
- This event has passed.
ಎಚ್.ಆರ್. ಚಂದ್ರವದನರಾವ್
October 18
೧೮-೧೦-೧೯೩೦ ಸೃಜನಶೀಲ, ಅನುವಾದಕ ಸಾಹಿತಿ, ಪ್ರವಾಸಪ್ರಿಯ ಚಂದ್ರವದನರಾವ್ರವರು ಹುಟ್ಟಿದ್ದು ಹಾಸನದಲ್ಲಿ. ತಂದೆ ಎಚ್.ಟಿ. ರಂಗಣ್ಣ, ತಾಯಿ ಎ.ಸಿ. ಶಾರದಮ್ಮ. ಪ್ರಾರಂಭಿಕ ಶಿಕ್ಷಣ ಹಾಸನ. ಬಿ.ಎಸ್ಸಿ. ಪದವಿ ಮೈಸೂರಿನಲ್ಲಿ. ಇಂಗ್ಲಿಷ್ ಮತ್ತು ವಿಜ್ಞಾನ ವಿಭಾಗದಲ್ಲಿ ಬಿ.ಟಿ. ಪದವಿ. ಬನಾರಸ್ ಹಿಂದು ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿ. ಪತ್ರಿಕೋದ್ಯಮದಲ್ಲಿ ಡಿಪ್ಲೊಮ. ಶಿಕ್ಷಣ ಇಲಾಖೆಯಲ್ಲಿ ಬೋಧಕರಾಗಿ ಸೇರಿದ್ದು ಹೈಸ್ಕೂಲು ಅಧ್ಯಾಪಕರಾಗಿ. ಕಿರಿಯ ಕಾಲೇಜಿನ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ. ನಿವೃತ್ತಿಯ ನಂತರವೂ ಬೋಧಕ ವೃತ್ತಿ ಮುಂದುವರಿಕೆ. ಶ್ರೀರಾಮಕೃಷ್ಣ ನೈತಿಕ ಮತ್ತು ಅಧ್ಯಾತ್ಮಿಕ ಶಿಕ್ಷಣ ಕಾಲೇಜಿನಲ್ಲಿ ಸುಮಾರು ೯ ವರ್ಷ ಸಲ್ಲಿಸಿದ ಸೇವೆ. ಬರೆಹದ ಜೊತೆಗೆ ಪ್ರಪಂಚ ಪರ್ಯಟನೆಯ ಹುಚ್ಚು . ಎರಡು ಬಾರಿ ವಿದೇಶಯಾತ್ರೆ. ೧೯೮೯ರಲ್ಲಿ ಸಿಂಗಾಪುರ ಮತ್ತು ಸುತ್ತಮುತ್ತ. ೧೯೯೩ರಲ್ಲಿ ಕೆನಡ ; ಯು.ಎಸ್.ಎ, ಯು.ಕೆ. ಹಾಗೂ ಯೂರೋಪಿನ ಹಲವಾರು ದೇಶಗಳು. ಸಿಂಗಾಪುರ ಮತ್ತು ಕೌಲಾಲಂಪುರ ಸುತ್ತಿ ಬಂದು ಬರೆದದ್ದು ‘ವಿದೇಶ ಪ್ರವಾಸ’ ಕೃತಿ. ಅಮೆರಿಕಾ ನೋಡಿ ಬಂದಾಗ ಬರೆದ ಕೃತಿ ‘ಪ್ರದಕ್ಷಿಣೆ.’ ಪ್ರವಾಸದ ರೋಚಕ ಅನುಭವಗಳ ವಿಶಿಷ್ಟ ಕೃತಿ. ಇದಲ್ಲದೆ ಹಲವಾರು ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ ರಚನೆ. ಕಾದಂಬರಿ-ನಡುರಾತ್ರಿಯಲ್ಲಿ ಸ್ವಾತಂತ್ರ್ಯ, ಆನಂದನಗರಿ, ಪಾದ್ರಿ ಮತ್ತು ಡೇವಿಡ್ ಕಾಪರ್ ಫೀಲ್ಡ್ (ಅನುವಾದ). ಕಥಾಸಂಕಲನಗಳು-ಮೊಪಾಸನ ಆಯ್ದ ಕಥೆಗಳು, ಓಹೆನ್ರಿಯ ಕ್ರಿಸ್ಮಸ್ ಉಡುಗೊರೆ ಮತ್ತು ಇತರ ಕಥೆಗಳು, ಆಸ್ಕರ್ವೈಲ್ಡ್ನ ಸುಖಿರಾಜ ಮತ್ತು ಇತರ ಕಥೆಗಳು, ಸತ್ಯಕ್ಕೆ ಸಾವಿಲ್ಲ ಮತ್ತು ಇತರ ಕಥೆಗಳು, ಬೀಸಣಿಗೆ, ಕಥಾಗುಚ್ಛ, ಮತ್ತೊಂದು ಕಥಾಗುಚ್ಛ, ನೋವು ನಲಿವು, ರೋಚಕ ಕಥೆಗಳು, ಸೊಗಸಾದ ಕಥೆಗಳು, ಅಗಣ್ಯ ಅಬಲೆ, ಮುಂತಾದುವು. ಪ್ರಬಂಧ-ಭಾವತರಂಗ, ಆಲಿವರ್ ಗೋಲ್ಡ್ಸ್ಮಿತ್ನ ಆಯ್ದ ಪತ್ರಗಳು, ಪ್ರಬಂಧಗಳು. ಮಕ್ಕಳಿಗಾಗಿ-ತಾರಾ ಶಿಶು ಮತ್ತು ಇತರ ಕಥೆಗಳು, ರೇಷ್ಮೆಲಂಗ ಮತ್ತು ಇತರ ಕಥೆಗಳು, ಅಕ್ಷಯಪಾತ್ರೆ ಮತ್ತು ಇತರ ಕಥೆಗಳು, ಬಂಗಾರದ ಹಕ್ಕಿ ಮತ್ತು ಇತರ ಕಥೆಗಳು. ಅನುವಾದ-ಟಾಲ್ಸ್ಟಾಯ್ರವರ ಮೋಚಿ ಮಾಚಯ್ಯ ಮತ್ತು ಇತರ ಕಥೆಗಳು, ತಪ್ಪೊಪ್ಪಿಗೆ. ಹಲವಾರು ರೇಡಿಯೋ ನಾಟಕಗಳು. ನವಸಾಕ್ಷರರಿಗಾಗಿ ಸಾಮಾಜಿಕ ಅನಿಷ್ಟಗಳು-ನಿವಾರಣೆ, ಆರೋಗ್ಯವೇ ಭಾಗ್ಯ, ವಿಜ್ಞಾನ ಚಂದ್ರಿಕೆ ಮುಂತಾದ ಇಪ್ಪತ್ತೈದಕ್ಕೂ ಹೆಚ್ಚು ಕೃತಿ ಪ್ರಕಟಿತ. ನಡುರಾತ್ರಿಯಲ್ಲಿ ಸ್ವಾತಂತ್ರ್ಯ ಕೃತಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಭಾರತೀಯ ವಿದ್ಯಾಭವನದ ಇತಿಹಾಸ ಪ್ರಕಟಣಾ ವಿಭಾಗದ ಪ್ರಶಸ್ತಿ ಮುಂತಾದ ಗೌರವಗಳು. ಇದೇ ದಿನ ಹುಟ್ಟಿದ ಸಾಹಿತಿಗಳು : ಅ.ಗೌ. ಕಿನ್ನಗೋಳಿ – ೧೯೨೧ ಬರಗೂರು ರಾಮಚಂದ್ರಪ್ಪ – ೧೯೪೭ ಕುಮಾರ ಚಲ್ಯ – ೧೯೫೪ ರಮೇಶಚಂದ್ರ – ೧೯೪೬