ಥದ ಸಾಮ್ಯದಿಂದ ಎರಡೂ ಒಂದರಲ್ಲಿ ಒಂದು ಸೇರಿದಂತಿದೆ.

ಆ ಪೂಜಾರ್ಹ ಎನಿಸಿರುವ ಬೆನಕನಿಗೆ ಎಲ್ಲಾ ಪೂಜೆಗಳ ಮೊದಲು ಇದನ್ನೆ ಪೂಜಿಸುವುದಿದೆ. ಹಲವು ಬುಡಕಟ್ಟುಗಳಲ್ಲಿ ವಿಶೇಷವಾಗಿ ಇರುಳರಲ್ಲಿ ಮೂರ್ತಿರೂಪದ ಸಹಜವಾದ ದೇವರೇ ಇದು. ಇರುಳಿಗರು ತಮ್ಮ ಕಷ್ಟ- ಸುಖ, ಅನಾರೋಗ್ಯದ ಪರಿಹಾರ, ಕಣಿ/ ಭವಿಷ್ಯ ತಿಳಿಯಲು ಮಾಡುವ ‘ಕಣಿಶಾಸ್ತ್ರಕ’ಕ್ಕೆ ಎದುರಿಗೆ ಈ ಗರಿಕೆ ಬೆನವ ಇರಲೇಬೇಕು. ಇದನ್ನು ಅವರು ಪಿಳ್ಳೆ, ಪಿಳ್ಯಪ್ಪ, ಪಿಳ್ಳಾರಿ ಎಂದು ಕರೆಯುತ್ತಾರೆ.

ಫಲವತ್ತತೆಯ ಸಂಕೇತವಾದ ಸಗಣಿ ಹಾಗೂ ಸಸ್ಯ ಸಂಕುಲದ ಸಂಕೇತ ಗರಿಕೆ; ಈ ಎರಡರ ಸಮತೂಕದ ಸಂಯೋಜನೆಯ ಆಕಾರ; ಅಂದರೆ ಇನ್ನೊಂದರ್ಥದಲ್ಲಿ ಸಗಣಿ ಗರ್ಭವಾದರೆ, ಗರಿಕೆ ಮೊಳಕೆ. ಸಗಣಿ ಮೊಟ್ಟೆಯೊಳಗಿನ ಲೋಳೆಯಂತಾದರೆ, ಗರಿಕೆ ಮೊಟ್ಟೆಯೊಳಗಿನ ಭಂಡಾರದಂತೆ; ಜೀವ- ಶಕ್ತಿಗಳ ಪ್ರತೀಕದಂತೆ; ಸೃಷ್ಟಿ ಪ್ರಕೃತಿಯ ಪ್ರತಿಮೆಯಂತೆ. ಇದು ಪ್ರಾಚೀನ ಪಶುಪಾಲಕ ಹಾಗೂ ಕೃಷಿಕರ ಆಶಯವಾಗಿರುವಂತೆ ಕಾಣುತ್ತದೆ.

ಗರಿಕೆ 12-30 ಸೆಂ.ಮೀ. ಎತ್ತರ ಬೆಳೆವ, ಹೆಚ್ಚು ಪೌಷ್ಟಿಕವಾದ ಸಾರ್ವಕಾಲಿಕ ಸಸ್ಯ. ವಿಶಾಲವಾಗಿ ಹರಡುವ, ಮೈದಾನ, ಗುಡ್ಡಪ್ರದೇಶಗಳೆರಡರಲ್ಲಿ ಬೆಳೆವ ಗುಣವಳ್ಳದ್ದು. ಸಂಸ್ಕೃತದಲ್ಲಿ ‘ದೂರ್ವ’ ಎಂದರೆ ಇಂಗ್ಲೀಷಿನಲ್ಲಿ Cynodon Dactyolon ಎಂದೆನಿಸಿಕೊಳ್ಳುವ ಈ ಗರಿಕೆ ಪಾಂಡವರು ವಾರಣಾವತ ಹೊಕ್ಕಾಗ ಎದುರುಗೊಂಡ ಪುರಜನರು ತಂದಿದ್ದ ಮಂಗಳ ವಸ್ತುಗಳಲ್ಲಿ ಇದು ಒಂದಾಗಿದ್ದುದು ಗಮನಾರ್ಹ’ (ಬಿ.ಜಿ.ಎಲ್. ಸ್ವಾಮಿ: ಸಸ್ಯ ಪುರಾಣ).

