Loading Events

« All Events

ಚಿರಂಜೀವಿ (ಬಿ.ಆರ್. ಗೋಪಿನಾಥ್)

December 5

.೧೨.೧೯೩೯ ಕಥೆ, ಕಾದಂಬರಿಕಾರರಾದ ಚಿರಂಜೀವಿಯವರು ಹುಟ್ಟಿದ್ದು ಬೆಂಗಳೂರಿನಲ್ಲಿ ೧೯೩೯ ರ ಡಿಸೆಂಬರ್‌ ೫ ರಂದು. ತಂದೆ ಎಲ್. ರಾಘವೇಂದ್ರಮೂರ್ತಿ, ತಾಯಿ ಗಿರಿಜಾಬಾಯಿಯವರು. ಓದಿದ್ದು ಮೆಕ್ಯಾನಿಕಲ್ ಡಿಪ್ಲೊಮ, ತಾಂತ್ರಿಕ ವಿಷಯವಾದರೂ ಬೆಳೆಸಿಕೊಂಡದ್ದು ಸಾಹಿತ್ಯದ ಒಲವು. ಪತ್ರಿಕೋದ್ಯಮದಲ್ಲಿ ಭಾರತೀಯ ವಿದ್ಯಾಭವನದಿಂದ ಪಡೆದ ಡಿಪ್ಲೊಮ. ಶಾಲಾ ದಿನಗಳಲ್ಲಿಯೇ ‘ಬಾಲ ಸಹೋದರ ಸಂಘ’ ಸ್ಥಾಪಿಸಿ ‘ಬಾಲ ಕುಸುಮ’ ಕೈಬರಹದ ಪತ್ರಿಕೆಯನ್ನು ಪ್ರಾರಂಭಿಸಿ ತನ್ನಂತೆ ಬರೆಯುವ ಸ್ನೇಹಿತರಿಗೆ ನೀಡಿದ ಪ್ರೋತ್ಸಾಹ. ಜೊತೆಗೆ ಮಾಸ್ತಿ, ಅ.ನ.ಕೃ., ಶಿವರಾಮ ಕಾರಂತ, ಕಟ್ಟೀಮನಿ ಮುಂತಾದವರುಗಳ ಕಥೆ, ಕಾದಂಬರಿಗಳ ವಿಸ್ತೃತ ಓದು. ಕನ್ನಡ-ಇಂಗ್ಲಿಷ್ ದಿನ, ವಾರ, ಮಾಸಪತ್ರಿಕೆಗಳ ಬಗ್ಗೆ ತೋರುತ್ತಿದ್ದ ಆಸಕ್ತಿ. ಅಂದಿನ ಮಕ್ಕಳ ಪುಸ್ತಕಗಳಾದ ‘ಬಾಲಬಂಧು’, ‘ಗೋಪಿ’, ‘ಚಕ್ಕುಲಿಮಾಮ’, ‘ಪರಿಮಳ’ ಮುಂತಾದ ಪತ್ರಿಕೆಗಳಿಗೆ ಕಿರುಪದ್ಯ, ನಗೆಹನಿ, ಬರೆಯಲು ಪ್ರಾರಂಭ, ಇಂಟರ್‌ಮೀಡಿಯೆಟ್‌ಗೆ ಬರುವ ವೇಳೆಗೆ ಇಂಗ್ಲಿಷ್ ಮತ್ತು ತಮಿಳಿನಿಂದ ಕನ್ನಡಕ್ಕೆ ತಂದ ಹಲವಾರು ಕಥೆಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ಅನುವಾದಗಳ ಜೊತೆಗೆ ಸ್ವತಂತ್ರ ಕಥೆಗಳು ಸುಧಾ, ಮಯೂರ, ಪ್ರಜಾವಾಣಿ, ಕರ್ಮವೀರ, ಕಸ್ತೂರಿ, ತುಷಾರ, ಉದಯವಾಣಿ ಮುಂತಾದ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟಿತ. ಉದ್ಯೋಗಕ್ಕಾಗಿ ಸೇರಿದ್ದು ಪ್ಲಾನಿಂಗ್ ಎಂಜನಿಯರಾಗಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ. ೧೯೮೨-೮೩ ರಲ್ಲಿ ತರಂಗ ವಾರಪತ್ರಿಕೆ ಪ್ರಾರಂಭವಾದಾಗ ಎಚ್.ಎ.ಎಲ್‌.