೨೯.೦೧.೧೯೫೫ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ ಪ್ರತಿಭಾರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಹ್ಲಾದ್, ತಾಯಿ ಪ್ರೇಮಾ. ತಂದೆ ತಾಯಿ ಇಬ್ಬರೂ ಬೋಧಕ ವೃತ್ತಿಯಲ್ಲಿದ್ದವರೆ. ಓದಿನಲ್ಲಿ ಸದಾ ಮುಂದಿದ್ದ ಪ್ರತಿಭಾರವರು ಪಡೆದದ್ದು ಬಿ.ಎಡ್ ಮತ್ತು ಕಮ್ಯೂನಿಕೇಷನ್ನಲ್ಲಿ ಎಂ.ಎಸ್. ಪದವಿ. ಆದರೆ ಒಲಿದದ್ದು ಭರತನಾಟ್ಯ ಮತ್ತು ಕುಚಿಪುಡಿ ನೃತ್ಯಗಳತ್ತ. ಪ್ರೊ. ಯು.ಎಸ್. ಕೃಷ್ಣರಾವ್ ಮತ್ತವರ ಪತ್ನಿ ಚಂದ್ರಭಾಗ ದೇವಿಯವರಲ್ಲಿ ಕಲಿತದ್ದು ಭರತನಾಟ್ಯ ಶಿಕ್ಷಣ. ಶ್ರೀಮತಿ ಸುನಂದಾ ದೇವಿಯವರಲ್ಲಿ ಕಲಿತದ್ದು ಕೂಚಿಪುಡಿ ನೃತ್ಯ. ರಂಗಪ್ರವೇಶ ಮಾಡಿದ್ದು ೧೯೭೧ರಲ್ಲಿ. ನಂತರ ಹಲವಾರು ಕಡೆ ನೃತ್ಯ ಪ್ರದರ್ಶನಗಳು. ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯಕ್ಕೆ ಇವರು ತಂದುಕೊಟ್ಟದ್ದು ಅಂತಾರಾಷ್ಟ್ರೀಯ ಮಾನ್ಯತೆ. ಖಜುರಾಹೋ ಉತ್ಸವ ಕೊನಾರ್ಕ್ ನೃತ್ಯೋತ್ಸವ, ಉಸ್ತಾದ್ ಅಲ್ಲಾ ಉದ್ದೀನ್ಖಾನ್ ಉತ್ಸವ, ಪಂಡಿತ ದುರ್ಗಾಲಾಲ್ ಸ್ಮಾರಕ ನೃತ್ಯೋತ್ಸವ, ಸ್ಪಿರಿಟ್ ಆಫ್ ಫ್ರೀಡಮ್ ಕನ್ಸರ್ಟ್ಸ್ ಫಾರ್ ನ್ಯಾಷನಲ್ ಇಂಟಿಗ್ರೇಷನ್, ಪುಣೆ ಗಣೇಶೋತ್ಸವ, ತಂಜಾವೂರು ನೃತ್ಯೋತ್ಸವ, ನಾಟ್ಯಾಂಜಲಿ (ಚಿದಂಬರಂ) ಮುಂತಾದ ದೇಶದ ಪ್ರಮುಖ ನೃತ್ಯೋತ್ಸವಗಳಲ್ಲಿ ಭಾಗಿ. ಅಂತಾರಾಷ್ಟ್ರೀಯ ನೃತ್ಯೋತ್ಸವಗಳಾದ ಜಪಾನಿನ ಓಕೊಯಾಮ ಇಂಟರ್ ನ್ಯಾಷನಲ್ ಡಾನ್ಸ್ ಫೆಸ್ಟಿವಲ್, ಮ್ಯಾನ್ ಚೆಸ್ಟರ್ ವಿಶ್ವ ಕನ್ನಡ ಸಮ್ಮೇಳನ, ಯುನೈಟೆಡ್ ನೇಷನ್ಸ್ ಇಂಟರಿಯಮ್ ಸಮಿತಿಯಿಂದ ಆಹ್ವಾನ, ಮನಿಲಾ ಅಂತಾರಾಷ್ಟ್ರೀಯ ನೃತ್ಯ ಸಮ್ಮೇಳನ ಮುಂತಾದುವುಗಳಲ್ಲಿ ಭಾಗಿ. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ನಡೆಸಿಕೊಟ್ಟ ಉನ್ನತ ಸ್ತರದ ತರಗತಿಗಳು. ಹಲವಾರು ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ. ಪತ್ರಿಕೆಗಳಿಗೆ ಬರೆದ ಸಂಶೋಧನಾತ್ಮಕ ಲೇಖನಗಳು, ನೃತ್ಯ ವಿಮರ್ಶಕಿಯಾಗಿ ನಿರ್ವಹಿಸಿದ ಕಾರ್ಯ. ದೂರದರ್ಶನ ಧಾರಾವಾಹಿಗಳಲ್ಲಿ ನಟಿಯಾಗಿ, ‘ನೆಕ್ಟರ್ ಇನ್ ಸ್ಟೋನ್’ ಸಾಕ್ಷ್ಯ ಚಿತ್ರದಲ್ಲಿ ನಿರ್ವಹಿಸಿದ ನೃತ್ಯ ಸಂದರ್ಭಗಳು, ತಂದ ಅಪಾರ ಪ್ರಶಂಸೆ, ಪ್ರಶಸ್ತಿ. ಹಲವಾರು ಪ್ರಶಸ್ತಿಗಳು, ಸಿಂಗಾರಮಣಿ (ಸುರ್ ಸಿಂಗಾರ್-ಮುಂಬಯಿ) ನಾಟ್ಯ ಭಾರತಿ- ವಿರೂಪಾಕ್ಷ ವಿದ್ಯಾರಣ್ಯ ಮಹಾಪೀಠ; ಮಹಿಳಾ ಶಿರೋಮಣಿ-ಶಾಸ್ತ್ರೀಯ ನೃತ್ಯಕ್ಕಾಗಿ ಶಿರೋಮಣಿ ಫೌಂಡೇಶನ-ದೆಹಲಿ; ಬೆಸ್ಟ್ ಡಾನ್ಸರ್-ಭುವನೇಶ್ವರ್; ಕರ್ನಾಟಕ ಕಲಾಶ್ರೀ-ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಮುಂತಾದ ಹಲವಾರು ಗೌರವ ಪ್ರಶಸ್ತಿಗಳು. ಇದೇ ದಿನ ಹುಟ್ಟಿದ ಕಲಾವಿದರು : ರಾವ್ ಕೆ.ಜೆ. – ೧೯೩೦ ಮೋಹನ ಸೋನ – ೧೯೫೪ ಮಧುಪ್ಯಾಟಿ – ೧೯೭೦
* * *