೧೦.೬.೧೯೨೨ ೨.೭.೧೯೯೩ ವಾಗ್ಗೇಯಕಾರ, ಗಾಯಕ, ಸಂಗೀತಜ್ಞ. ಶಂಕರಮೂರ್ತಿಯವರು ಹುಟ್ಟಿದ್ದು ಹಾಸನ ಜಿಲ್ಲೆಯ ಮುದಲಾಪುರದಲ್ಲಿ. ತಂದೆ ರಾಮಕೃಷ್ಣಯ್ಯ, ತಾಯಿ ನಂಜಮ್ಮ, ತಂದೆ ತಾಯಿಗಳು ವಲಸೆ ಬಂದು ನೆಲಸಿದುದು ಮತ್ತೂರಿನಲ್ಲಿ. ವೇದ, ಸಂಸ್ಕೃತ, ಸಂಗೀತಶಾಸ್ತ್ರ ಶಿಕ್ಷಣಗಳ ನೆಲೆ. ಪರಿಸರಕ್ಕೆ ತಕ್ಕಂತೆ ಎಳೆತನದಿಂದಲೇ ಸಂಗೀತದಲ್ಲಿ ಮೊಳೆತ ವಿಶೇಷ ಆಸಕ್ತಿ. ತರೀಕೆರೆ ತಾಲ್ಲೂಕಿನ ಲಿಂಗದ ಹಳ್ಳಿಯಿಂದ ವಲಸೆ ಹೋಗಿ ತಮಿಳುನಾಡಿನಲ್ಲಿ ನೆಲೆಸಿದ್ದ ರಾಮಭಟ್ಟರಲ್ಲಿ ಮೂರು ವರ್ಷಗಳ ಕಾಲ ಸಂಗೀತ ಪಾಠ. ತಮಿಳು, ತೆಲುಗು ಭಾಷೆಗಳ ಕಲಿಕೆ. ಕೇರಳಕ್ಕೆ ಹೋಗಿ, ಸಂಗೀತ ಪ್ರಪಂಚದ ಭೀಷ್ಮರೆನಿಸಿದ್ದ ಚೆಂಬೈ ವೈದ್ಯನಾಥ ಭಾಗವತರಲ್ಲಿ ಶಿಷ್ಯವೃತ್ತಿ ಮಾಡಿ ಕಲಿತ ಸಂಗೀತ. ಮಲಯಾಳಂ ಭಾಷಾಧ್ಯಯನ. ಮುಂಬಯಿಗೆ ತೆರಳಿ ಪಂ. ವಿಷ್ಣುಭಾತ ಖಂಡೆಯವರಲ್ಲಿ ಕಲಿತ ಹಿಂದೂಸ್ತಾನಿ ಸಂಗೀತ. ಬಹುಭಾಷಾ ಪಾಂಡಿತ್ಯದೊಡನೆ ಪಡೆದದ್ದು ಉಭಯ ಸಂಗೀತ ಪ್ರಭುತ್ವ. ಬೆಳಕವಾಡಿ ವರದರಾಜ ಅಯ್ಯಂಗಾರ್ಯರಿಂದ ದೊರೆತ ಪ್ರಾಯೋಗಿಕ ಸಂಗೀತ ಕ್ರಮ. ಬೆಂಗಳೂರು ಆಕಾಶವಾಣಿ, ಮದರಾಸು ಆಕಾಶವಾಣಿ ಕೇಂದ್ರಗಳಿಂದ ಹಲವಾರು ಬಾರಿ ಬಿತ್ತರಗೊಂಡ ಸಂಗೀತ ಕಾರ್ಯಕ್ರಮಗಳು. ಬೆಂಗಳೂರಿನ ಗಾಯನ ಸಮಾಜ, ತ್ಯಾಗರಾಜ ಗಾನ ಸಭಾ, ನಾದಜ್ಯೋತಿ ಶ್ರೀ ತ್ಯಾಗರಾಜ ಸ್ವಾಮಿ ಭಜನ ಸಭಾ ಮುಂತಾದ ಸಂಸ್ಥೆಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು. ಬೆಂಗಳೂರಿನ ಶ್ರೀರಾಂ ಪುರದಲ್ಲಿ ಸ್ಥಾಪಿಸಿದ ಶ್ರೀಗುರು ಗುಹಗಾನ ನಿಲಯ. ಸಂಗೀತ ಸಾಧನೆ, ಗಾಯನ, ಜಿಜ್ಞಾಸೆಗೆ ದೊರೆತ ವೇದಿಕೆ. ಸಂಗೀತದಲ್ಲಿ ಮಾಡಿದ ಸಂಶೋಧನೆ. ಪ್ರಾಥಮಿಕ ಹಂತದ ಕಲಿಕೆಗಾಗಿ ಉಪಯುಕ್ತ ಸಂಗೀತ ಗ್ರಂಥಗಳ ರಚನೆ. ಕರ್ನಾಟಕ ಸಂಗೀತ ತರಂಗಿಣಿ ಪುಸ್ತಕ ಮಾಲೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕನ್ನಡ ಗ್ರಂಥಗಳ ರಚನೆ. ಹಲವಾರು ಪ್ರಬುದ್ಧ ಕೃತಿಗಳ ಪ್ರಕಾಶನ. ತ್ಯಾಗರಾಜರ ಪಂಚರತ್ನ ಕೀರ್ತನೆಗಳು, ನವಾವರಣ ಕೃತಿಗಳು, ಪ್ರಸಿದ್ಧ ರಾಗಮಾಲಿಕೆಗಳು, ಭಕ್ತಿ ಸಂಗೀತ ಸುಧಾ, ಪ್ರಹ್ಲಾದ ವಿಜಯ, ನಾಮ ಮಹಿಮಾ ಕೀರ್ತನೆಗಳು, ಉಪಚಾರ ಕೀರ್ತನೆಗಳು, ಉತ್ಸವ ಸಂಪ್ರದಾಯ ಕೀರ್ತನೆಗಳು ಮುತ್ತುಸ್ವಾಮಿ ದೀಕ್ಷಿತರ ನವಗ್ರಹ ಕೃತಿಗಳು ಮುಂತಾದ ಕೃತಿಗಳ ಪ್ರಕಟಣೆ. ಮುತ್ತುಸ್ವಾಮಿ ದೀಕ್ಷಿತರ ಆಂಗ್ಲ ಸಂಗೀತ ಸ್ವರ ಮಾಲಿಕೆಗಳ ರಚನೆಯ ವಿರಳ ಕೃತಿಯನ್ನು ನಾಲ್ಕು ಲಿಪಿಯನ್ನುಳ್ಳ ಪುಸ್ತಕ ಹಾಗೂ ಧ್ವನಿ ಸುರುಳಿ ಬಿಡುಗಡೆ. ನಾದಜ್ಯೋತಿ ಶ್ರೀ ತ್ಯಾಗರಾಜ ಸ್ವಾಮಿ ಭಜನ ಸಭಾ, ಬೆಂಗಳೂರಿನ ಗಾಯನ ಸಮಾಜ, ತ್ಯಾಗರಾಜ ಗಾನಸಭಾ ಮುಂತಾದ ಸಂಸ್ಥೆಗಳಿಂದ ದೊರೆತ ಸನ್ಮಾನ, ಪುರಸ್ಕಾರಗಳು.ಇದೇದಿನಹುಟ್ಟಿದಕಲಾವಿದರು: ಎಂ.ಎಸ್.ಗೋವಿಂದರಾಜು – ೧೯೨೪ ಸುಬ್ಬರಾವ್.ಬಿ.ಎನ್. – ೧೯೨೬ ಬಸವರಾಜು ಹಾಸನ – ೧೯೩೮ ಯೂಸುಫ್ ಅರಕ್ಕಲ್ – ೧೯೪೫ ಫಕೀರೇಶ ಕಣವಿ – ೧೯೫೫ ಮಂಜುಳಾ ಗುರುರಾಜ್ – ೧೯೫೯ ಡಿ.ಎಸ್. ಚೌಗಲೆ – ೧೯೬೧.
* * *