
ಕೆ.ಎಸ್. ಧರಣೇಂದ್ರಯ್ಯ
December 31
೩೧-೧೨-೧೯೦೩ ೧೩-೮-೧೯೭೧ ಪ್ರತಿಭೆ, ವ್ಯಾಸಂಗ, ಅನುಭವಗಳ ಕ್ರಿಯಾಶೀಲತೆಯಿಂದ ಹಲವಾರು ಮಂತ್ರಿ ಮಹೋದಯರಿಗೆ, ಲೇಖನ, ಭಾಷಣ, ಬಿನ್ನವತ್ತಳೆಗಳ ಕರ್ತೃವಾಗಿದ್ದ ಧರಣೇಂದ್ರಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಉರುಡುಗೆರೆ ಹೋಬಳಿ ತಾಳೇನಹಳ್ಳಿ. ತಂದೆ ಸಣ್ಣ ಅಂಬಣ್ಣ. ಪ್ರಾರಂಭಿಕ ಶಿಕ್ಷಣ ಎಲೆಕ್ಯಾತನಹಳ್ಳಿ. ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ., ಬಿ.ಟಿ. ಪದವಿಗಳು. ಕನ್ನಡ ಬಾವುಟವನ್ನು ಹಾರಿಸಲು ನಡೆಸಿದ ಕೈಂಕರ್ಯ. ಪಂಪ, ರನ್ನ, ಜನ್ನ, ರತ್ನಾಕರರ ಪದ್ಯಗಳನ್ನು ಸರಾಗವಾಗಿ ಹಾಡಿ ಕೇಳುಗರನ್ನು ಮುಗ್ಧಗೊಳಿಸುವ ಕಲೆ ಕರಗತ. ಪದವಿಯ ನಂತರ ಉದ್ಯೋಗಕ್ಕೆ ಸೇರಿದ್ದು ಶಿಕ್ಷಣ ಇಲಾಖೆ. ಕರ್ನಾಟಕ ಸರಕಾರದ ಸಾಹಿತ್ಯ, ಸಂಸ್ಕೃತಿ, ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿ ಹಾಕಿದ ಭದ್ರ ಬುನಾದಿ. ಕನ್ನಡ ವಿಶ್ವಕೋಶ, ಕುಮಾರವ್ಯಾಸ ಭಾರತ, ಕನ್ನಡ-ಕನ್ನಡ ಕೋಶಗಳ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ವಹಿಸಿದ ಪ್ರಮುಖ ಪಾತ್ರ. ಕನ್ನಡಿಗರ ಕಲ್ಪನೆಯ ಸುಂದರ ಕನಸಾದ ರವೀಂದ್ರ ಕಲಾಕ್ಷೇತ್ರ ವಾಸ್ತವಕ್ಕೆ ಇಳಿದುದು ಇವರ ಪ್ರಯತ್ನದಿಂದ. ಧರ್ಮಸ್ಥಳದಲ್ಲಿ ಜರುಗಿದ ಸರ್ವಧರ್ಮ, ಸಾಹಿತ್ಯ, ಸಮ್ಮೇಳನಗಳ ಕಾರ್ಯದರ್ಶಿಯಾಗಿ ತೋರಿದ ಅಸಾಧಾರಣ ಕಾರ್ಯ ಕೌಶಲ. ೧೯೫೧ರಲ್ಲಿ ಮುಂಬಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈರವರನ್ನು ಪ್ರಯಾಸದಿಂದ ಒಪ್ಪಿಸಿದ್ದಲ್ಲದೆ ಹೊರನಾಡಿನಲ್ಲಿ ಸರ್ವಾಂಗ ಸುಂದರವಾಗಿ ನಡೆಸಿದ ಕೀರ್ತಿ. ಆಡಳಿತದಲ್ಲಿ ತೊಡಗಿದ್ದು, ಸಮಯಾಭಾವದಲ್ಲೂ ರಚಿಸಿದ ಕೃತಿಗಳು. ಹಲವಾರು. ಕಾದಂಬರಿ-ವನಮಾಲೆ (ಹನ್ನೊಂದು ಮುದ್ರಣ ಕಂಡ ಕೃತಿ). ಭಕ್ತಿಗೀತೆಗಳು-ಭಕ್ತಿ ಕುಸುಮಾಂಜಲಿ. ವ್ಯಕ್ತಿ ಪರಿಚಯ-ಭಗವಾನ್ ಮಹಾವೀರ. ಪಠ್ಯಪುಸ್ತಕಗಳು-೧ ರಿಂದ ೬ನೇ ತರಗತಿವರೆಗೆ. ಅನುವಾದ-ಭಾರತ ರೈತನ ಜೀವನ, ಭಾರತ ವಸ್ತು ಪ್ರದರ್ಶನ, ಪಂಪ ಆದಿಪುರಾಣ. ಸ್ಥಳ ಪರಿಚಯ-ಕಾರ್ಕಳ, ವೇಣೂರು. ಪುರಾಣಕಥೆ-ಜಿನದತ್ತರಾಯ. ಇತರ-ಪದ್ಮಾವತಿ ಮಹಾತ್ಮೆ. ಸಂಪಾದಿತ-ಆಡಳಿತ ಶಬ್ದಗಳ ಕನ್ನಡ ಕೋಶ. ಉಪಾಧ್ಯಾಯ ಶಿಕ್ಷಣ ತರಗತಿಗಳಿಗೆ ಪಠ್ಯಪುಸ್ತಕ. ಸಾಹಿತ್ಯ-ಸಂಸ್ಕೃತಿ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಜೈನಶಾಸ್ತ್ರ ವಿಶಾರದ, ಸಾಹಿತ್ಯ ಸುಧಾಕರ, ಸಾಹಿತ್ಯ ವಿಭೂಷಣ, ಕರ್ನಾಟಕ ಸಾಹಿತ್ಯ ವಿಭೂಷಣ, ಆಶುಕವಿತಾ ವಿಶಾರದ ಮುಂತಾದ ಪ್ರಶಸ್ತಿಗಳು. ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ.ವಿ. ಗೋಪಾಲಸ್ವಾಮಿ – ೧೮೯೬, ಉಷಾದೇವಿ – ೧೯೩೪ ಹೊರೆಯಾಲ ದೊರೆಸ್ವಾಮಿ – ೧೯೪೬, ಡಿ.ಎನ್. ಶ್ರೀನಾಥ್ – ೧೯೫೦