
ಪ್ರೊ. ಕೆ.ಬಿ. ಪ್ರಭುಪ್ರಸಾದ್
December 27
೨೭-೧೨-೧೯೨೯ ಉತ್ತಮ ಪ್ರಾಧ್ಯಾಪಕ, ಸುಗಮ ಸಂಗೀತ ಗಾಯಕರಾದ ಪ್ರಭುಪ್ರಸಾದರು ಹುಟ್ಟಿದ್ದು ದಾವಣಗೆರೆಯಲ್ಲಿ. ತಂದೆ ಬಿ.ಎಸ್. ಕುರುವತ್ತಿ, ತಾಯಿ ಸರ್ವಮಂಗಳಾ. ಪ್ರಾರಂಭಿಕ ಶಿಕ್ಷಣ ದಾವಣಗೆರೆ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮತ್ತು ಸಾಂಗ್ಲಿಯ ವಿಲಿಂಗ್ಡನ್ ಕಾಲೇಜು, ಮುಂಬೈ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ಸಹಪಾಠಿಗಳ ಸಲಹೆ IAS, ತಂದೆಯ ಸಲಹೆ ವ್ಯಾಪಾರ, ವಕೀಲಿವೃತ್ತಿ. ಎಲ್ಲವನ್ನೂ ತೊರೆದು ಆಯ್ದುಕೊಂಡದ್ದು ಬೋಧಕವೃತ್ತಿ. ಶಿವಮೊಗ್ಗ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕ. ಯುವರಾಜ ಕಾಲೇಜಿನಲ್ಲಿ ರೀಡರ್ ಆಗಿ, ಮಹಾರಾಣಿ ಕಾಲೇಜಿನಲ್ಲಿ ಪ್ರೊಫೆಸರಾಗಿ, ಚಿತ್ರದುರ್ಗ, ತುಮಕೂರಿನ ಸರಕಾರಿ ಪ್ರಥಮ ದರ್ಜೆ ಸೈನ್ಸ್ ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶ್ರೀ ಅರವಿಂದ, ಶ್ರೀ ಸತ್ಯಸಾಯಿಬಾಬಾ ಮುಂತಾದವರ ಪ್ರಭಾವದಿಂದ ಬೆಳೆದ ವ್ಯಕ್ತಿತ್ವ. ಸಾಹಿತ್ಯ, ಸಂಗೀತ, ನಾಟಕ, ಹಾಸ್ಯ, ಆಕಾಶವಾಣಿ, ಸುಗಮ ಸಂಗೀತ ಗಾಯಕರಾಗಿ ಬೆಳೆಸಿಕೊಂಡ ಹವ್ಯಾಸಗಳು. ಎಳವೆಯಿಂದಲೇ ಬೆಳೆಸಿಕೊಂಡ ಸಾಹಿತ್ಯ ಚಟುವಟಿಕೆಗಳು. ರಚಿಸಿದ ಕೃತಿಗಳು ಹಲವಾರು. ಪ್ರವಾಸ ಕಥನ-ದೇಗುಲಗಳ ದಾರಿಯಲ್ಲಿ. ರೇಡಿಯೋ ನಾಟಕಗಳ ಸಂಕಲನ-ನಾದಸೇತು ಮತ್ತು ಇತರ ನಾಟಕಗಳು. ಭಾವಗೀತೆಗಳಿಗೆ ಸ್ವರ ಸಂಯೋಜಿಸಿ ರಾಗ-ತಾಳ-ಸ್ವರ ಲಿಪಿ ಹಾಕಿ ಪ್ರಕಟಿಸಿದ ಕೃತಿ ‘ಹಾಡೋಣ ಬಾ’. ಕಂಪನಿಯ ನಾಟಕ, ರಂಗಭೂಮಿಯ ಕೊಟ್ಟೂರ ಬಸವಯ್ಯನವರ ಆತ್ಮಕಥೆ ನಿರೂಪಣೆ-‘ರಂಗ-ಅಂತರಂಗ.’ ಕೇಂದ್ರ ಸಾಹಿತ್ಯ ಅಕಾಡಮಿಯ ಮೇಕರ್ಸ್ ಆಫ್ ಇಂಡಿಯನ್ ಲಿಟರೇಚರ್ ಸೀರೀಸ್ಗಾಗಿ-ಸರ್ವಜ್ಞ (ಇಂಗ್ಲಿಷ್ನಲ್ಲಿ) ಭಾರತ-ಭಾರತಿ ಪುಸ್ತಕ ಸಂಪದಕ್ಕಾಗಿ-ರಾಣಿ ದುರ್ಗಾವತಿ, ವಿಷ್ಣುವರ್ಧನ, ಶಿರಡಿ ಸಾಯಿಬಾಬಾ, ನಾ. ಕಸ್ತೂರಿಯವರ LOVING GOD ಅನುವಾದ ೨ ಸಂಪುಟಗಳಲ್ಲಿ ‘ದೇವನೊಲಿದ ಜೀವ’ ಎಚ್.ಎಲ್. ಕೇಶವಮೂರ್ತಿಯವರೊಡನೆ ಸಂಪಾದಿತ ಹಾಸ್ಯ ಕಸ್ತೂರಿ (ನಾ. ಕಸ್ತೂರಿಯವರ ಆಯ್ದ ಲೇಖನಗಳು). ದೇಗುಲಗಳ ದಾರಿಯಲ್ಲಿ ಪ್ರವಾಸಕಥನಕ್ಕೆ ೧೯೬೨ರ ವರ್ಷದ ಶ್ರೇಷ್ಠ ಪುಸ್ತಕ ಪ್ರಶಸ್ತಿ, ರಾಷ್ಟ್ರಮಟ್ಟದ ಸ್ವಯಂ ಸೇವಾ ಸಂಸ್ಥೆ FPAIನಿಂದ ಸನ್ಮಾನ, ಹಂಸಜ್ಯೋತಿ ಸಂಸ್ಥೆಯಿಂದ ಹಂಸ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು. ಇದೇ ದಿನ ಹುಟ್ಟಿದ ಸಾಹಿತಿಗಳು : ಜಯದೇವಪ್ಪ ಜೈನಕೇರಿ – ೧೯೩೯ ತಾಳ್ತಜೆ ವಸಂತಕುಮಾರ್ – ೧೯೪೮ ಮುಕುಂದರಾಜ್. ಎಲ್. – ೧೯೫೯