೦೨.೦೨.೧೯೨೦ ೨೦.೦೮.೨೦೦೫ ಛಂದಸ್ಸು, ವ್ಯಾಕರಣ, ಅಲಂಕಾರ, ಹೀಗೆ ಕನ್ನಡ ಸಾಹಿತ್ಯದ ಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಲ್ಲಿ ಒಬ್ಬರಾದ ಕೇಶವ ಭಟ್ಟರು ಹುಟ್ಟಿದ್ದು ಕಾಸರಗೋಡಿನ ಬಾಯಾರು ಸಮೀಪದ ತಾಳ್ತಜೆ ಎಂಬಲ್ಲಿ ೧೯೨೦ ರ ಫೆಬ್ರುವರಿ ೨ ರಂದು. ತಂದೆ ಗೋವಿಂದ ಭಟ್ಟರು ಕೃಷಿಕರಾಗಿದಷ್ಟೇ ಅಲ್ಲದೆ ಜ್ಯೋತಿಷ್ಯ ಮತ್ತು ಯಕ್ಷಗಾನದಲ್ಲೂ ಪ್ರವೀಣರು, ತಾಯಿ ಸಾವಿತ್ರಮ್ಮ. ಪ್ರಾರಂಭಿಕ ಶಿಕ್ಷಣ ಪೆರೋಡಿಯಲ್ಲಿ, ೩ನೇ ಫಾರಂವರೆಗೆ ಅಂದರೆ ೭ನೆಯ ತರಗತಿಯವರೆಗೆ. ನಾಲ್ಕನೆಯ ಫಾರಂ ಅಂದರೆ ಹೈಸ್ಕೂಲು ೮ನೆಯ ತರಗತಿ ಓದಿ ಪಾಸಾದರೂ ಮುಂದೆ ಓದಲಾಗದೆ ಉದ್ಯೋಗ ಅನಿವಾರ್ಯವಾಯಿತು. ಆಗೆಲ್ಲ ಸುಲಭವಾಗಿ ದೊರೆಯುತ್ತಿದ್ದುದು ಉಪಾಧ್ಯಾಯರ ಉದ್ಯೋಗವೊಂದೆ. ಆದರೆ ಅರ್ಹತಾ ಪತ್ರವಿರಲೇಬೇಕಿತ್ತು. ಕಾಸರಗೋಡು ಬೋರ್ಡ್ ಹೈಸ್ಕೂಲು ಸೇರಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಪ್ರಾಥಮಿಕ ಶಾಲಾ ಉಪಾಧ್ಯಾಯ ವೃತ್ತಿಯನ್ನು ಆರಂಭಿಸಿದರು. ಅಧ್ಯಾಪನದ ಜೊತೆಗೆ ಬೆಳೆದು ಬಂದ ಹವ್ಯಾಸವೆಂದರೆ ಕನ್ನಡ-ಸಂಸ್ಕೃತ ಅಧ್ಯಯನ. ಯಕ್ಷಗಾನ ಕಲಾಭ್ಯಾಸ. ಸ್ವತಂತ್ರವಾಗಿ ಓದಿ ಮದರಾಸು ವಿಶ್ವವಿದ್ಯಾಲಯದಿಂದ ಕನ್ನಡ-ಸಂಸ್ಕೃತ ಪರೀಕ್ಷೆಯಲ್ಲಿ ಪಡೆದ ವಿದ್ವಾನ್ ಪದವಿ, ಹಿಂದಿ ವಿಶಾರದ ಪರೀಕ್ಷೆಯಲ್ಲೂ ತೇರ್ಗಡೆ. ಯಕ್ಷಗಾನದ ಮೇಲಿನ ಆಸಕ್ತಿಯಿಂದ ಕಲಿತದ್ದು ಹಾಡುಗಾರಿಕೆ ಹಾಗೂ ಮದ್ದಲೆ ನುಡಿಸುವುದು. ಅಧ್ಯಾಪಕ ವೃತ್ತಿಯಲ್ಲಿದ್ದುಕೊಂಡೇ ಎಂ.ಎ. ಪದವಿಗಳಿಸಿ, ಪೆರ್ಲದ ಸತ್ಯನಾರಾಯಣ ಹೈಸ್ಕೂಲು, ದಕ್ಷಿಣ ಕೊಡಗಿನ ಹಾತೂರು ಹೈಯರ್ ಸೆಕೆಂಡರಿ ಶಾಲೆ, ನಂತರ ಕೊಡಗಿನ ಬೇಸಿಕ್ ಟ್ರೈನಿಂಗ್ ಕಾಲೇಜು, ಸೆಂಟ್ರಲ್ ಹೈಸ್ಕೂಲ್, ಸರಕಾರಿ ಹೈಯರ್ ಸೆಕೆಂಡರಿಶಾಲೆ, ಮೈಸೂರಿನ ಮಹಾರಾಣಿ ವುಮೆನ್ಸ್ ಟ್ರೈನಿಂಗ್ ಕಾಲೇಜ್, ಮಹಾರಾಜ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ದುಡಿದು ನಂತರ ಬಂದದ್ದು ಬೆಂಗಳೂರಿಗೆ. ಬೆಂಗಳೂರಿನ ಎಂ.ಇ .ಎಸ್. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಕಾಲ ಸೇವೆ ಸಲ್ಲಿಸಿ, ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಯು.