|
ಪುರಾತನ ಕಾಲದಿಂದಲೂ ಒಂದು ಪರಂಪರಾನುಗತ ರಾಜ್ಯಾಡಳಿತ ವ್ಯವಸ್ಥೆಯು ವಿಜಯನಗರದ ಅರಸರು ಮತ್ತು ಆನಂತರದ ಪಾಳೇಗಾರರ ಆಳ್ವಿಕೆಯ ಕಾಲದವರೆವಿಗೂ ಮುಂದುವರೆಯಿತು. ಇದರಲ್ಲಿ ರಾಜನು ಪರಮಾಧಿಕಾರ ಹೊಂದಿದ್ದನು. ಧರ್ಮಶಾಸ್ತ್ರ ಮತ್ತು ನೀತಿಶಾಸ್ತ್ರಗಳಲ್ಲಿ ರಾಜನ ಹಾಗೂ ಪ್ರಜೆಗಳ ಹಿತಾಸಕ್ತಿಯು ಸಮಾನವೆಂದು ಪರಿಗಣಿಸಲ್ಪಟ್ಟಿದ್ದಿತು. ನ್ಯಾಯಾಡಳಿತ, ಪ್ರಜಾರಕ್ಷಣೆ, ಸಮಾಜ ವ್ಯವಸ್ಥೆ ಕಾಪಾಡುವಿಕೆ, ಅರ್ಥನಿರ್ವಹಣೆ, ಶಿಷ್ಟ ರಕ್ಷಣೆ, ದುಷ್ಟದಂಡನೆ, ಲೋಕೋಪಯೋಗಿ ಕಾರ್ಯಕ್ರಮಗಳನ್ನು ಕೈಗೊಳ್ಳುವಿಕೆ ಮತ್ತು ಧರ್ಮಾನುಸರಣೆಯಂತಹ ಜವಾಬ್ದಾರಿಗಳು ಈ ‘ರಾಜಧರ್ಮ’ದ ಆಡಳಿತ ಕ್ರಮಕ್ಕೆ ಒಳಪಟ್ಟಿದ್ದವು. ಈ ಆಡಳಿತ ವ್ಯವಸ್ಥೆಯಲ್ಲಿ ಶಿಸ್ತು ನಿಯಂತ್ರಿಸಲು ಹಾಗೂ ಕಾರ್ಯಕ್ರಮಗಳನ್ನು ವಿವರಿಸಲು ವಿವಿಧ ಇಲಾಖಾ ವ್ಯವಸ್ಥೆಗಳಿದ್ದವು. ಇಂತಹ ಸಾಂಪ್ರದಾಯಿಕ ವಿಭಾಗಗಳು ಮೈಸೂರು ಅರಸರ ಕಾಲದಲ್ಲೂ ಮುಂದುವರೆದವು. |