
- This event has passed.
ಪ್ರೊ. ಎಸ್.ಜಿ. ಸಿದ್ಧರಾಮಯ್ಯ
November 19
೧೯-೧೧-೧೯೪೬ ಸಾಹಿತಿ, ಪ್ರಾಧ್ಯಾಪಕರಾದ ಸಿದ್ಧರಾಮಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮ. ತಂದೆ ಗುರುಭಕ್ತಯ್ಯ, ತಾಯಿ ರೇವಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ಪ್ರೌಢಶಾಲೆ ಚಿಕ್ಕನಾಯಕನಹಳ್ಳಿ, ಕಾಲೇಜಿಗೆ ಸೇರಿದ್ದು ತುಮಕೂರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭ. ಮಡಿಕೇರಿ, ಸಿಂಧನೂರು, ತುಮಕೂರು, ಕೊರಟಗೆರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ. ತುಮಕೂರು, ಚಿಕ್ಕನಾಯಕನ ಹಳ್ಳಿ, ಹೊಸದುರ್ಗ, ಮಧುಗಿರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಹುದ್ದೆ ನಿರ್ವಹಣೆ. ದುಃಸ್ಥಿತಿಯಲ್ಲಿದ್ದ ಕಾಲೇಜುಗಳಿಗೆ ಶೈಕ್ಷಣಿಕ ಕಾಯಕಲ್ಪ, ವಿದ್ಯಾರ್ಥಿಗಳಲ್ಲಿ ವಾಚನಾಭಿವೃದ್ಧಿಗಾಗಿ ನಡೆಸಿದ ಕಮ್ಮಟಗಳು. ವನಮಹೋತ್ಸವದಂತಹ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನೆಟ್ಟ ಸಾವಿರಾರು ಮರಗಳು. ರಾಷ್ಟ್ರೀಯ ಸೇವಾಕಾರಿಯಾಗಿ ಕಾರ್ಯ ನಿರ್ವಹಣೆ. ತುಮಕೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕರಾಗಿ ಐದು ವರ್ಷ ಹೊತ್ತ ಜವಾಬ್ದಾರಿ. ಹೈಸ್ಕೂಲಿನಲ್ಲಿದ್ದಾಗಲೇ ಬೆಳೆದ ಸಾಹಿತ್ಯಾಸಕ್ತಿ. ನಾಟಕಗಳಲ್ಲಿ ವಿಶೇಷ ಒಲವು. ಕರ್ಣನಂತಹ ದುರಂತ ಪಾತ್ರಗಳಲ್ಲಿ ತಲ್ಲೀನತೆ. ವಿದ್ಯಾರ್ಥಿಯಾಗಿದ್ದಾಗಲೇ ಬೆಳೆಸಿಕೊಂಡ ವೈಚಾರಿಕ ಪ್ರಜ್ಞೆ. ಎಚ್.ಜಿ. ಸಣ್ಣಗುಡ್ಡಯ್ಯ ಮುಂತಾದವರ ಮಾರ್ಗದರ್ಶನ. ರಚಿಸಿದ ಕೃತಿಗಳು ಹಲವಾರು. ಕಾವ್ಯ-ಗಾಲ್ ಉಬ್ಬಿನ ಮೇಲೆ, ಕಾಡುವ ಬೇಲಿ ಹೂ, ಅವಳೆದೆಯ ಜಂಗಮ, ಸೊಲ್ಲು ಫಲವಾಗಿ, ಮರು ಜೇವಣಿ, ಕರೆಬಳಗ. ವಿಮರ್ಶೆ-ಸಾಲಾವಳಿ, ಕೇಡಿಲ್ಲವಾಗಿ, ಎಡೆಕುಂಟೆ ಗೆಣೆಸಾಲು, ನಿಶ್ಯಬ್ದದ ಜಾಡು, ಅಂಬಿಗರ ಚೌಡಯ್ಯ ಒಂದು ಅಧ್ಯಯನ. ನಾಟಕ-ದಂಡೆ, ನೆತ್ತಮನಾಡಿ. ಸಂಪಾದಿತ-ಕುರುಬರ ಮದುವೆಯ ಪದಗಳು. ಸಂದ ಪ್ರಶಸ್ತಿ ಗೌರವಗಳು: ೧೯೯೬ ಮತ್ತು ೨೦೦೦ದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ‘ಸೊಲ್ಲು ಫಲವಾಗಿ’ ಕೃತಿಗೆ ಪು.ತಿ.ನ. ಕಾವ್ಯ ಪ್ರಶಸ್ತಿ, ‘ಕರೆಬಳಗ’ ಕೃತಿಗೆ ಜಿ.ಎಸ್.ಎಸ್. ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಮುಂತಾದುವು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಜವಾಬ್ದಾರಿ. ಇದೇ ಹದಿನ ಹುಟ್ಟಿದ ಸಾಹಿತಿಗಳು : ಲೋಕನಾಥ ದೀಕ್ಷಿತ್ – ೧೯೪೫ ತಿಲಕನಾಥ ಮಂಜೇಶ್ವರ – ೧೯೪೭