|
ಕೃಷಿಯು ರಾಜ್ಯದ ಆರ್ಥಿಕತೆಗೆ ತನ್ನದೇ ಆದ ಬೆಂಬಲವನ್ನು ನೀಡುತ್ತಿದೆ.ಕನ್ನಡದ ಪ್ರಮುಖ ಕವಿ ಸರ್ವಜ್ಞನು ತನ್ನ ವಚನದಲ್ಲಿ ಕೋಟಿವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂದು ಹೇಳಿರುವುದು ರಾಜ್ಯದಲ್ಲಿ ಕೃಷಿಗೆ ಹಿಂದೆ ನೀಡಿದ್ದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಮುಂದುವರಿದು ಸರ್ವಜ್ಞನು ಮೇಟಿ(ನೇಗಿಲು) ಯ ಜೊತೆಗೆ ರಾಟೆಯು ಕೂಡ ನಿರಂತರವಾಗಿ ತಿರುಗುತ್ತಿರಬೇಕೆಂದು ತಿಳಿಸಿರುತ್ತಾನೆ. ಇದು ರಾಜ್ಯದಲ್ಲಿ ರೈತರು ಅದರಲ್ಲೂ ಮುಖ್ಯವಾಗಿ ಹೆಂಗಸರು ಬಟ್ಟೆಯ ನೂಲು ತೆಗೆಯುವುದರಲ್ಲಿ ಹಾಗೂ ನೇಯ್ಗೆ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆಂಬುದನ್ನು ತೋರಿಸುತ್ತದೆ. ಇದಕ್ಕೆ ಹಲವಾರು ಪುರಾವೆಗಳು ದಾಖಲೆಯ ರೂಪದಲ್ಲಿ ದೊರೆಯುತ್ತವೆ. ಪ್ರವಾಸಿಗ ಬುಕಾನನ್ (1800) ತನ್ನ ಕಥನದಲ್ಲಿ ಕೃಷಿ ಕಾರ್ಮಿಕನ ದಿನದ ವೇತನದಷ್ಟೇ ಆದಾಯವನ್ನು ಒಬ್ಬ ನೇಕಾರನು ತನ್ನ ವೃತ್ತಿಯಿಂದ ಗಳಿಸುತ್ತಿದ್ದನೆಂದು ದಾಖಲಿಸಿದ್ದಾನೆ. ಆದರೆ ಇಂಗ್ಲೆಂಡ್ನಲ್ಲಾದ ಕೈಗಾರಿಕಾ ಕ್ರಾಂತಿ ಹಾಗೂ ಅಲ್ಲಿನ ತೆರಿಗೆ ಪದ್ದತಿಯಿಂದ ಭಾರತದ ಪ್ರಾಚೀನ ಜವಳಿ ಮತ್ತು ಇನ್ನಿತರ ಕರಕುಶಲ ಉದ್ದಿಮೆಗಳು ನಾಶವಾಗಿ ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿ ಮಾತ್ರ ಉಳಿದುಕೊಂಡಿತು. ಇದರಿಂದಾಗಿ ಈ ಉದ್ದಿಮೆಗಳಲ್ಲಿ ತೊಡಗಿಸಿಕೊಂಡಿದ್ದ ಜನರು ಕೃಷಿಯ ಮೇಲೆಯೇ ಅವಲಂಬಿತವಾಗಬೇಕಾಯಿತು. |