
- This event has passed.
ಪಿ. ಕಾಳಿಂಗರಾವ್
August 30
೩೧.೮.೧೯೧೪ ೨೧.೯.೧೯೮೧ ಸುಗಮ ಸಂಗೀತದ ಆದ್ಯಪ್ರವರ್ತಕರಲ್ಲೊಬ್ಬರಾದ, ಕಿನ್ನರ ಕಂಠದ ಕಾಳಿಂಗರಾಯರು ಹುಟ್ಟಿದ್ದು ಉಡುಪಿ ಜಿಲ್ಲೆಯ ಆರೂರಿನಲ್ಲಿ. ತಂದೆ ನಾರಾಯಣರಾವ್, ತಾಯಿ ನಾಗರತ್ನಮ್ಮ. ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ. ಸೋದರಮಾವ ಸೂರಾಲ್ ಮಂಜಯ್ಯನವರಿಂದ ದೇವರನಾಮ ಭಕ್ತಿ ಗೀತೆಗಳ ಶಿಕ್ಷಣ, ಮುಂಡಾಜೆ ರಂಗನಾಥ ಭಟ್ಟರು ತಮ್ಮ ಅಂಬಾಪ್ರಸಾದಿತ ನಾಟಕ ಮಂಡಲಿಯಲ್ಲಿ ಕೃಷ್ಣ, ಲೋಹಿತಾಶ್ವ, ಧ್ರುವ ಮುಂತಾದ ಬಾಲ ಪಾತ್ರಗಳ ಜೊತೆಗೆ ನೀಡಿದ ಸಂಗೀತ ಶಿಕ್ಷಣ. ರಾಮಚಂದ್ರ ಬುವಾ, ಮಳೇಕರ್, ವೆಂಕಟರಾವ್ ರಾಮದುರ್ಗ ಅವರಲ್ಲಿ ಕಲಿತ ಹಿಂದೂಸ್ತಾನಿ ಸಂಗೀತ. ಗುಬ್ಬಿ ಕಂಪನಿ ಸೇರಿ ದಶಾವತಾರ ನಾಟಕಕ್ಕೆ ನೀಡಿದ ಸಂಗೀತ. ಶಿವಮೊಗ್ಗದಲ್ಲಿ ನೀಡಿದ ಶಾಸ್ತ್ರೀಯ ಸಂಗೀತ ಕಚೇರಿ. ಪ್ರತಿಭೆಗೆ ಮೆಚ್ಚಿ ಪ್ರೇಕ್ಷಕರಿಂದ ಶಾಲು, ಚಿನ್ನದ ಉಂಗುರ, ತೋಡಗಳ ಉಡುಗೊರೆ. ಚಲನಚಿತ್ರದ ಆಕರ್ಷಣೆಯಿಂದ ಮದರಾಸಿಗೆ ಪ್ರಯಾಣ. ರಾಯರ ಸೊಸೆ, ವಸಂತಸೇನಾ, ಕೃಷ್ಣಲೀಲಾ, ಜೀವನನಾಟಕ, ಮಹಾನಂದ ಮೊದಲಾದ ಚಿತ್ರಗಳಲ್ಲಿ ನಟನೆಯ ಜೊತೆಗೆ ಸಂಗೀತ ನಿರ್ದೇಶನ. ಕಿತ್ತೂರು ಚೆನ್ನಮ್ಮ, ಅಬ್ಬಾ ಆ ಹುಡುಗಿ, ಅಣ್ಣ-ತಂಗಿ, ತುಂಬಿದ ಕೊಡ ಚಲನಚಿತ್ರ ಗಾಯನದಿಂದ ದೊರೆತ ಪ್ರಸಿದ್ಧಿ. ಶಿಷ್ಯೆಯರಾದ ಸೋಹನ್ ಕುಮಾರಿ, ಮೋಹನ್ ಕುಮಾರಿಯರೊಡನೆ ದೇಶಾದ್ಯಂತ ನೀಡಿದ ಸುಗಮ ಸಂಗೀತ ಕಚೇರಿಗಳು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಯ್ಯ ಬೆಳದಿಂಗಳೇ ಮುಂತಾದ ಹಾಡುಗಳಿಂದ ಕೇಳುಗರಲ್ಲಿ ಮಾಡಿದ ರೋಮಾಂಚನ. ಆಕಾಶವಾಣಿ ಗಾಯಕರಾಗಿ ನೀಡಿದ ನೂರಾರು ಕಾರ್ಯಕ್ರಮಗಳು. ರಾಜರತ್ನಂರವರ ರತ್ನನಪದಗಳಿಗೆ ಸಂಯೋಜಿಸಿದ ಪಾಶ್ಚಾತ್ಯ ಸಂಗೀತದ ಧಾಟಿ. ಲಕ್ಷಾಂತರ ಕೇಳುಗರ ಹೃದಯ ಗೆದ್ದಿದ್ದು ಗಾಯಕರಿಗೆ ಜಾನಪದ ಸಂಗೀತ ರತ್ನ, ಬಾಲ ಗಂಧರ್ವ, ಜಾನಪದ ಕಲಾ ಚಕ್ರವರ್ತಿ, ಗಾಯನ ಚಕ್ರವರ್ತಿ, ಗಾಯನ ಕಂಠೀರವ, ಕನ್ನಡ ಉದಯಗಾನ ಕೋಗಿಲೆ, ಸಂಗೀತ ರಸ ವಿಹಾರಿ ಮುಂತಾದ ಗೌರವಗಳು. ನಿಧನರಾದಾಗ ಸ್ಮಶಾನ ಪ್ರವೇಶಿಸಿದ ದೇಹವನ್ನು ಅಭಿಮಾನಿಗಳ ಕೋರಿಕೆಯ ಮೇರೆಗೆ ಪುನಃ ಸಂಪಂಗಿರಾಮ ನಗರದ ಸಾಂಸ್ಕೃತಿಕ ವೇದಿಕೆಗೆ ತಂದದ್ದೇ ಗಾಯಕರ ಜನಪ್ರಿಯತೆಗೆ ಸಾಕ್ಷಿ. ಇದೇ ದಿನ ಹುಟ್ಟಿದ ಕಲಾವಿದರು ರಾಜಗೋಪಾಲ ಪುಣಂಚತ್ತಾಯ – ೧೯೩೪ ರಾಘವೇಂದ್ರ ಎಚ್.ಕೆ – ೧೯೬೧
* * *