೩೧-೧-೧೮೯೬ ಭಾಷಣ, ಕಾವ್ಯವಾಚನದಲ್ಲಿ ಗಾರುಡಿಗ ದನಿಯ ಬೇಂದ್ರೆಯವರು ಹುಟ್ಟಿದ್ದು ಧಾರವಾಡದ ಪೋತನೀಸರ ಗಲ್ಲಿಯ ಗುಣಾರಿಯವರ ಮನೆಯಲ್ಲಿ. ಶಿರಹಟ್ಟಿ ಇವರ ಊರು. ತಂದೆ ರಾಮಚಂದ್ರ ಪಂತ, ತಾಯಿ ಅಂಬೂತಾಯಿ. ಗಂಡಮಾಲಿ ರೋಗದಿಂದ ತಂದೆಯ ಸಾವು. ಚಿಕ್ಕಪ್ಪನ ಆಶ್ರಯದಲ್ಲಿ ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಬಿ.ಎ. ಪದವಿ. ವಿಕ್ಟೋರಿಯಾ ಹೈಸ್ಕೂಲಿನಲ್ಲಿ ೩ ವರ್ಷ ಶಿಕ್ಷಕ ಹುದ್ದೆ. ಮಾತೃ ವಿಯೋಗ. ಸೊಂಡೂರು ಸಂಸ್ಥಾನದಲ್ಲಿ ಕೆಲಕಾಲ ನೌಕರಿ. ಬೆಳೆದ ಕಾವ್ಯಾಸಕ್ತಿ. ಸಾಮ್ರಾಜ್ಯ ಶಾಹಿ ವಿರುದ್ಧ ಬರೆದಕವನ ‘ನರಬಲಿ’ ಪ್ರಕಟಣೆ. ಜೈಲುಶಿಕ್ಷೆ. ಹೊರಬಂದ ಮೇಲೆ ಉದ್ಯೋಗದ ಬೇಟೆ. ೧೯೩೫ರಿಂದ ೪೦ರವರೆಗೆ ನಿರುದ್ಯೋಗ, ಮಾಸ್ತಿಯವರ ಜೀವನ ಪತ್ರಿಕೆಯ ಸಂಪಾದಕತ್ವ. ಒಂದು ವರ್ಷ ಗದುಗಿನ ಚೌಹಾನ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ. ೧೯೪೨-೪೩ರಲ್ಲಿ ಪೂನಾದ ಕಾಮರ್ಸ್ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕ. ೧೯೪೪ರಲ್ಲಿ ಡಿ.ಎ.ವಿ. ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್. ಹನ್ನೆರಡು ವರ್ಷ ಬೋಧನೆ. ನಿವೃತ್ತಿ. ೧೯೫೬ರಲ್ಲಿ ಆಕಾಶವಾಣಿಯಲ್ಲಿ ಪ್ರೊಡ್ಯೂಸರ್, ಸಲಹೆಗಾರರಾಗಿ ಪಿ.ಎಂ. ಲಾಡ್ರವರಿಂದ ದೊರೆತ ಉದ್ಯೋಗ. ಬಡತನದಿಂದ ಬಂದ ನೊಂದ ಜೀವ. “ಬಡತನ, ಸಿರಿತನ ಕಡೆತನಕ ಉಳಿದಾವೇನ?” ಇದು ಕಾವ್ಯದ ಮೂಲ ದೃಷ್ಟಿ, ಕಾವ್ಯ ಅರಳಿದ ಬಗೆ. ೧೯೨೨ರಲ್ಲಿ ಮೊದಲ ಕವನ ಸಂಕಲನ ಕೃಷ್ಣಕುಮಾರಿ ಪ್ರಕಟಣೆ. ನಂತರ-೨೬ ಕವನ ಸಂಕಲನಗಳು. ಆಯ್ದ ಕವನ ಸಂಕಲನಗಳು-೩ ; ಮರಣೋತ್ತರ ಕವನ ಸಂಗ್ರಹಗಳು-೫, ನಾಟಕಗಳು-೪ ; ವಿಮರ್ಶೆ ಹಾಗೂ ಗದ್ಯಕೃತಿಗಳು-೧೧ ; ಉಪನ್ಯಾಸ ಸಂಗ್ರಹಗಳು-೨ ; ಸಣ್ಣಕಥೆ ಮತ್ತು ಹರಟೆ-೧ ; ಅನುವಾದಿತ ಕಥೆಗಳು-೧ ; ಸಂಪಾದಿತ ಕೃತಿಗಳು-೪ ; ಸಂಪಾದಕರಾಗಿದ್ದ ಪತ್ರಿಕೆಗಳು-೪ ; ಕನ್ನಡ ಅನುವಾದ ಕೃತಿಗಳು-೬ ; ಮರಾಠಿಯಲ್ಲಿ ರಚಿಸಿದ ಗ್ರಂಥಗಳು-೫ ; ಇಂಗ್ಲಿಷ್ನಲ್ಲಿ ಬರೆದ ಗ್ರಂಥ-A THEORY OF IMMORTALITY. ಸಂದ ಪ್ರಶಸ್ತಿಗಳು ಹಲವಾರು. ಮುಂಬೈನ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ, ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಳ್ಕರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕಾಶಿ ವಿಶ್ವವಿದ್ಯಾಪೀಠ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡಮಿ ಗೌರವ ಸದಸ್ಯತ್ವ, ಜ್ಞಾನಪೀಠ ಪ್ರಶಸ್ತಿ ಮುಂತಾದುವು. ವರಕವಿ ನಮ್ಮನಗಲಿದ್ದು ೨೬.೧೦.೧೯೮೧ರ ದೀಪಾವಳಿಯಂದು. ಇದೇ ದಿನ ಹುಟ್ಟಿದ ಸಾಹಿತಿಗಳು : ರಾಮನಾಥ ಜೋಶಿ – ೧೯೩೨ ಪ್ರಭಾಕರ ರೈ – ೧೯೪೦