ನಗರದವರ ಕಣ್ಸೊಬಗಿನ ಗರಿಕೆ, ಹಳ್ಳಿಗರಿಗೆ ಒಂದು ಕಳೆ ಹುಲ್ಲು. ಗರಿಕೆ ಹತ್ತಿದ ಎರೆ ನೆಲದ ಕಳೆ ತೆಗೆವುದು ಕಷ್ಟ. ಆದರೆ, ಇಂತಹ ಕಳೆ ಗರಿಕೆ ಔಷಧಿ ಸಸ್ಯವಾಗಿರುವುದು ಒಂದು ವಿಶೇಷ. ಗೀರಿದ, ತರಚಿದ, ರಕ್ತ ವಸರುವ ಗಾಯಗಳಿಗೆ ಇದರ ರಸ ಒಳ್ಳೆಯ ಔಷಧ. ಸಕ್ಕರೆ ಕಾಯಿಲೆ/ ಸಿಹಿಮೂತ್ರ ರೋಗಕ್ಕೆ ಇದು ಒಳ್ಳೆಯ ಮದ್ದು. ಗರಿಕೆಯ ಹುಲ್ಲು, ಬೇರು, ಎಲೆಗಳಿಂದ ತಯಾರಿಸಿದ ಕಷಾಯವು ರಕ್ತಮೂತ್ರಕ್ಕೆ, ಬಿಳಿ ಸೆರಗು, ಆಮಶಂಕೆಗಳಿಗೆ ಉತ್ತಮ ಔಷಧ.

‘ಬೆಳಗಾಗ ಎದ್ದು ಒಂದು ಹಿಡಿ ಹಸುರು ಕರಿಕೆ ಹುಲ್ಲನ್ನು ಕಲ್ಲಿನಿಂದ ಜಜ್ಜಿ ತೆಗೆದ ರಸವನ್ನು ಕುಡಿದರೆ (40 ದಿನ) ರಕ್ತವೃದ್ಧಿಯಾಗುತ್ತದೆಯೆಂದು ಹೇಳುತ್ತಾರೆ. ಈ ವಿಧಾನವನ್ನು ಅಳಲೆಕಾಯಿ ಪಂಡಿತನ ಕಸುಬು ಎಂದು ತಾತ್ಸಾರ ಮಾಡಬಾರದು. ಅಮೇರಿಕಾದಲ್ಲಿ ಈಚೀಚೆಗೆ ಗ್ರಾಸ್ ಎಕ್ಸಾಟ್ರಾಕ್ಟ್ ಎಂಬುದೊಂದು ಇಂಜಿಕ್ಷನ್ ತಯಾರಿಯಾಗಿದೆ. ಗರಿಕೆಯ ಹುಲ್ಲಿನಿಂದ ಅನೀಮಿಯ ರೋಗಿಗಳಿಗೆ ಐದಾರು ಇಂಜೆಕ್ಷನ್ ನೀಡಿದರೆ ಆರೋಗ್ಯ ಮರುಕಳಿಸುತ್ತದೆ.’*2

ಹೀಗೆ ಗರಿಕೆ ನಮ್ಮಲ್ಲಿ ಹಲವು ಬಗೆಗಳಿಂದ ಉಪಯುಕ್ತವಾಗಿ ಪಾಲ್ಗೊಳ್ಳುತ್ತದೆ. ನಾವು ಕಳೆಯೆನ್ನುವ ಅನೇಕ ಸಸ್ಯಗಳು ಔಷಧಿಗಳಾಗಿರುವುದು ವಿಶೇಷ. ಕಂಡವರಿಗೆ, ಅರಿತವರಿಗೆ ಉಂಟೆಂದರೆ ಉಂಟು.

