|
ದಖ್ಖನ್ ಪ್ರದೇಶದ ಬಲಿಷ್ಠ ವಿಜಯನಗರ ಸಾಮ್ರಾಜ್ಯದ ಅವನತಿಯೊಂದಿಗೆ ಕರ್ನಾಟಕ ರಾಜ್ಯದ ರಾಜಕೀಯ ಪರಿಸ್ಥಿತಿಯು ಹದಗೆಟ್ಟು, ವಿಭಜನೆಯಾಯಿತು. ಅವರ ಆಳ್ವಿಕೆಯ ನಂತರದ ಕಾಲವು ಗೊಂದಲ, ಅನಿಶ್ಚಿತತೆಗಳಿಂದ ಕೂಡಿದ ಪರಿಸ್ಥಿತಿಯಾಗಿತ್ತು. ವಿಜಯನಗರದ ಆಳ್ವಿಕೆಯು ಆ ನಂತರದ ಎರಡು ಶತಮಾನಗಳ ಕಾಲ ಮುಂದುವರೆದರೂ, ಹಿಂದಿನ ಕಾಲದ ಅಧಿಕಾರ ಹಾಗೂ ಪ್ರಭಾವಗಳು ಕಾಣಲಿಲ್ಲ .ಈ ಅವಧಿಯಲ್ಲಿ, ವಿಜಯನಗರದ ಅರಸರ ರಾಜವಂಶಿಕ ಔನ್ನತ್ಯವು ಹಿನ್ನಡೆ ಪಡೆಯಿತು. ಕರ್ನಾಟಕದ ದಕ್ಷಿಣ ಭಾಗವು ಸಣ್ಣ ಸಣ್ಣ ಭಾಗವಾಗಿ ವಿಭಜಿಸಲ್ಪಟ್ಟು, ಅವನ್ನು ಸಣ್ಣ ಸಣ್ಣ ಪಾಳೇಗಾರರು ಆಳತೊಡಗಿದರು. ಅವರು ವಿಜಯನಗರದ ಸಾರ್ವಭೌಮತ್ವವನ್ನು ಅಂಗೀಕರಿಸಿದರೂ, ಸ್ವತಂತ್ರವಾಗಿ ಆಳಲು ಇಚ್ಛಿಸಿದರು ರಾಜ್ಯದ ಹದಗೆಡುತ್ತಿರುವ ಪರಿಸ್ಥಿತಿಯಲ್ಲಿ ರಾಜನ ವೈಯಕ್ತಿಕ ಸಾಮರ್ಥ್ಯ ಹಾಗೂ ಅಧಿಕಾರವು ಹೆಚ್ಚು ಮುಖ್ಯವಾಯಿತು. |