|
ಜೈನಧರ್ಮದ 24ನೇ ತೀರ್ಥಂಕರ ವರ್ಧಮಾನ ಮಹಾವೀರ- ಜ್ಞಾತ್ರಿಕಕುಲ ಎಂಬ ಕ್ಷಾತ್ರ ಕುಟುಂಬದಲ್ಲಿ ಜನಿಸಿ ವಸ್ತುಸ್ವರೂಪದ ಯಥಾರ್ಥತೆಯನ್ನು ತಿಳಿಯಲು ತನ್ನ ಮೂವತ್ತನೆಯ ವಯಸ್ಸಿನಲ್ಲಿ ಸನ್ಯಸನ ಸ್ವೀಕರಿಸಿ ಹನ್ನೆರಡು ವರ್ಷಗಳ ಕಾಲ ಮೌನಧಾರಣೆ ಮಾಡಿ, ಇಂದ್ರಿಯಗಳ ಮೇಲೆ ವಿಜಯ ಸಾಧಿಸಿ ಜ್ಞಾನ, ಧ್ಯಾನ ಮತ್ತು ತಪಗಳಲ್ಲಿ ನಿರತನಾಗಿ, ಜ್ಞಾನಗಳಲ್ಲಿ ಸರ್ವೋತ್ಕೃಷ್ಟವಾದ ‘ಕೇವಲಜ್ಞಾನ’ವನ್ನು ಪಡೆದು ‘ಜಿನ’ನಾದ. ಇತರರಿಂದ ಪೂಜಿಸಿಕೊಳ್ಳುವ ಅರ್ಹತೆಯನ್ನು ಪಡೆದು ‘ಅರ್ಹಂತ’ನಾದ. ತಾನು ಸಾಗಿ ಬಂದ ಮಾರ್ಗವನ್ನು ಇನ್ನಿತರರಿಗೂ ತೋರುಸುವ ಮೂಲಕ ತೀರ್ಥ ಪ್ರವರ್ತಕನಾಗಿ ” ತೀರ್ಥಂಕರ”ನಾದ. ಅಂತಿಮವಾಗಿ ಜೀವನ್ಮರಣಗಳ ಸಂಕೋಲೆಗಳಿಂದ ಬಿಡುಗಡೆಯಾಗಿ “ಸಿದ್ಧ ಪರಮೇಷ್ಠಿ”ಯೂ ಆದ. |