Categories
ಕೃಷಿ ಸಂಸ್ಕೃತಿ-ಸಮುದಾಯ

ಗಿರಿಜನರು

ಗಿರಿಜನರು ಹಿಂದೆ ಗಿರಿಜನರಾಗಿರಲಿಲ್ಲ. ಆದಿವಾಸಿಗಳು ಕಾಡುಗಳಲ್ಲಿ ಬದುಕುತ್ತಿರಲಿಲ್ಲ. ಕೃಷಿ ವಿಸ್ತರಣೆಯ ಒತ್ತಡಗಳಿಂದಾಗಿ ಇವರನ್ನೆಲ್ಲ ತುಂಬ ಹಿಂದೆಯೇ ನಾವು ಕಾಡುಮೇಡುಗಳಿಗೆ ಅಟ್ಟಿಬಿಟ್ಟಿದ್ದೆವು. ಈಗ ಅಲ್ಲಿಂದಲೂ ಅವರನ್ನು ಎತ್ತಂಗಡಿ ಮಾಡಲಾಗುತ್ತಿದೆ. ಭಾರತದ ಭೂಪಟದ ನಿರಿಗೆಗಳನ್ನೆಲ್ಲ ಇಸ್ತ್ರಿ ಹೊಡೆದು ಸರಿಸಪಾಟು ಮಾಡುವ ಈ ಯತ್ನದಲ್ಲಿ ನಿಸರ್ಗ ಪರಂಪರೆಗಳೇ ಅಳಿಸಿ ಹೋಗುತ್ತವೆ. ಇಷ್ಟು ಮುಂದುವರೆದಿದ್ದು ಸಾಲದೆ? ಕರ್ನಾಟಕದಲ್ಲಿ ಎಲ್ಲೆಲ್ಲಿ ಭತ್ತದ ತಳಿ ವೈವಿಧ್ಯ ಉಳಿದುಕೊಂಡಿದೆ ಎಂಬುದರ ಬಗ್ಗೆ ನಮ್ಮ ನಮ್ಮಲ್ಲಿ ಚರ್ಚೆ ನಡೆಯುತ್ತಿತ್ತು. ಆದಿವಾಸಿಗಳ ಹಾಗೂ ಗಿರಿಜನರ ‘ಹಾಡಿ’ಗಳಲ್ಲಿ ಸಾಕಷ್ಟು ತಳಿ ವೈವಿಧ್ಯ ಇದೆ ಎನ್ನುವಾಗ ನಮ್ಮ ಮಿತ್ರ ಶಿವಾನಂದ ಕಳವೆ, ತೀರಾ ಸಹಜ ಎಂಬಂತೆ, ಒಂದು ಮಾತನ್ನು ಎಸೆದರು: ‘ಹೌದು, ಯಾವ ಯಾವ ಊರಿಗೆ ರಸ್ತೆ ಇಲ್ಲವೋ ಆ ಊರುಗಳಲ್ಲೆಲ್ಲ ತಳಿ ವೈವಿಧ್ಯ ಜಾಸ್ತಿ ಇದೆ’ ಅಂದರು.

