೧೮.೦೫.೧೯೪೫ ತೈಲವರ್ಣ ಚಿತ್ರಕಲೆಯಲ್ಲಿ ಅಗಾಧ ಸಾಧನೆ ಮಾಡಿರುವ ಕೃಷ್ಣಪ್ಪನವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸರ್ಜಾಪುರದ ನೇಕಾರ ಕುಟುಂಬದಲ್ಲಿ. ತಂದೆ ಸಂಪಂಗಿರಾಮಯ್ಯ, ತಾಯಿ ನಾರಾಯಣಮ್ಮ. ಸಾಮಾನ್ಯವಿದ್ಯಾಭ್ಯಾಸಕ್ಕಿಂತ ಚಿತ್ರಕಲೆಯಲ್ಲಿ ಬೆಳೆದ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಬೆಂಗಳೂರಿನ ಅ.ನ.ಸುಬ್ಬರಾಯರ ಕಲಾಮಂದಿರದಲ್ಲಿ. ನಂತರ ಮುಂಬಯಿಯ, ಕರ್ನಾಟಕದ ಮೂಲದವರಾದ ದಂಡಾವತಿ ಮಠರವರ ’ನೂತನ ಶಾಲೆ’ಯಲ್ಲಿ ಕಲಾಶಿಕ್ಷಣ. ಹೆಸರಾಂತ ಕಲಾವಿದರಾದ ಎ.ಎ. ಅಲಮೇಲ್ ಕರ್, ಎಸ್.ಎಮ್.ಜೋಶಿ, ಎಚ್.ಎನ್.ಹಲದನ್ಕರ್ ರವರಲ್ಲಿ ಮುಂದುವರೆದ ಅಭ್ಯಾಸ. ಪಡೆದದ್ದು ಡಿಪ್ಲೊಮ. ಉದ್ಯೋಗಕ್ಕೆ ಸೇರಿದ್ದು ಆರ್ಟ್ ಡಿಸೈನರ್ ಆಗಿ ಬೆಂಗಳೂರಿನ ವೀವರ್ಸ್ ಸರ್ವೀಸ್ ಸೆಂಟರ್ನಲ್ಲಿ. ೨೦೦೧ ರಲ್ಲಿ ನಿವೃತ್ತಿ. ಇದೀಗ ಸದಾಕಾಲ ಚಿತ್ರರಚನೆ. ಕೃತ್ತಿಕಾ ಆರ್ಟ್ಗ್ಯಾಲರಿ, ಗಲ್ಲೇರಿಯಾ – ಮುಂಬಯಿ ಮುಂತಾದೆಡೆ ಏಕವ್ಯಕ್ತಿ ಪ್ರದರ್ಶನಗಳು. ಹಲವಾರು ಸಾಂಘಿಕ ಪ್ರದರ್ಶನಗಳಲ್ಲೂ ಭಾಗಿ. ಆರ್ಟ್ವಿತ್ ಹಾರ್ಟ್ (ಬೆಂಗಳೂರು) ಮುಂಬಯಿಯಲ್ಲಿ, ದಿ ಎಂಡ್ ಆಫ್ ಸೈಲೆನ್ಸ್ – ಚೆನ್ನೈನಲ್ಲಿ; ರಾಷ್ಟ್ರೀಯ ಪ್ರದರ್ಶನ- ದೆಹಲಿಯಲ್ಲಿ; ಸಿಮ್ಲಾದ ಲಲಿತ ಕಲಾ ಅಕಾಡಮಿ ಆಫ್ ಆರ್ಟ್ಸ್, ಕರ್ನಾಟಕ ಪೆಯಿಂಟರ್ಸ್ ಎಕ್ಸ್ಬಿಷನ್, ಚೆನ್ನೈ, ಹೈದರಾಬಾದ್, ಆಲ್ ಇಂಡಿಯಾ ವೀವರ್ಸ್ ಸರ್ವೀಸ್ ಸೆಂಟರ್ ಆರ್ಟಿಸ್ಟ್ಸ್ ಎಕ್ಸಿಬಿಷನ್, ಮಹಾತ್ಮಾಗಾಂಧಿ ಸೆಂಟಿನರಿ ಎಕ್ಸಿಬಿಷನ್ – ಚೆನ್ನೈ, ಮತ್ತು ಮುಂಬಯಿ. ಜೆಮ್ಶೆಡ್ಪುರ ಮುಂತಾದೆಡೆಗಳಲ್ಲಿ ಪ್ರದರ್ಶನ. ಮಕ್ಕಳ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆ, ಬೆಂಗಳೂರಿನಲ್ಲಿ ನಡೆದ ಮಕ್ಕಳ ಚಿತ್ರಕಲಾ ಸ್ಪರ್ಧೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ನ ವಾರ್ಷಿಕ ಚಿತ್ರಕಲಾ ಸ್ಪರ್ಧೆಗಳ ತೀರ್ಪುಗಾರರಾಗಿ, ಅಕಾಡಮಿ ಆಫ್ ಆರ್ಟ್ಸ್ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಲ್ಲಿಸಿದ ಸೇವೆ. ಕರ್ನಾಟಕ ಲಲಿತಕಲಾ ಅಕಾಡಮಿ, ಆಂಧ್ರ, ಸಿ.ವಿ. ರಾಮನ್ ಇನ್ಸ್ಟಿಟ್ಯೂಟ್, ಮ್ಯಾಕ್ಸ್ ಮುಲ್ಲರ್ ಭವನ, ಬಯೋಕಾನ್ ಲಿ. ಮ್ಯಾಕ್ಡೊವೆಲ್, ಕಿರ್ಲೋಸ್ಕರ್ ಕಂ. ಮತ್ತು ಖಾಸಗಿ ವ್ಯಕ್ತಿಗಳ ಸಂಗ್ರಹಾಲಯಗಳಲ್ಲಿ ಇವರ ಚಿತ್ರಗಳು ಸಂಗ್ರಹೀತ. ಸಂದ ಗೌರವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಚಿತ್ರಕಲಾ ಪರಿಷತ್ತಿನ ರಾಷ್ಟ್ರೀಯ ಪ್ರದರ್ಶನದಲ್ಲಿ (ಆರು ಬಾರಿ), ಬಾಪಿ ರಾಜು ಕಲಾಪೀಠಂ, ಗಾರ್ಡನ್ ಸಿಟಿ ಜಾಯ್ಸರವರ ಸೃಷ್ಠಿ, ದೆಹಲಿಯ AIKSS ಸುವರ್ಣ ಮಹೋತ್ಸವ, ಕರ್ನಾಟಕ ಲಲಿತಕಲಾ ಅಕಾಡಮಿ, ಜಿ.ಎಸ್. ಶೆಣೈ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಂಧ್ರ ಅಕಾಡಮಿ, ಹ್ಯಾಂಡ್ಲೂಮ್ ಎಕ್ಸ್ಪೋ ಮುಖ್ಯವಾದುವುಗಳು. ಇದೀಗ ಕರ್ನಾಟಕ ಜಾನಪದ ಕಲೆಯನ್ನುಳಿಸಲು ಪಟಕುಣಿತ, ಡೊಳ್ಳು ಕುಣಿತ, ಬಸವನ ಆಟ ಮುಂತಾದುವುಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ರಚಿಸಿದ ತೈಲವರ್ಣ ಚಿತ್ರಗಳು. ಇದೇ ದಿನ ಹುಟ್ಟಿದ ಕಲಾವಿದರು ಶೆಲ್ವ ಪುಳ್ಳೆ ಅಯ್ಯಂಗಾರ್ = ೧೯೧೫ ಶ್ರೀಧರ್. ಜೆ.ಕೆ. – ೧೯೫೨ ಮಾಲಾರಾಣಿ – ೧೯೬೫
* * *