|
ರಾಷ್ಟ್ರವೊಂದು ಆರ್ಥಿಕಾಭಿವೃದ್ಧಿಯನ್ನು ಸಾಧಿಸುವಲ್ಲಿ ಹಣಕಾಸು ಸಂಪನ್ಮೂಲಗಳ ಸಮರ್ಪಕ ಪೂರೈಕೆ ಮತ್ತು ದಕ್ಷ ಆಡಳಿತ ನಿರ್ವಹಣೆ ಅತ್ಯವಶ್ಯ. ಸಂಪನ್ಮೂಲಗಳ ಪರಿಣಾಮಕಾರಿ ನಿರ್ವಹಣೆಯಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳು ಮಹತ್ವದ ಪಾತ್ರವಹಿಸುತ್ತಿದ್ದು, ಇವು ರಾಷ್ಟ್ರದ ಆರ್ಥಿಕ ವ್ಯವಸ್ಥೆಗೆ ಜೀವನಾಡಿಯಾಗಿರುತ್ತವೆಂದರೆ ಉತ್ಪ್ರೇಕ್ಷೆಯಾಗಲಾರದು. ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಹಾರ ಸಂಸ್ಥೆಗಳೊಂದಿಗೆ ಸಹಕಾರ ಬ್ಯಾಂಕುಗಳು, ಪತ್ತಿನ ಸಹಕಾರ ಸಂಘಗಳು, ವ್ಯಾಪಾರ, ವಾಣಿಜ್ಯ, ಮಾಹಿತಿ ತಂತ್ರಜ್ಞಾನ, ಮಾರುಕಟ್ಟೆ ರಚನೆ, ವಿಮಾ ವ್ಯವಸ್ಥೆ, ಉಗ್ರಾಣ ವ್ಯವಸ್ಥೆ, ತೂಕ ಮತ್ತು ಅಳತೆ ಪದ್ಧತಿ, ನಾಣ್ಯ ಮತ್ತು ಕರೆನ್ಸಿ ಪದ್ಧತಿ, ಆಹಾರ ಮತ್ತು ನಾಗರಿಕ ಸರಬರಾಜು, ಸಾರ್ವಜನಿಕ ವಿತರಣಾ ವ್ಯವಸ್ಥೆ, ಗ್ರಾಹಕರ ಸಂರಕ್ಷಣಾ ಕಾಯಿದೆ ಮುಂತಾದವು ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಮಹತ್ವಪೂರ್ಣವಾದ ಪಾತ್ರ ವಹಿಸುತ್ತವೆ. ಇದೇ ರೀತಿ ರಾಜ್ಯದ ತುಮಕೂರು ಜಿಲ್ಲೆಯೂ ಸೇರಿದಂತೆ ದೇಶದ ಯಾವುದೇ ಪ್ರದೇಶದ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವಲ್ಲಿ ಮೇಲಿನ ಎಲ್ಲಾ ಅಂಶಗಳು ಹಿರಿದಾದ ಪಾತ್ರ ವಹಿಸುತ್ತವೆ. |