ಇಂದಿನ ಬದುಕಿನ ವ್ಯಂಗ್ಯವನ್ನು, ವೈರುಧ್ಯವನ್ನು ಇದಕ್ಕಿಂತ ಸೂಚ್ಯವಾಗಿ ಹೇಳಲು ಸಾಧ್ಯವಿದೆಯೆ? ತಳಿವೈವಿಧ್ಯವನ್ನೂ ಉಳಿಸಿಕೊಳ್ಳಬೇಕು, ಸಂಪರ್ಕ ವ್ಯವಸ್ಥೆಯನ್ನೂ ಸುಧಾರಿಸಬೇಕೆಂದರೆ ಸಾಧ್ಯವೆ? ಗಿರಿಜನರು ನಮ್ಮ ಜೀವ ಖಜಾನೆ ಇದ್ದಂತೆ. ಅವರ ಸಂಸ್ಕೃತಿ, ಪರಂಪರೆ, ಗಿಡ-ಬಳ್ಳಿ-ಪಶು-ಪಕ್ಷಿಗಳ ಬಗೆಗಿನ ಅವರ ಜ್ಞಾನ ಹಾಗೂ ಭಕ್ತಿಪೂರ್ವಕ ಸಂಬಂಧ ಎಲ್ಲವೂ ಗ್ರೇಟ್. ಹಾಗೆಯೇ ಅವರ ಬದುಕೂ ತೀರ ದುರ್ಭರ. ಹತ್ತು ಮಾರು ದೂರ ಸಾಗಲಿಕ್ಕೂ ಅವರು ಹತ್ತಬೇಕು, ಇಲ್ಲವೆ ಇಳಿಯಬೇಕು. ನೀರು ಸುಲಭಕ್ಕೆ ಸಿಗುವುದಿಲ್ಲ. ವರ್ಷದ ಆರಾರು ತಿಂಗಳು ಆಹಾರವೂ ಸುಲಭಕ್ಕೆ ಸಿಗುವುದಿಲ್ಲ. ಮಳೆ ಚಳಿ ಎಲ್ಲವೂ ಅಲ್ಲಿ ಜಾಸ್ತಿ. ಕಾಡುಪ್ರಾಣಿಗಳ ಕಾಟ ತೀರಾ ಜಾಸ್ತಿ ಇದ್ದರೆ ಗರ್ಭಿಣಿ, ಬಾಣಂತಿ, ಅಜ್ಜಿ, ಮೊಮ್ಮಗು ಕೂಡ ಮರ ಹತ್ತಿ ಕೂರಬೇಕು. ಗಾಯ-ರೋಗಗಳಿಗೆ ತುರ್ತು ಔಷಧ ಅಥವಾ ಚಿಕಿತ್ಸೆ ಸಿಗುವುದಿಲ್ಲ. ಇಷ್ಟೆಲ್ಲ ಕಷ್ಟ ಎದುರಿಸಿ ಈ ಗಿರಿಜನರು ಯಾಕೆ ಗಿರಿಜನರಾಗಿಯೇ ಉಳಿದಿದ್ದಾರೆ?

(ಇದು ಸಿಲ್ಲಿ ಪ್ರಶ್ನೆ ಎನ್ನಿಸಬಹುದು. ‘ಚೀನೀಯರೆಲ್ಲ ಯಾಕೆ ಚೀನೀಯರ ಥರಾನೇ ಕಾಣುತ್ತಾರೆ?’ ಎಂಬ ಪ್ರಶ್ನೆಯನ್ನು ಕೆದಕಿದವರಿಗೆ ಅನೇಕ ಕರಾಳ ಸತ್ಯಗಳು ತೆರೆದುಕೊಳ್ಳುತ್ತವೆ. ಇಡೀ ಅಷ್ಟುದೊಡ್ಡ ಚೀನಾ ರಾಷ್ಟ್ರದಲ್ಲಿ ಚೀನೀ ಮುಖದವರನ್ನು, ಮಂಡಾರಿನ್ ಭಾಷಿಕರನ್ನು ಬಿಟ್ಟರೆ ಬೇರೆ ಯಾರೂ ಉಳಿಯದ ಹಾಗೆ ಸಾವಿರ ವರ್ಷಗಳ ಹಿಂದೆಯೇ ಬಹುದೊಡ್ಡ ಜನಾಂಗೀಯ ನರಮೇಧ ನಡೆದುಹೋಗಿತ್ತು. ಅದು ಹಿಟ್ಲರನ ನರಮೇಧಕ್ಕಿಂತ ವಿಶಾಲ ವ್ಯಾಪ್ತಿಯದೇ ಇದ್ದೀತ್ತೇನೊ.)

