|
ಪ್ರಾಚೀನ ನಾಗರಿಕತೆಯ ಹೆಗ್ಗುರುತಾದ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಗೆ ನಾಡಿನಲ್ಲಿ ಸುದೀರ್ಘ ಪರಂಪರೆ ಇದೆ. ನಾಗರಿಕ ಆಡಳಿತ, ಶಿಕ್ಷಣ ಮುಂತಾದ ವಿವಿಧ ರಂಗಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸುವ ಮೂಲಕ ರಾಷ್ಟ್ರೀಯ ಜೀವನವನ್ನು ಹೆಚ್ಚು ಅರ್ಥಪೂರ್ಣವಾಗಿಸಿದೆ. ಹರಪ್ಪ ಸಂಸ್ಕøತಿಯ ಕಾಲದಿಂದಲೂ ಪಟ್ಟಣಗಳ ಕುರಿತಾದ ಮಾಹಿತಿ ಲಭಿಸಿದ್ದು, ಆಗಲೂ ಸಹ ವ್ಯವಸ್ಥಿತವಾದ ಪೌರಾಡಳಿತವಿತ್ತೆಂದು ತಿಳಿದುಬರುತ್ತದೆ. ಪ್ರಾಚೀನ ಕಾಲದಲ್ಲಿ ಆಡಳಿತವು ರಾಜರ ಕೈಯಲ್ಲಿ ಕೇಂದ್ರಿಕೃತವಾಗಿದ್ದರೂ, ಸ್ಥಳೀಯ ಸ್ವಯಂ ಆಡಳಿತಕ್ಕೆ ಸಾಕಷ್ಟು ಮನ್ನಣೆ ಇತ್ತು. ಹಳ್ಳಿ, ಪಟ್ಟಣ ಹಾಗೂ ನಗರ ಸಮುದಾಯಗಳು ಅವಶ್ಯಕತೆಗನುಗುಣವಾಗಿ ತಮ್ಮದೇ ಆದ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದವು. ನಾಗರಿಕ ಅವಶ್ಯಕತೆಗಳನ್ನು ಒದಗಿಸುವುದರ ಜೊತೆಗೆ ಇವು ತಮ್ಮ ಪ್ರದೇಶಗಳ ಸರ್ವಾಂಗೀಣ ಪ್ರಗತಿಗೆ ಕಾರಣವಾಗಿದ್ದವು. ಅಂದಿನ ಕಾಲದ ರಾಜರು ಈ ಸ್ವಯಂ ಆಡಳಿತ ಸಂಸ್ಥೆಗಳಿಗೆ ಮಾನ್ಯತೆ ನೀಡಿದ್ದರಲ್ಲದೆ ಅವುಗಳಿಗೆ ಸಾಕಷ್ಟು ಸ್ವಾಯತ್ತತೆಯನ್ನೂ ಒದಗಿಸಿದ್ದರು. ಇಂದಿನ ಪ್ರಜಾಸತ್ತೆ ಮಾದರಿಯ ಸರ್ಕಾರದಲ್ಲಿ ಅಧಿಕಾರ ವಿಕೇಂದ್ರೀಕರಣ ಹಿಂದೆಂದಿಗಿಂತಲೂ ಹೆಚ್ಚು ಮಾನ್ಯತೆ ಪಡೆಯುತ್ತಿದೆ. ಪ್ರಾಚೀನ ಹಾಗೂ ಮಧ್ಯಕಾಲೀನ ಕರ್ನಾಟಕದ ಆಡಳಿತವು, ತುಮಕೂರು ಜಿಲ್ಲೆಯನ್ನೂ ಒಳಗೊಂಡಂತೆ ಸ್ಥಾನಿಕ ಸ್ವರಾಜ್ಯ ಸಂಸ್ಥೆಗಳೆನಿಸಿದ ಪಂಚಾಯಿತಿ ಅಥವಾ ಶಾಸನ ಬದ್ಧ ಸ್ವಯಂ ಆಡಳಿತ ಹೊಂದಿದ್ದ ಪ್ರಾತಿನಿಧಿಕ ಕೂಟಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದುದು ಇತಿಹಾಸದಿಂದ ತಿಳಿದುಬರುತ್ತದೆ. |