೨೫.೦೬.೧೯೫೭ ಚಿತ್ರಕಲೆ, ಕಾವ್ಯರಚನೆ, ಸಮಾಜ ಸೇವೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಪ್ರೇಮಾರವರು ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲ್ಲೂಕಿನ ಹೊಳೆ ಆಲೂರು. ತಂದೆ ವಿರೂಪಾಕ್ಷಯ್ಯ ಹಿರೇಮಠ, ತಾಯಿ ಶಾಂತಾದೇವಿ. ಓದಿದ್ದು ಬಿ.ಎ. ಪದವಿ ಮತ್ತು ಆರ್ಟ್ ಮಾಸ್ಟರ್ ಟೀಚಿಂಗ್, ಟೀಚಿಂಗ್ ಜೊತೆಗೆ ಮಾಡೆಲಿಂಗ್, ಪೆಯಿಂಟಿಂಗ್ಸ್ನಲ್ಲೂ ಡಿಪ್ಲೊಮ ಪಡೆದು ಹ್ಯಾಟ್ರಿಕ್ ಸಾಧನೆ. ಉದ್ಯೋಗಕ್ಕೆ ಸೇರಿದ್ದು ಗದಗದ ವಿಜಯಾ ಆರ್ಟ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ಚಿತ್ರಕಲೆಯ ಬಗ್ಗೆ ಚಿಕ್ಕಂದಿನಿಂದಲೂ ಬೆಳೆದ ಒಲವು. ಕಲಾವಿದ ಟಿ.ವಿ. ಅಕ್ಕಿಯವರಿಂದ ಪಡೆದ ಮಾರ್ಗದರ್ಶನ. ವಾಚೇದ ಮಠದ ಗುರುಗಳ ಪ್ರೋತ್ಸಾಹ. ಗದಗ, ಹುಬ್ಬಳ್ಳಿ, ಪುಣೆ, ಚೆನ್ನೈ, ಮೈಸೂರು, ಬೆಂಗಳೂರು, ಹೈದರಾಬಾದ್ ಮುಂತಾದೆಡೆ ನಡೆಸಿದ ಏಕವ್ಯಕ್ತಿ ಪ್ರದರ್ಶನಗಳು. ಬೆಂಗಳೂರು, ಹೈದರಾಬಾದ್ನಲ್ಲಿ ನಡೆಸಿದ ಸಾಂಘಿಕ ಪ್ರದರ್ಶನ. ಮಡಕೇರಿಯಲ್ಲಿ ನಡೆದ ರಾಜ್ಯಮಟ್ಟದ ಕಲಾ ಶಿಬಿರದ ನಿಸರ್ಗ ಚಿತ್ರಣ, ಭಾವಚಿತ್ರದ ಕಲಾಭ್ಯಾಸಕ್ಕಾಗಿ ಕರ್ನಾಟಕ ಲಲಿತ ಕಲಾ ಅಕಾಡಮಿಯಿಂದ ಆಯ್ಕೆಗೊಂಡ ಕಲಾವಿದೆ. ರಾಜ್ಯಮಟ್ಟದ ಧಾರವಾಡದ ಮಹಿಳಾ ಕಲಾ ಶಿಬಿರದ ಕರ್ನಾಟಕ ಲಲಿತ ಕಲಾ ಅಕಾಡಮಿ ಕಲಾ ಶಿಬಿರದಲ್ಲೂ ಭಾಗಿ. ಇವರ ಹಲವಾರು ಸೃಜನ ಶೀಲ ಚಿತ್ರಗಳು ದೆಹಲಿಯ ರಾಷ್ಟ್ರೀಯ ಲಲಿತ ಕಲಾ ಅಕಾಡಮಿ ಮ್ಯೂಸಿಯಂ, ಸಾಂಪ್ರದಾಯಿಕ ಚಿತ್ರಕಲೆಯು ಬೆಂಗಳೂರಿನ ಪ್ರಾಚ್ಯ ವಸ್ತು ಸಂಗ್ರಹಾಲಯ, ಡಿ.ಸಿ. ಆಫೀಸ್ ಗದಗ ಮುಂತಾದೆಡೆ ಸಂಗ್ರಹೀತ. ಕರ್ನಾಟಕ ಲಲಿತ ಕಲಾ ಅಕಾಡಮಿ ಬೆಂಗಳೂರು, ಮೈಸೂರು ದಸರಾ ವಸ್ತುಪ್ರದರ್ಶನ, ಗದಗದಲ್ಲಿ ನಡೆದ ರಾಷ್ಟ್ರೀಯ ಕಲಾಮೇಳ, ರೀಜನಲ್ ಆರ್ಟ್ ಎಕ್ಸಿಬಿಷನ್ ಮುಂತಾದೆಡೆಯಲ್ಲೂ ಸಂಗ್ರಹೀತ. ಹಲವಾರು ಸಾಮಾಜಿಕ ಸಂಸ್ಥೆಗಳ ಒಡನಾಟ. ಗದಗ ಜಿಲ್ಲಾ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ, ಕದಳಿ ವೇದಿಕೆ ಮಾಜಿ ಅಧ್ಯಕ್ಷೆ, ಶರಣ ಸಾಹಿತ್ಯ ಸಂಘಟನೆಯ ಮಹಿಳಾ ಕಾರ್ಯದರ್ಶಿ. ಜಿಲ್ಲಾ ಜಾಗೃತ ಮಹಿಳಾ ವೇದಿಕೆ, ಗದಗ ಜಿಲ್ಲಾ ಉಪನ್ಯಾಸಕರ ಸಂಘ, ಅಖಿಲ ಭಾರತ ಶರಣ ಸಾಹಿತ್ಯ ಸಂಘಟನೆ, ಗದಗ ಜಿಲ್ಲಾ ವೀರಶೈವ ಸಂಘಟನೆ ಹೀಗೆ ಹಲವಾರು ಸಂಸ್ಥೆಗಳ ಜವಾಬ್ದಾರಿಯುತ ಕಾರ್ಯ. ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಅವಂತಿ ಅವಾರ್ಡ್, ಆಲ್ ಇಂಡಿಯಾ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಶಸ್ತಿ (೨ ಬಾರಿ). ಮಹಿಳಾ ಜಾಗೃತಿ, ಮಹಿಳಾ ಹಕ್ಕುಗಳ ವಿಚಾರ ಸಂಕಿರಣ, ಕವಿ ಸಮ್ಮೇಳನ, ಚಿತ್ರಕಲಾ ಪ್ರದರ್ಶನ, ಸಾಂಸ್ಕೃತಿಕ ಉತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಕಲಾವಿದೆ. ಇದೇ ದಿನ ಹುಟ್ಟಿದ ಕಲಾವಿದರು ರಂಗಸ್ವಾಮಿ ಪಿ.ಎಲ್. – ೧೯೪೧ ಎಂ.ಆರ್. ಸತ್ಯನಾರಾಯಣ – ೧೯೫೦.
* * *