ಗಿರಿಜನರು ಹಿಂದೆ ಗಿರಿಜನರಾಗಿರಲಿಲ್ಲ. ಅವರೆಲ್ಲ ನಮ್ಮ ನಿಮ್ಮ ಪೂರ್ವಜರ ಹಾಗೆಯೇ ಹಾಯಾಗಿ ನದಿತೀರಗಳಲ್ಲೋ ಜಲಸಿರಿಯುಳ್ಳ ಮೈದಾನಗಳಲ್ಲೋ ಗಡ್ಡೆಗೆಣಸು, ಹಣ್ಣುಹಂಪಲು ತಿನ್ನುತ್ತ, ಬೇಟೆಯಾಡುತ್ತ ಸರಳವಾಗಿ ಬದುಕಿದ್ದವರು. ಮುಂದೆ ಏನಾಯ್ತು ಅಂದರೆ ಪ್ರಬಲ ಕೋಮಿನವರು ಕೃಷಿಗಾಗಿ ಜಮೀನು ಹುಡುಕುತ್ತ, ತಳವೂರುತ್ತ, ನೆಲವಿಸ್ತರಣೆ ಮಾಡುತ್ತ ಬಂದರು. ಫೈಟ್ ಮಾಡಲು ಶಕ್ತಿಯಿಲ್ಲದ, ಅಥವಾ ಮನುಷ್ಯರ ವಿರುದ್ಧ ಶಸ್ತ್ರ ಎತ್ತದ ಬಡಪಾಯಿಗಳೆಲ್ಲ ದೂರ ಸರಿಯುತ್ತ, ಸರಿಯುತ್ತ ಗುಡ್ಡ ಏರಬೇಕಾಯಿತು. ಆಥವಾ ಘನಘೋರ ಅರಣ್ಯದೊಳಕ್ಕೆ ನುಗ್ಗಿ ಅಲ್ಲೇ ಹೇಗೋ ಬದುಕಲು ಕಲಿತು ಆದಿವಾಸಿಗಳೆನಿಸಿಕೊಳ್ಳಬೇಕಾಯಿತು. ಅವರಿಗೆ ಕತ್ತಿ ದೊಣ್ಣೆ ಹಿಡಿದ ಮನುಷ್ಯರ ಸಹವಾಸಕ್ಕಿಂತ ಹುಲಿ-ಚಿರತೆ-ಆನೆಗಳ ಸಹವಾಸವೇ ಮೇಲೆಂದು ಅನ್ನಿಸಿರಬೇಕು. ಏಕೆಂದರೆ ವನ್ಯಪ್ರಾಣಿಗಳು ವಿನಾಕಾರಣ ಹಿಂಸೆಗೆ ಇಳಿಯುವುದಿಲ್ಲ. ಮರಿಗಳು ಬೆಳೆದಿದ್ದರೆ, ಹೊಟ್ಟೆ ತುಂಬಿದ್ದರಂತೂ, ನೀವು ಹತ್ತಿರ ಸುಳಿದರೂ ಗುರ್ರೆನ್ನುವುದಿಲ್ಲ. ಮನುಷ್ಯ ಹಾಗಲ್ಲವಲ್ಲ.

ಅಂತೂ ಆಧುನಿಕ ನಾಗರಿಕತೆಯೇ ಗಿರಿಜನ-ಆದಿವಾಸಿಗಳನ್ನು ಸೃಷ್ಟಿಸಿದೆ ಅಂದಂತಾಯಿತು. ಈಗ ಅವರನ್ನು ಕಾಡುಮೇಡುಗಳಿಂದಲೂ ಒಕ್ಕಲೆಬ್ಬಿಸುವ ಯತ್ನ ನಡೆದಿದೆ. ಕಳೆದ ಐದಾರು ವರ್ಷಗಳಲ್ಲಿ ಗಣಿಗಾರಿಕೆಯ ಹುಚ್ಚುಪೈಪೋಟಿ ಅದೆಷ್ಟು ತೀವ್ರವಾಗಿದೆ ಎಂದರೆ ಅಂಥ ತೀರ ಒಳನಾಡುಗಳನ್ನೂ ಹುಡುಕಿಕೊಂಡು ಹೋಗಿ ಬುಲ್ಡೋಜರ್‌ಗಳು, ಅರ್ಥ್‌ಮೂವರ್‌ಗಳನ್ನು ನುಗ್ಗಿಸಿ ಅಲ್ಲಿದ್ದ ಜೀವಿ ವೈವಿಧ್ಯವನ್ನು ಬಗ್ಗು ಬಡಿದು ಗಣಿಧನಿಗಳ ‘ಸಾಮ್ರಾಜ್ಯ ವಿಸ್ತರಣೆ’ ನಡೆಯುತ್ತಿದೆ.