ಗೆ ರಾಜೀನಾಮೆ ನೀಡಿ ಸೇರಿದ್ದು ತರಂಗ ವಾರಪತ್ರಿಕೆಯ ಸಂಪಾದಕೀಯ ಬಳಗ. ತುಷಾರ ಮಾಸಪತ್ರಿಕೆ ಮತ್ತು ಉದಯವಾಣಿ ದೀಪಾವಳಿ ವಿಶೇಷಾಂಕದ ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತಿ. ನಿವೃತ್ತಿಯ ನಂತರ ಕೆಲಕಾಲ ಕಸ್ತೂರಿ, ಕರ್ಮವೀರ ಪತ್ರಿಕೆಗಳ ಸಂಪಾದಕತ್ವದ ಹೊಣೆಗಾರಿಕೆ. ಕಥೆ, ಕಾದಂಬರಿ, ಜೀವನ ಚರಿತ್ರೆಗಳ ಜೊತೆಗೆ ಹಲವಾರು ವ್ಯಕ್ತಿ ವಿಕಸನ ಕೃತಿಗಳೂ ಪ್ರಕಟಿತ. ‘ಋಣ’, ‘ಉದ್ರಿಕ್ತರು’ ಮೊದಲಾದ ಕಥಾಸಂಕಲನಗಳು. ‘ಕರ್ನಾಟಕ ಪತ್ರಿಕೋದ್ಯಮ’, ‘ಚಲನ ಚಿತ್ರ ಪತ್ರಿಕೋದ್ಯಮ ನಡೆದು ಬಂದ ದಾರಿ; ‘ಬೆಳಗಿನ ಕಾಫಿಯ ಜೊತೆಗೆ ಪತ್ರಿಕೆ!’ ಮೊದಲಾದ ಪತ್ರಿಕೋದ್ಯಮ ಕೃತಿಗಳು; ಸಿ.ಕೆ. ವೆಂಕಟರಾಮಯ್ಯ, ದಿವಾನ್ ಪೂರ್ಣಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಾದವರ ಜೀವನ ಚರಿತ್ರೆಗಳು; ವ್ಯಕ್ತಿತ್ವದಲ್ಲಿ ಸೊಗಸಿರಬೇಕು, ಅಜ್ಜಿ, ಅಜ್ಜಿ ಕಥೆ ಹೇಳಿ, ಯಶಸ್ಸು ನಿಮ್ಮದು ಎಟುಕಿಸಿಕೊಳ್ಳಿ!, ಯಶಸ್ಸಿಗೊಂದು ಯುಕ್ತಿಮಾರ್ಗ ಮೊದಲಾದ ವ್ಯಕ್ತಿ ವಿಕಸನ ಕೃತಿಗಳು; ಸಾಹಿತ್ಯವ್ಯಕ್ತಿ ಚಿತ್ರ ‘ಕವಿ ಸಂಜೆ’ ಮತ್ತು ಇತಿಹಾಸ ಕೃತಿ ನಮ್ಮ ನಿಮ್ಮ ಬೆಂಗಳೂರು. ಇವಲ್ಲದೆ ತಮಿಳಿನಿಂದ ಹಲವಾರು ಕೃತಿಗಳ ಅನುವಾದ. ತಿಳಿವು ಗೆಲವು, ಗೆಲುವಿನ ಗುಟ್ಟು, ಮನಸ್ಸೆ ರಿಲ್ಯಾಕ್ಸ್ ಪ್ಲೀಸ್ (ಭಾಗ ೧, ೨), ಮನಸ್ಸು ಅರಳಲಿ, ಒಂದಿಷ್ಟು ಅಮೃತ ಒಂದಿಷ್ಟು ವಿಷ, ಶ್ರೀಮದ್‌ಭಾಗವತದ ಮೊದಲಸ್ಕಂದ, ಸನ್ನಿವೇಶದಲ್ಲಿ ಸಿಕ್ಕವರು, ಸ್ಕೋರಿಂಗ್ ಸ್ಕಿಲ್ಸ್, ಕಾಮಿಕ್ಸ್ ಪುಸ್ತಕಗಳು, ವಯಸ್ಕರ ಶಿಕ್ಷಣಕ್ಕೆ ಸಂಬಂಧಿಸಿದ ಕೃತಿಗಳೂ ಸೇರಿ ಸುಮಾರು ೫೦ ಕ್ಕೂ ಕೃತಿ ಪ್ರಕಟಿತ. ಇವರ ಸಂಪಾದಕತ್ವದಲ್ಲಿ ‘ವಸಂತ ಬಾಲ ಸಾಹಿತ್ಯ ಮಾಲೆ’ಯಲ್ಲಿ ವಸಂತ ಪ್ರಕಾಶನಕ್ಕಾಗಿ ಹಲವಾರು ಮಕ್ಕಳ ಕೃತಿಗಳು ಪ್ರಕಟಗೊಂಡಿವೆ. ಇದೀಗ ರಾಷ್ಟ್ರೋತ್ಥಾನ ಸಾಹಿತ್ಯದ ಭಾರತ-ಭಾರತಿ ಪುಸ್ತಕ ಸಂಪದ ಮಾಲೆ-೨ ರ ಪ್ರಧಾನ ಸಂಪಾದಕರ ಜವಾಬ್ದಾರಿ.

Details

Date:
December 5
Event Category: