|
ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನವನ್ನು ಕಲ್ಪಿಸುವಲ್ಲಿ ಕರ್ನಾಟಕದ ಕೊಡುಗೆ ಅಪಾರ. ಅದರಲ್ಲೂ ರಾಜಧಾನಿ ಬೆಂಗಳೂರು ಮಾಹಿತಿ ತಂತ್ರಜ್ಞಾನ ರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿದೆ. ಹೀಗೆ ಹಲವಾರು ವೈಶಿಷ್ಟ್ಯಗಳ ಆಧಾರವಾಗಿರುವ ಕರ್ನಾಟಕವನ್ನು ಪ್ರವಾಸಿಗರ ಸ್ವರ್ಗವಾಗಿಸುವಲ್ಲಿ ಪ್ರಕೃತಿ ಮತ್ತು ಮನುಷ್ಯ ಪ್ರಯತ್ನಗಳೆರಡೂ ಜೊತೆಗೂಡಿವೆ. ಅದರ ನಿಡಿದಾದ ಸಮುದ್ರತೀರವು ಸಮತಟ್ಟಾದ ಕಿನಾರೆಗಳಿಂದ ಕೂಡಿದೆ. ಎತ್ತರವಾದ ಪಶ್ಚಿಮ ಘಟ್ಟಗಳು ನಿತ್ಯಹರಿದ್ವರ್ಣದ ಕಾಡು ಹಾಗೂ ಪ್ರಾಣಿ ಸಂಪತ್ತನ್ನು ಹೊಂದಿರುವುದಲ್ಲದೆ ಅನೇಕ ನದಿಗಳು ಅಲ್ಲಿ ಹುಟ್ಟಿ ಪೂರ್ವ ಮತ್ತು ಪಶ್ಚಿಮದ ಕಡೆ ಹರಿದು ನೆಲದ ಫಲವತ್ತನ್ನು ಹೆಚ್ಚಿಸಿ ಕೃಷಿ ಉತ್ಪನ್ನದ ಅಭಿವೃದ್ಧಿಗೆ ಕಾರಣವಾಗಿವೆ. |