ಬೇಕಿದ್ದರೆ ಗಮನಿಸಿ. ನಮ್ಮ ದೇಶದಲ್ಲಿ ಗಣಿ ಸಂಪತ್ತು ಎಲ್ಲೆಲ್ಲಿದೆ ಎಂಬುದನ್ನು ಸೂಚಿಸುವ ಒಂದು ನಕಾಶೆ ತಯಾರಿಸಿ. ಹಾಗೆಯೇ ಜೀವಿವೈವಿಧ್ಯ, ವನ್ಯಸಂಪತ್ತು ಎಲ್ಲುಳಿದಿದೆ ಎಂಬುದರ ಗುರುತಿಸಿ. ಖನಿ
ಜವನ್ನು ಗುರುತಿಸಿದ ಸ್ಥಳದಲ್ಲೇ ಇವೂ ಬರುತ್ತವೆ-ತುಸು ಹೆಚ್ಚುಕಮ್ಮಿ. ಹಾಗೆಯೇ ನಮ್ಮ ದೇಶದ ಆದಿವಾಸಿಗಳು ಹಾಗೂ ಗಿರಿಜನರು ವಾಸಿಸುವ ತಾಣವನ್ನೂ ಅದೇ ನಕಾಶೆಯ ಮೇಲೆ ಗುರುತಿಸಿ. ಬಹುಮುಖ್ಯ ಜಲಮೂಲಗಳು ಎಲ್ಲಿವೆ ಎಂಬುದನ್ನೂ ಗುರುತಿಸಿ. ಎಲ್ಲವೂ ಒಂದೇ ಕಡೆ ಕಾಣುತ್ತವೆ. ಅಂದರೆ, ಎಲ್ಲಿ ಗಿರಿಜನರು- ಆದಿವಾಸಿಗಳು ಇದ್ದಾರೋ ಅಲ್ಲೇ ಅಳಿದುಳಿದ ವನ್ಯ ಸಂಪತ್ತು/ಜೀವಿ ವೈವಿಧ್ಯ ಇದೆ, ಅಲ್ಲೇ ಜಲಮೂಲಗಳೂ ಇವೆ. ಅಲ್ಲೇ ಅಳಿದುಳಿದ ಖನಿಜ ಸಂಪತ್ತೂ ಇದೆ. ಹಿಂದೆ ಮುಂದೆ ನೋಡದೆ ನೀವು ಅಲ್ಲಿ ಡೈನಮೈಟ್ ಇಟ್ಟರೆ ಒಂದೇ ಏಟಿಗೆ ನಾಲ್ಕಾರು ಬಗೆಯ ಸಂಪತ್ತಿಗೆ ನೀವು ಕೊಳ್ಳಿ ಇಟ್ಟಂತಾಗುತ್ತದೆ. ಈಗಂತೂ ಸಾರಾ ಸಗಟಾಗಿ ಡೈನಮೈಟ್‌ಗಳನ್ನು ಇಡುವ ಕೆಲಸ ನಡೆದಿದೆ.

ಆಧುನಿಕ ಬದುಕಿನ ಬಹುದೊಡ್ಡ ವ್ಯಂಗ್ಯದೊಂದಿಗೆ ನಾವೀಗ ಮುಖಾಮುಖಿ ಆಗುತ್ತಿದ್ದೇವೆ. ನಮಗೆ ರಸ್ತೆ ಬೇಕು. ಹೊರಜಗತ್ತಿನೊಂದಿಗೆ ಕುಗ್ರಾಮಗಳನ್ನು ಬೆಸೆಯಬಲ್ಲ ಸಂಚಾರ ಸಾಧನ ಬೇಕು. ಬಸ್ ಇಲ್ಲದಿದ್ದರೆ, ಟೆಂಪೊ, ಲಾರಿಗಳಾದರೂ ಚಲಿಸಬಲ್ಲ ಸರ್ವಋತು ರಸ್ತೆ, ಸೇತುವೆ ಬೇಕು.

