|
ಕರ್ನಾಟಕ ತನ್ನ ಸಾಂಸ್ಕøತಿಕ ಮತ್ತು ಐತಿಹಾಸಿಕ ಪರಂಪರೆಗಳಿಂದ ಸಂಪದ್ಭರಿತವಾದ ರಾಜ್ಯವಾಗಿದೆ. ಇದಕ್ಕೆ ಇಂಬುಗೊಟ್ಟಂತೆ ನೈಸರ್ಗಿಕ ಸಂಪತ್ತು ನಾಡಿನ ಏಳಿಗೆಗೆ ಭದ್ರ ಬುನಾದಿ ಒದಗಿಸಿದೆ. ಇದನ್ನು ಬಳಸಿಕೊಂಡೇ ನಾಡಿನ ಕೈಗಾರಿಕಾಭಿವೃದ್ಧಿ ಸಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳೂ ಕೈಗಾರಿಕೆಯನ್ನು ಪೋಷಿಸಿವೆ. ಇಡೀ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಗಣಿಮಾಡುತ್ತಿರುವ ಏಕೈಕ ರಾಜ್ಯ ಕರ್ನಾಟಕ. `ಚಿನ್ನದ ನಾಡದು ಮೈಸೂರು’ ಎಂದು ಕನ್ನಡದ ಕಣ್ವ ಎಂದು ಕರೆಯುವ ಬಿ.ಎಂ. ಶ್ರೀಕಂಠಯ್ಯನವರು ಕೊಂಡಾಡಿರುವುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಪಶ್ಚಿಮಘಟ್ಟದ ಕಾಡು ಕರ್ನಾಟಕದ ವನ್ಯಸಂಪತ್ತನ್ನು ಹೆಚ್ಚಿಸಿದೆ; ಜೀವಿಸಂಕುಲಗಳ ವೈವಿಧ್ಯಕ್ಕೆ ಹೆಸರಾಗಿದೆ. ಇದು ಜೀವನದಿಗಳ ಉಗಮಸ್ಥಾನವಾಗಿದೆ. ಸರ್ವಋತುವಿನಲ್ಲೂ ಹರಿಯುವ ದೊಡ್ಡ ನದಿಗಳಿಗೆ ಆಸರೆಯಾಗಿದೆ. |