
ಎಚ್.ಎಲ್.ಎನ್. ಸಿಂಹ
July 25, 2024
೨೫.೭.೧೯೦೪ ೨.೭.೧೯೭೨ ವೃತ್ತಿರಂಗಭೂಮಿ ಹಾಗೂ ಚಲನಚಿತ್ರದ ಆರಂಭಿಕ ಹಂತದಲ್ಲಿ ವಿಶಿಷ್ಟ ತಿರುವು ನೀಡಿದ ಸಿಂಹ ರವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾದಹಳ್ಳಿ ಗ್ರಾಮದಲ್ಲಿ. ತಂದೆ ನರಸಿಂಹಯ್ಯ, ತಾಯಿ ಲಕ್ಷ್ಮಮ್ಮ. ಓದುವುದಕ್ಕಿಂತ ನಾಟಕ ರಂಗದತ್ತ ಹೆಚ್ಚಿದ ಆಕರ್ಷಣೆ. ನಾಟಕ ಶೀರೋಮಣಿ ವರದಾಚಾರ್ಯರ ಕಂಪನಿಯಲ್ಲಿ ಬಾಲನಟನಾಗಿ ಸೇರ್ಪಡೆ. ಭಕ್ತ ಮಾರ್ಕಂಡೇಯ ನಾಟಕದಲ್ಲಿ ಮಾರ್ಕಂಡೇಯನಾಗಿ ತೋರಿದ ಅದ್ಭುತ ನಟನಾಕೌಶಲ. ನಂತರ ಅದೇ ಕಂಪನಿಯಲ್ಲಿದ್ದ ನಟ ಮಹಮದ್ ಪೀರ್ ನಿಂದ ಉತ್ತೇಜಿತರಾಗಿ ಇಬ್ಬರೂ ಸೇರಿ ಕಟ್ಟಿದ ನಾಟಕ ಸಂಸ್ಥೆ ‘ಚಂದ್ರ ಕಲಾ ನಾಟಕ ಮಂಡಲಿ’. ಇದರಿಂದ ಪ್ರದರ್ಶಿತವಾದ ಷಹಜಾನ್ ಮತ್ತು ಗೌತಮ ಬುದ್ಧ ನಾಟಕಗಳು ಮಹಮದ್ ಪೀರ್ ಮತ್ತು ಇವರಿಗೆ ಖ್ಯಾತಿ ತಂದ ನಾಟಕಗಳು. ನಂತರ ತಾವೇ ನಿರ್ದೇಶಿಸುವ ಹಂಬಲದಿಂದ ಚಂದ್ರಕಲಾ ಮಂಡಲಿಯಿಂದ ಹೊರಬಂದು ಕಟ್ಟಿದ ನಾಟಕ ಸಂಸ್ಥೆ ‘ಸಿಂಹಾಸ್ “ಸೆಲೆಕ್ಟೆಡ್ ಆರ್ಟಿಸ್ಟ್ಸ್” ಸಂಸ್ಥೆ. ರಂಗ ಪರಿಕರಗಳನ್ನು ಸರಳೀಕರಿಸಿ ಅಭಿನಯಕ್ಕೆ ಪ್ರಾಮುಖ್ಯತೆ ಕೊಟ್ಟು ವೃತ್ತಿರಂಗ ಭೂಮಿಯಲ್ಲಿ ಪ್ರಾರಂಭಿಸಿದ ಹೊಸ ಅಧ್ಯಾಯ. ಸಂಸಾರನೌಕಾ ನಾಟಕದ ಜೊತೆಗೆ ಅಬ್ಬಾ ಆ ಹುಡುಗಿ, ಬಂಗಾಳದ ಬರ, ಗಂಡ್ಹ್ ರಾಜ್, ಷಾಜಹಾನ್, ಪ್ರೇಮಲೀಲಾ ಮುಂತಾದ ಹಲವಾರು ನಾಟಕಗಳ ಪ್ರದರ್ಶನ. ಸಿಂಹರವರು ಭಕ್ತಪ್ರಹ್ಲಾದದಲ್ಲಿ ಹಿರಣ್ಯಾಕ್ಷ, ವೀರಸಿಂಹ ಚರಿತೆಯಲ್ಲಿ ಈಶ್ವರ, ಕೃಷ್ಣ ಲೀಲಾದಲ್ಲಿ ಕಂಸನಾಗಿ ಗಳಿಸಿದ ಜನ ಮೆಚ್ಚುಗೆ. ಚಲನಚಿತ್ರ ನಿರ್ದೇಶನದಿಂದಲೂ ಪಡೆದ ಪ್ರಶಂಸೆ. ಗುಬ್ಬಿ ವೀರಣ್ಣನವರಿಗಾಗಿ ಗುಣಸಾಗರಿ, ಎ.ವಿ. ಮೇಯಪ್ಪನ್ ಸಹಕಾರದಿಂದ ಬೇಡರ ಕಣ್ಣಪ್ಪ, ಷೇಕ್ಸ್ ಪಿಯರನ ಟೇಮಿಂಗ್ ಆಫ್ ದಿ ಶ್ರೂ ಕನ್ನಡ ರೂಪ ಅಬ್ಬಾ ಆ ಹುಡುಗಿ, ಪಂಢರಿಬಾಯಿಯವರಿಗಾಗಿ ತೇಜಸ್ವಿನಿ ಹೀಗೆ ಹಲವಾರು ಚಲನಚಿತ್ರಗಳಲ್ಲಿ ತೊಡಗಿ ನಿರ್ದೇಶಿಸಿದ ಕಟ್ಟಕಡೆಯ ಚಿತ್ರ ಅನುಗ್ರಹದ ನಂತರ ಅಕಾಲಿಕ ಮರಣದಿಂದ ಚಲನಚಿತ್ರರಂಗಕ್ಕಾದ ದೊಡ್ಡನಷ್ಟ. ಇದೇ ದಿನ ಹುಟ್ಟಿದ ಕಲಾವಿದರು ರತ್ನಮ್ಮ ಕೃಷ್ಣಮೂರ್ತಿ – ೧೯೨೫ ತುಳಸೀರಾಂ ಬಿ.ಆರ್ – ೧೯೫೮
* * *