ಅದೇ ಕಾಲಕ್ಕೆ ನಮ್ಮ ಮುಂದಿನ ಪೀಳಿಗೆಗಾಗಿ ಜೀವಿ ವೈವಿಧ್ಯ ಉಳಿಯಬೇಕು. ಅದು ಕುದುರೆಮುಖದಲ್ಲಿ, ಸಂಡೂರಿನಲ್ಲಿ, ಒರಿಸ್ಸಾದ ಋಷ್ಯಮೂಕ ಪರ್ವತದಲ್ಲಿ, ಝಾರ್ಖಂಡದಲ್ಲಿ, ವಿದರ್ಭದಲ್ಲಿ ಮಾತ್ರ ಉಳಿದಿದ್ದರೆ ಅವನ್ನು ಉಳಿಸಿಕೊಳ್ಳಬೇಕು. ಅದು ಸಾಧ್ಯವಾಗಬೇಕು ಎಂದರೆ ಅಲ್ಲಿ ರಸ್ತೆ ನಿರ್ಮಾಣ ಆಗಕೂಡದು. ಬುಲ್‌ಡೋಜರ್ ಹೋಗಕೂಡದು. ಜಗತ್ತಿನ ಜೀವವೈವಿಧ್ಯವನ್ನು ಉಳಿಸಬೇಕೆಂದಿದ್ದರೆ ರಸ್ತೆಯೇ ಸಾಧ್ಯವಿಲ್ಲದ ತಾಣವನ್ನು ನೀವು ಹುಡುಕಬೇಕು ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ. ಇದೀಗ ಉತ್ತರ ಧ್ರುವದಿಂದ ೯೬೬ ಕಿಮೀ ದೂರದ ಸ್ವಾಲ್‌ಬಾರ್ಡ್ ಎಂಬಲ್ಲಿ ಹಿಮಪರ್ವತವನ್ನು ಕೊರೆದು ಒಂದು ಬಹುದೊಡ್ಡ ಜೀವಖಜಾನೆಯನ್ನು ಸೃಷ್ಟಿಸಲಾಗುತ್ತಿದೆ. ಶೂನ್ಯದ ಕೆಳಗೆ ೧೮ ಡಿಗ್ರಿ ಸೆ. ತಂಪಿರುವ ಅಲ್ಲಿ ೩೦ ಲಕ್ಷ ತಳಿಗಳ ಬೀಜಗಳನ್ನು ಇಡಲೆಂದು ಹಿಮವನ್ನು ಕೊರೆಯಲಾಗಿದೆ. ಅಲ್ಲಿನ ನಿರ್ಜನ, ಶೀತಲನರಕಕ್ಕೆ ಹೋಗಲು ರಸ್ತೆಯೇ ಇಲ್ಲವಾದ್ದರಿಂದ ಆ ಖಜಾನೆಗೆ ಬೀಗ ಕೂಡ ಬೇಕಿಲ್ಲವಂತೆ.

