
ಈಶ್ವರ ಸಣಕಲ್ಲ
December 20
೨೦-೧೨-೧೯೦೬ ೩-೧೨-೧೯೮೪ “ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ…” ಎಂದು ಹಾಡಿ, ಸಂಭಾವಿತ ಕವಿ ಎಂಬ ಅಗ್ಗಳಿಕೆಗೆ ಪಾತ್ರರಾಗಿ ಬದುಕಿನುದ್ದಕ್ಕೂ ಕಷ್ಟಗಳನ್ನೇ ಉಂಡ ಈಶ್ವರ ಸಣಕಲ್ಲರು ಹುಟ್ಟಿದ್ದು ಗೋಕಾಕ ತಾಲ್ಲೂಕಿನ ರಬಕವಿಯಲ್ಲಿ. ತಂದೆ ಮಹಾರುದ್ರಪ್ಪ, ತಾಯಿ ನೀಲಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ತಾಯಿಯ ತೌರೂರಾದ ಯಾದವಾಡ, ರಬಕವಿಯಲ್ಲಿ. ಸಣಕಲ್ಲರಿಗೆ ಬಾಲ್ಯದಿಂದಲೇ ಓದಿನಲ್ಲಿ ಆಸಕ್ತಿ, ಪ್ರೌಢಶಿಕ್ಷಣ ಬೆಳಗಾವಿಯ ಜಿ.ಎ. ಹೈಸ್ಕೂಲು. ಹೈಸ್ಕೂಲಿನಲ್ಲಿದ್ದಾಗಲೇ ಬರೆದದ್ದು ಹಲವಾರು ಕವನಗಳು. ಶಿವಾನಂದ ಸ್ವಾಮಿಗಳವರ ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮೃತ್ಯು ಗ್ರಂಥದ ಕನ್ನಡಾನುವಾದ ಮಾಡಿದ್ದು ೨೨ರ ಹರೆಯದಲ್ಲಿ. ೧೯೨೯ರಲ್ಲಿ ಮೆಟ್ರಿಕ್ ಹಾಗೂ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣತೆ. ಕೊಲ್ಲಾಪುರದ ರಾಜಾರಾಮ ಕಾಲೇಜಿಗೆ ಸೇರ್ಪಡೆ. ಹಣಕಾಸಿನ ತೊಂದರೆಯಿಂದ ಕಾಲೇಜು ಶಿಕ್ಷಣಕ್ಕೆ ಸಂಚಕಾರ. ಉದ್ಯೋಗಕ್ಕೆ ಸೇರಿದ್ದು ರಬಕವಿಯಲ್ಲಿ . ಮಿತ್ರ ಸಮೂಹ ಖಾದಿ ಭಂಡಾರ, ನಂತರ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ‘ಶಿವಾನುಭವ’ ಮತ್ತು ನವಕರ್ನಾಟಕದ ಪತ್ರಿಕೆಯ ಪ್ರಕಟಣೆಯ ಸಹಾಯಕರಾಗಿ. ೧೯೩೪ರಲ್ಲಿ ಮೊದಲ ಕವನ ಸಂಕಲನ ‘ಕೋರಿಕೆ’ ಪ್ರಕಟಿತ. ನಂತರ ಉದ್ಯೋಗಕ್ಕೆ ಸೇರಿದ್ದು ಹರ್ಡೇಕರ್ ಮಂಜಪ್ಪನವರ ಆಲಮಟ್ಟಿ ಆಶ್ರಮ. ಶರಣ ಸಂದೇಶ, ಖಾದಿ ಗ್ರಾಮೋದ್ಯೋಗ ಪತ್ರಿಕೆಗಳ ಸಂಪಾದಕತ್ವ, ಬೆಳಗಾವಿಯ ಗ್ರಾಮಸೇವಕ ಪತ್ರಿಕೆಯ ಉಪಸಂಪಾದಕ, ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠರವರಿಂದ ಬಂದ ಕರೆ, ಸಂಶೋಧನೆ ಶಾಖೆಯಲ್ಲಿ ೧೯೬೨-೭೨ರವರೆಗೂ ಸೇವೆ. ಹೇಗೆ ದುಡಿದರೂ ತುಂಬದ ಹೊಟ್ಟೆ, ಸಂಸಾರದಲ್ಲಿ ಅಸಾಮರಸ್ಯ. ರಚಿಸಿದ ಕೃತಿಗಳು. ಅನುವಾದ-ಗ್ರಾಮೋದ್ಧಾರ, ಸಂಸಾರ ಸಮರ (ಕಾದಂಬರಿ), ಬ್ಯಾಂಕುಗಳು ಅವುಗಳ ವ್ಯವಹಾರ, ನೆದರ್ಲೆಂಡಿನ ಸಹಕಾರದ ನಸುನೋಟ. ಕಾವ್ಯ-ಬಟ್ಟೆ, ಹುಲ್ಕಲ್ಗೆ ಕಿಡಿ. ಸಂಪಾದಿತ-ಕರ್ನಾಟಕದ ಒಕ್ಕಲುತನ, ಸಹಕಾರಿ ಬ್ಯಾಂಕಿನ ಬೆಳ್ಳಿಹಬ್ಬ. ವ್ಯಕ್ತಿಚಿತ್ರ-ಸೊನ್ನಲಾಪುರ ಶ್ರೀ ನಾಲ್ವತ್ವಾಡ ಶರಣ ಚರಿತ್ರೆ, ಶ್ರೀ ಮಡಿವಾಳ ಶಿವಯೋಗಿ ಸೇರಿ ಸುಮಾರು ೨೦ ಕೃತಿ ಪ್ರಕಟಿತ. ‘ಬಟ್ಟೆ’ ಸಂಕಲನಕ್ಕೆ ರಾಜಕ್ಯ ಸರಕಾರದ ಪ್ರಥಮ ಬಹುಮಾನ, ೧೯೮೦ರ ಬೆಳಗಾವಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ. ರಬಕವಿಯ ಲಯನ್ಸ್ ಕ್ಲಬ್ಬಿನಿಂದ ಅದ್ದೂರಿ ಸನ್ಮಾನ ಮುಂತಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ವಿ.ಡಿ. ಓಂಪ್ರಕಾಶ್ – ೧೯೭೦ ಗುರುರಾಜ ನಾ. ಜೋಶಿ – ೧೯೫೬