Categories
ಕನ್ನಡ ಡಾ|| ಜಿ ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಕೃತಿ ಸಂಚಯ ಸಮಗ್ರ ಗದ್ಯ 4 ೪. ಗಂಗೆಯ ಶಿಖರಗಳಲ್ಲಿ ೪೦೯ - ೫೧೭

ವಿಶಾಲ ಬದರಿಗೆ

ಮಂಜು ಹಿಂಜರಿದ ಕಣಿವೆಗಳ ಮಧ್ಯೆ, ಕಿಲಕಿಲ ನಗುವ ಬಾಲಸೂರ‍್ಯನ ಚಿನ್ನದ ಬೆಳಕಿನಲ್ಲಿ ಅಲಕನಂದಾ ನದಿಯ ನೊರೆಗರೆವ ನೀರೆಲ್ಲಾ ಬಂಗಾರವಾಗುತ್ತಿದ್ದಾಗ, ನದಿಯ ಪಕ್ಕದಲ್ಲೇ ನಮ್ಮ ಪ್ರಯಾಣ ಬದರಿಯ ದಿಕ್ಕಿನಲ್ಲಿ ಸಾಗಿತ್ತು. ಹಿಂದಿನ ದಿನ ಮಂದಾಕಿನಿ ತೀರದ ಉದ್ದಕ್ಕೂ ಕೇದಾರದಿಂದ ಉರುಳಿ ಬಂದ ನಾವು, ಈಗ (೨೧.೫.೧೯೯೪) ಅಲಕನಂದಾ ನದಿಯ ದಡದಲ್ಲಿ ಬದರಿಯ ಕಡೆಗೆ ಏರುತ್ತಿದ್ದೆವು. ದಾರಿಯುದ್ದಕ್ಕೂ ಹಸುರೇ ಇಲ್ಲದ ದೈತ್ಯಾಕಾರದ ಪರ್ವತಗಳು ತಮ್ಮ ಕಾಲಬುಡದಲ್ಲಿ ತೊದಲುತ್ತಾ ಹರಿಯುವ ಹೊಳೆಗಳನ್ನು ಅತ್ಯಂತ ನಿರ್ಲಕ್ಷ್ಯದಿಂದ ನೋಡುವಂತೆ ತೋರಿದವು. ಈ ಬೃಹದಾಕಾರದ ಪಾತಾಳದಾಕಳಿಕೆಗಳ ಮಧ್ಯೆ ಮೋಟಾರು ದಾರಿಗಳು, ಇಲ್ಲಿ ಕಂಡು ಅಲ್ಲಿ ಮರೆಯಾಗಿ, ಹೇಗೋ ತಪ್ಪಿಸಿಕೊಂಡು ಪಲಾಯನ ಮಾಡುವ ಪುಕ್ಕಲುಗಳಂತೆ ಕಾಣುತ್ತಿದ್ದವು. ಈ ದಾರಿಗಳ ಮೇಲೆ ಎದೆಗೆಡದ ಧೈರ್ಯದ ತುಣುಕುಗಳಂತೆ, ಅದೆಷ್ಟೋ ವಾಹನಗಳು ಧೂಳೆಬ್ಬಿಸಿಕೊಂಡು ಚಲಿಸುತ್ತಿದ್ದವು. ಶಿಖರಗಳ ಮೇಲೆ ಶಿಖರಗಳನ್ನು ತೆರೆಯುವ, ಕಣಿವೆಯ ನಂತರ ಕಣಿವೆಯನ್ನು ಬಿಚ್ಚುವ ದಾರಿಯಲ್ಲಿ, ವಾಹನಗಳು ಅಲ್ಲಲ್ಲಿ ಮೇಲಿನಿಂದ ಧಡಾರನೆ ಕುಸಿದು ಬಿದ್ದು ದಾರಿಯನ್ನು ತಡೆದ ಬಂಡೆ ಕಲ್ಲು ಮಣ್ಣುಗಳ ರಾಶಿಯ ಮುಂದೆ ಸ್ತಂಭೀಭೂತವಾಗಿ ನಿಂತು, ರಸ್ತೆಯ ಕೆಲಸಗಾರರು ಅದನ್ನೆಲ್ಲಾ ತೆಗೆದು ರಸ್ತೆ ತೆರವು ಮಾಡಿದ ನಂತರ ಮುಂದಕ್ಕೆ ಚಲಿಸುತ್ತಿದ್ದವು. ಹೀಗಾಗಿ ಈ ಪ್ರಯಾಣ ನಾವೆಣಿಸಿದಷ್ಟು ಸರಾಗವಾಗಿ ಸಾಗುವಂತಿರಲಿಲ್ಲ. ಮುಂದಿನ ಹಾಗೂ ಎದರುಗಡೆಯಿಂದ ಬರುವ ವಾಹನಗಳು ಎಬ್ಬಿಸಿದ ಧೂಳಿನ ಮೋಡ ಕರುಗುವವರೆಗೆ ನಿಧಾನಿಸಿ, ವಾಹನಗಳು ತಮ್ಮ ವೇಗವನ್ನು ಮತ್ತೆ ಹೆಚ್ಚಿಸಿಕೊಳ್ಳಬೇಕಾಯಿತು. ಎರಡೂ ಬದಿಗೆ ಕಣ್ಣನ್ನು ತಣಿಸುವ ಹಸುರಿಲ್ಲದ ದಾರಿಯಲ್ಲಿ, ದಾರಿಯುದ್ದಕ್ಕೂ ಪಾತಾಳದಲ್ಲಿ ಪ್ರವಹಿಸುವ ಅಲಕನಂದಾ ನದಿಯ ಪಕ್ಕದಲ್ಲಿ ಪ್ರಯಾಣ ಮಾಡಿದ ನಾವು, ಬೆಳಗಿನ ಎಂಟು ಗಂಟೆಯ ವೇಳೆಗೆ ಪಿಪ್ಪಲ್ ಕೋಟ್ ಎಂಬ ಊರನ್ನು ತಲುಪಿದೆವು.