ಇತ್ತ ಭಾರತದ ಕುಗ್ರಾಮಗಳನ್ನು ಆಧುನಿಕಗೊಳಿಸುವ ಯತ್ನ ನಡೆದಿದೆ. ಅಲ್ಲಿಗೆ ಮೂಲ ಸೌಕರ್ಯ ಒದಗಿಸಿದರೆ ‘ನಿಮಗೇ ಅನುಕೂಲ’ ಎಂದು ಬಹುರಾಷ್ಟ್ರೀಯ ಬಿಗ್ ಬಿಸಿನೆಸ್ ಕಂಪನಿಗಳಿಗೆ ಅರ್ಥತಜ್ಞ ಅಮರ್ತ್ಯ ಸೆನ್ ಸಲಹೆ ನೀಡುತ್ತಾರೆ. ಹಳ್ಳಿಗಳತ್ತ ಉತ್ತಮ ರಸ್ತೆಗಳಾದರೆ ಕೃಷಿ ಉತ್ಪನ್ನಗಳ ಸಾಗಾಟ ಸುಲಭ, ಉದ್ಯೋಗ ನಿರ್ಮಿತಿಯೂ ಸುಲಭ ಎಂದು ಕೃಷಿತಜ್ಞ ಸ್ವಾಮಿನಾಥನ್ ಹೇಳುತ್ತಾರೆ. ಹಾಗೆ ಹಳ್ಳಿಗರನ್ನು ನಗರಗಳತ್ತ ಸೆಳೆಯುವ ಹೆದ್ದಾರಿಗಳನ್ನು ನಿರ್ಮಿಸುವ ಬದಲು, ನಗರಕ್ಕೆ ಬಂದ ಹತವಾಸಿಗಳನ್ನು ಹಳ್ಳಿಗಳತ್ತ ಹೊರಡಿಸುವ ಕಿರುದಾರಿಗಳನ್ನು ನಿರ್ಮಿಸಿದರೆ ಹೇಗೆ? ರಾಳೆಗಾಂವ್ ಸಿದ್ದಿಯಲ್ಲಿ, ರೂಪಾರೆಲ್ ನದಿತಟಾಕದಲ್ಲಿ ಅಂಥ ಯತ್ನಗಳು ಸಫಲವಾಗಿವೆ. ನಿಸರ್ಗವನ್ನು ಧೂಲೀಪಟಗೊಳಿಸುವ ಯಂತ್ರಗಳನ್ನು ಗುಡ್ಡಕ್ಕೆ ಅಟ್ಟುವ ಬದಲು ಬೋಳುಗುಡ್ಡಗಳನ್ನು ಸಮೃದ್ಧಗೊಳಿಸುವ ಕೈಗಳು ನಮಗಿಂದು ಬೇಕಾಗಿವೆ. ನಾವಿಂದು ಎಷ್ಟು ಲಕ್ಷ ಟನ್ ಅದುರನ್ನು ರಫ್ತು ಮಾಡುತ್ತಿದ್ದೇವೆಯೋ ಸುಮಾರು ಅಷ್ಟೇ ಲಕ್ಷ ಟನ್ ಜೈವಿಕ ಸಾಮಗ್ರಿ ನಮ್ಮ ನಗರಗಳಿಗೆ ಅಗತ್ಯವಿದೆ. ಕಾಗದ, ಬಟ್ಟೆ, ಔಷಧ, ಇಂಧನ, ಕಟ್ಟಡ ಸಾಮಗ್ರಿ, ಪ್ಲಾಸ್ಟಿಕ್ ಎಲ್ಲವನ್ನೂ ಒದಗಿಸಬಲ್ಲ, ಕೋಟ್ಯಂತರ ಕೈಗಳಿಗೆ ಉದ್ಯೋಗ ನೀಡಬಲ್ಲ, ಋತುಮಾನಗಳನ್ನು ಸಮತೋಲ ಇಡಬಲ್ಲ, ಯಾವ ಕೃತಕ ಒಳಸುರಿಯಿಲ್ಲದೆ ಬೆಳೆಯಬಲ್ಲ ಸಹಜ ಜೀವಧಾಮಗಳನ್ನು, ಜೀವವೈವಿಧ್ಯ ರಕ್ಷಣೆಯ ಚಿರಂತನ ಖಜಾನೆಗಳನ್ನು ನಾವು ಸೃಷ್ಟಿಸಲಾರೆವೆ?

ಸೌಜನ್ಯ: ‘ಅಡಿಕೆ ಪತ್ರಿಕೆ’ಯ ಸೆಪ್ಟೆಂಬರ್ ೨೦೦೯ರ ಸಂಚಿಕೆಯ ‘ರಿಕ್ತ-ವ್ಯತಿರಿಕ್ತ’ ಅಂಕಣ ಬರಹ