
- This event has passed.
ಪ್ರೊ. ಎಂ.ಎನ್. ಶ್ರೀನಿವಾಸ್
November 16
೧೬-೧೧-೧೯೧೬ ೩೦-೧೧-೧೯೯೯ ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ಶಾಸ್ತ್ರಜ್ಞ, ಸಾಮಾಜಿಕ ಮಾನವ ಶಾಸ್ತ್ರದ ಅಧ್ವರ್ಯು ಎಂ.ಎನ್. ಶ್ರೀನಿವಾಸ್ರವರು ಹುಟ್ಟಿದ್ದು ಮೈಸೂರಿನ ಬಳಿ ಅರಕೆರೆಗ್ರಾಮ. ತಂದೆ ನರಸಿಂಹಾಚಾರ್. ಪ್ರಾರಂಭಿಕ ಶಿಕ್ಷಣ ಮೈಸೂರಿನ ಸದ್ವಿದ್ಯಾಶಾಲೆ, ಮಹಾರಾಜಾ ಕಾಲೇಜಿನಿಂದ ಪದವಿ. ಸ್ನಾತಕೋತ್ತರ ಶಿಕ್ಷಣ ಮುಂಬಯಿ. ಸಮಾಜ ಶಾಸ್ತ್ರದಲ್ಲಿ ಪಡೆದ ಎಂ.ಎ. ಪದವಿ. ‘ಕೊಡವಮತ-ಸಮಾಜ’ ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಉನ್ನತ ವ್ಯಾಸಂಗ ಆಕ್ಸ್ಫರ್ಡ್, ವಿಶೇಷ ಅಧ್ಯಯನ. ಉದ್ಯೋಗಕ್ಕೆ ಸೇರಿದ್ದು ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯದಲ್ಲೂ ಕೆಲಕಾಲ. ದೇಶ ವಿದೇಶಗಳಲ್ಲಿ ಸಮಾಜಶಾಸ್ತ್ರ ಮತ್ತು ಮಾನವಿಕಗಳ ವಿಚಾರ ಸಂಕಿರಣ, ಅಧ್ಯಯನ ಗೋಷ್ಠಿಗಳಲ್ಲಿ ಭಾಗಿ. ದೆಹಲಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಅಧ್ಯಯನ ಪೀಠ, ಬೆಂಗಳೂರಿನ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ ಸಂಸ್ಥೆ ಮುಂತಾದ ಸಂಸ್ಥೆಗಳ ಸ್ಥಾಪಕರು. ಸಮಾಜ ಅಧ್ಯಯನವೇ ಬದುಕಿನ ಪರಮಗುರಿ ಎಂದು ನಂಬಿದ ಶ್ರೀನಿವಾಸ್, ದೇಶ ವಿದೇಶಗಳಿಗೆ ಆಹ್ವಾನಿತರಾಗಿ ಬೋಧನೆ. ಜನರ ನಡುವೆ ಬದುಕು. ಕನ್ನಡದಲ್ಲಿ ಹಲವಾರು ಕೃತಿಗಳ ರಚನೆ. ‘ಕೊಡವರ ಧರ್ಮ ಮತ್ತು ಸಮಾಜ’ ೧೯೫೨ರಲ್ಲಿ ಪ್ರಕಟವಾದ ಕೃತಿ. ಸಾಮಾಜಿಕ ರಚನಾ ಸಿದ್ಧಾಂತದ ಚೌಕಟ್ಟಿನಲ್ಲಿ ಬರೆದ ಪ್ರಥಮ ಸಮಾಜ ಶಾಸ್ತ್ರೀಯ ಗ್ರಂಥವೆಂಬ ಹೆಗ್ಗಳಿಕೆ. ಮೈಸೂರು ಜಿಲ್ಲೆಯ ರಾಮಾಪುರಕ್ಕೆ ತೆರಳಿ ಬದುಕಿದ್ದು ಜನರ ನಡುವೆ ‘ದಿ ರಿಮೆಂಬರ್ಡ್ ವಿಲೇಜ್’ ಎಂದು ಬರೆದ ಗ್ರಂಥ ಸಮಾಜ ಶಾಸ್ತ್ರೀಯ ಅಧ್ಯಯನದ ಪ್ರಮುಖ ಆಕರ ಗ್ರಂಥ. “ಸೋಷಿಯಲ್ ಚೇಂಜ್ ಇನ್ ಮಾಡರ್ನ್ ಇಂಡಿಯಾ” ಮತ್ತು “ಇಂಡಿಯನ್ ಸೊಸೈಟಿ ಥ್ರೂ ಪರ್ಸನಲ್ ರೈಟಿಂಗ್ ಅಂಡ್ ಆನ್ ಲಿವಿಂಗ್ ಇನ್ ರೆವೆಲ್ಯೂಶನ್” ಮತ್ತೆರಡು ಪ್ರಮುಖ ಕೃತಿಗಳು. ಬೋಧಿಸಿದ್ದು ಹಲವಾರು ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ. ಆಕ್ಸ್ಫರ್ಡ್, ಕೇಂಬ್ರಿಡ್ಜ್, ಸ್ಟ್ಯಾನ್ಫರ್ಡ್, ಕಾರ್ನೆಲ್, ಕ್ಯಾನ್ಬೆರಾ ಮುಂತಾದುವುಗಳು. ಬ್ರಿಟಿಷ್ ಅಕಾಡಮಿ, ಆರ್.ಎ.ಐ. ಲಂಡನ್, ಅಮೆರಿಕನ್ ಫಿಲಾಸಫಿಕಲ್ ಸೊಸೈಟಿ, ಫಿಲಿಡೆಲಿಯಾ ಸೊಸೈಟಿ, ಬೋಸ್ಟನ್ ಸೊಸೈಟಿ ಮುಂತಾದುವುಗಳಲ್ಲಿ ಫೆಲೋ ಆಗಿ ಆಯ್ಕೆ. ಸಂದ ಪ್ರಶಸ್ತಿ ಗೌರವಗಳು: ಕೊಚ್ಚಿ ವಿಶ್ವವಿದ್ಯಾಲಯದಿಂದ ಎಂ.ವೈ. ಪೈಲೀ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜವಹರಲಾಲ್ ನೆಹರು ಪ್ರಶಸ್ತಿ, ಭಾರತ ಸರಕಾರದ ಪದ್ಮಭೂಷಣ ಪ್ರಶಸ್ತಿ, ಮುಂಬಯಿ ವಿಶ್ವವಿದ್ಯಾಲಯದ ಜಿ.ಎಸ್. ಗುಯ್ರೆ ಪ್ರಶಸ್ತಿ, ರಾಯಲ್ ಆಂಥ್ರೊ ಪೊಲಾಜಿಕಲ್ ಇನ್ಸ್ಟಿಟ್ಯೂಟಿನಿಂದ ‘ರಿವರ್ ಮೆಮೋರಿಯಲ್ ಮೆಡಲ್’ ಪಡೆದ ಭಾರತ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು. ಇದೇ ದಿನ ಹುಟ್ಟಿದ ಸಾಹಿತಿಗಳು : ವಿಜಯಾ ನಾಗರಾಜ್ – ೧೯೪೭ ಕೋ.ಲ. ರಂಗನಾಥರಾವ್ – ೧೯೪೨