
- This event has passed.
ಡಾ. ಕೃಷ್ಣಾನಂದ ಕಾಮತ್
September 29
೨೯-೯-೧೯೩೪ ೨೦-೨-೨೦೦೨ ಕೀಟ ಸಂಶೋಧನಾಕಾರಿ, ಛಾಯಾಗ್ರಾಹಕ, ಸಾಹಿತಿ ಕೃಷ್ಣಾನಂದ ಕಾಮತರು ಹುಟ್ಟಿದ್ದು ಹೊನ್ನಾವರದಲ್ಲಿ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಪ್ರಾರಂಭಿಕ ಶಿಕ್ಷಣ ಹೊನ್ನಾವರ. ಕಾಲೇಜು ಶಿಕ್ಷಣ ಕುಮಟಾದ ಕೆನರಾ ಕಾಲೇಜು. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿಗಾಗಿ ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರಗಳ ಅಧ್ಯಯನ. ಪದವಿಯ ನಂತರ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ೧೯೫೯ರಲ್ಲಿ ಎಂ.ಎಸ್ಸಿ. ತೇರ್ಗಡೆ. ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಕರಾಗಿ ನೇಮಕ. ಪಿಎಚ್.ಡಿ.ಗಾಗಿ ನೋಂದಣಿ. ಅಮೆರಿಕದ ನ್ಯೂಯಾರ್ಕ್ ವಿಶ್ವವಿದ್ಯಾಲಯಕ್ಕೆ ಸೇರಿದ ಸ್ವಾರೆಕ್ಯೂಸ್ ವಿ.ವಿ.ದಲ್ಲಿ ಪಡೆದ ರಾಕ್ಫೆಲರ್ ವಿದ್ಯಾರ್ಥಿವೇತನ. ಅಮೆರಿಕ ಪ್ರಯಾಣ. ಸಸ್ಯದ ಕೀಟಾಣು ಬೆಳವಣಿಗೆ ಕುರಿತು ಅಧ್ಯಯನ, ಪಡೆದ ಪಿಎಚ್.ಡಿ. ಪದವಿ. ೧೯೬೫ರಲ್ಲಿ ಭಾರತಕ್ಕೆ ಮರಳಿ ಉದಯಪುರ ವಿಶ್ವವಿದ್ಯಾಲಯದ ಜೋಬನೇರ ಕೃಷಿ ಕಾಲೇಜಿನಲ್ಲಿ ಕೀಟಶಾಸ್ತ್ರದ ಸಂಶೋಧನಾಕಾರಿಯಾಗಿ ನೇಮಕ. ೧೯೬೮ರಲ್ಲಿ ಪಶ್ಚಿಮ ಬಂಗಾಲದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ಆಫ್ ಬಯಾಲಜಿಕಲ್ ಕಂಟ್ರೋಲ್ ಸಂಸ್ಥೆಯಲ್ಲಿ ಕೀಟ ಸಂಶೋಧನಾಕಾರಿಯಾಗಿ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ. ೧೯೭೦ರಲ್ಲಿ ರಾಜೀನಾಮೆ ನೀಡಿ ಬೆಂಗಳೂರಿನಲ್ಲಿ ತೆರೆದ ವೈಜ್ಞಾನಿಕ ಛಾಯಾಗ್ರಹಣದ ಲ್ಯಾಬೊರೆಟರಿ, ವಿಜ್ಞಾನ ಸಂಸ್ಥೆಗಳು ಪಡೆದ ಲಾಭ. ೧೯೭೬ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಫೆಲೋಷಿಪ್ ಪಡೆದು ಮಧ್ಯಪ್ರದೇಶದ ಗಿರಿವಾಸಿ ಜನಾಂಗಗಳ ಅಧ್ಯಯನ. ತೆಗೆದ ಸಾವಿರಾರು ಛಾಯಾಚಿತ್ರಗಳು. ಸಾಹಿತ್ಯದಲ್ಲಿ ಆಸಕ್ತಿ ಮೂಡಿ ರಚಿಸಿದ ಕೃತಿಗಳು. ಪ್ರವಾಸಕಥನ-ನಾನೂ ಅಮೆರಿಕೆಗೆ ಹೋಗಿದ್ದೆ, ವಂಗ ದರ್ಶನ, ನಾ ರಾಜಾಸ್ಥಾನದಲ್ಲಿ, ಬಸ್ತರ ಪ್ರವಾಸ (ಗಿರಿಜನರ ಪರಿಚಯ) ಮಧ್ಯಪ್ರದೇಶದ ಮಡಿಲಲ್ಲಿ, ಕಾಲರಂಗ, ಪ್ರೇಯಸಿಗೆ ಪತ್ರಗಳು, ಪ್ರವಾಸ ಪ್ರಬಂಧ, ಮರು ಪಯಣ. ಕಾದಂಬರಿ-ಭಗ್ನಸ್ವಪ್ನ. ಪರಿಸರ ವಿಜ್ಞಾನ ಕೃತಿಗಳು-ಪ್ರಾಣಿ ಪರಿಸರ, ಪಶುಪಕ್ಷಿ ಪ್ರಪಂಚ, ಕೀಟ ಜಗತ್ತು, ಸಸ್ಯಪ್ರಪಂಚ, ಸಸ್ಯ ಪರಿಸರ, ಇರುವೆಯ ಇರವು, ಕಾಗೆಯ ಕಾಯಕ, ಸರ್ಪ ಸಂಕುಲ. ಕಲೆ- ಕಾವಿಕಲೆ, ಕೊಂಕಣ್ಯಾಲಿ ಕಾವಿಕಲಾ (ಕೊಂಕಣಿ ಭಾಷೆ) ಮುಂತಾದ ೨೦ಕ್ಕೂ ಹೆಚ್ಚು ಕೃತಿ ರಚನೆ. ಕೆಲವು ಕೃತಿಗಳು ಬೆಂಗಳೂರು, ಕರ್ನಾಟಕ ವಿ.ವಿ.ದ ತರಗತಿಗಳಿಗೆ ಪಠ್ಯಗಳಾಗಿ ಆಯ್ಕೆ. ಪ್ರಶಸ್ತಿ ಗೌರವಗಳು-ರಾಜ್ಯ ಸಾಹಿತ್ಯ ಅಕಾಡಮಿಯಿಂದ ನಾನೂ ಅಮೆರಿಕೆಗೆ ಹೋಗಿದ್ದೆ, ಪ್ರಾಣಿಪರಿಸರ, ಬಸ್ತರ ಪ್ರವಾಸಕೃತಿಗಳಿಗೆ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರಶಸ್ತಿ, ಕಾವಿಕಲೆ ಕೃತಿಗೆ ಟಿ.ಎಂ.ಎ. ಪೈ ಪ್ರತಿಷ್ಠಾನ ವಿಶೇಷ ಬಹುಮಾನ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ಮಹಾಲಕ್ಷ್ಮೀ – ೧೯೧೯ ಕೃ. ನಾರಾಯಣರಾವ್ – ೧೯೩೦ ನೀಲತ್ತಳ್ಳಿ ಕಸ್ತೂರಿ – ೧೯೩೧