ಜಿ.ಸಿ ನೆರವಿನಿಂದ ಸಂಶೋಧನ ಪ್ರಾಧ್ಯಾಪಕರಾಗಿಯೂ ಕೆಲಕಾಲ ಸೇವೆ ಸಲ್ಲಿಸಿದರು. ಹಲವಾರು ಸಂಘ-ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದ ಕೇಶವ ಭಟ್ಟರು, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಮತ್ತು ಬಿ.ಎಂ.ಶ್ರೀ ಪ್ರತಿಷ್ಠಾನದಿಂದ ಪ್ರಕಟವಾಗುತ್ತಿರುವ ಷಾಣ್ಮಾಸಿಕ ವಿದ್ವಾತ್ ಪತ್ರಿಕೆಯಾದ ‘ಕರ್ನಾಟಕ ಲೋಚನ’ದ ಪ್ರಧಾನ ಸಂಪಾದಕರಾಗಿಯೂ ಕಿರಿಯರ ವಿಶ್ವಕೋಶ ‘ಜ್ಞಾನ ಗಂಗೋತ್ರಿ’ಯ (ಪ್ರಕಾಶಕರು-ಕರ್ನಾಟಕ ಸಹಕಾರಿ ಪ್ರಕಟಣ ಮಂದಿರ, ಬೆಂಗಳೂರು) ಸಂಪಾದಕ ಮಂಡಲಿಯ ಸದಸ್ಯರಾಗಿ, ಎಚ್.ಎಲ್. ನಾಗೇಗೌಡರ ಸಂಪಾದಕತ್ವದಲ್ಲಿ ಪ್ರಕಟವಾದ ‘ಜಾನಪದ ಕೋಶ’ ರಚನಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಾವ್ಯಕ್ಕೆ ಸಂಬಂಧಿಸಿದಂತೆ ಸತ್ತ್ವಾಲೋಕನಂ (ಚಂಪೂಕಾವ್ಯ) ಶ್ರೀ ಚನ್ನವೀರಶರಣ ಕಥಾಮೃತ (ವಾರ್ಧಕ ಷಟ್ಪದಿ); ಕನ್ನಡ ಪ್ರಾಚೀನ ಸಾಹಿತ್ಯ ಲಕ್ಷಣಗಳು-ಮರುನೋಟ, ದ.ಕ. ಜಿಲ್ಲಾ ಜಾನಪದಗೀತೆಗಳು ಮುಂತಾದ ಸಂಶೋಧನಾ ಗ್ರಂಥಗಳು; ಲಂಕಾದಹನ, ಪಂಚವಟಿ ವಾಲಿ ಸುಗ್ರೀವ ಕಾಳಗ ಮುಂತಾದ ಯಕ್ಷಗಾನ ಪ್ರಸಂಗಗಳು; ಭಾಷಾ ದೀಪಿಕೆ, ಭಾಷಾಭಾಸ್ಕರ, ಭಾವಾರ್ಥ ವಿಸ್ತರಣ, ಕಾವ್ಯ ಪದಮಂಜರಿ ಮುಂತಾದ ಶಬ್ದಕೋಶ-ಶೈಕ್ಷಣಿಕ ಕೃತಿಗಳು; ದಿಲೀಪ, ಕಾರ್ತಿಕೇಯ, ವಿಶ್ವಕರ್ಮ, ಪಾರ್ವತಿ , ಗಾಂಧಾರಿ, ಗೋವಿನ ಹಾಡು ಮೊದಲಾದ ಬಾಲ ಸಾಹಿತ್ಯ ಕೃತಿಗಳು ಸೇರಿ ಒಟ್ಟು ೬೦ ಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ಸತ್ತ್ವಾಲೋಕನಂ ಚಂಪೂಕಾವ್ಯಕ್ಕೆ ರಾಜ್ಯಸರಕಾರ ಪ್ರಶಸ್ತಿ (೧೯೬೦), ‘ಹವ್ಯಕರ ಶೋಭಾನೆಗಳು’ ಸಂಕಲನಕ್ಕೆ ಯಕ್ಷಗಾನ ಹಾಗೂ ಜಾನಪದ ಅಕಾಡಮಿ ಪ್ರಶಸ್ತಿ ೧೯೮೬ರಲ್ಲಿ, ೧೯೯೮ರಲ್ಲಿ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ೨೦೦೧ರಲ್ಲಿ ಜಾನಪದ ತಜ್ಞ ಪ್ರಶಸ್ತಿ, ೨೦೦೩ರಲ್ಲಿ ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿಗಳು ದೊರೆತಿವೆ. ಹೀಗೆ ಗ್ರಂಥ ಸಂಪಾದನೆ, ನಿಘಂಟು, ಕಾವ್ಯ, ಜಾನಪದ, ಸಂಶೋಧನೆ ಮುಂತಾದ ಹಲವಾರು ಸಾಹಿತ್ಯಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಕೇಶವಭಟ್ಟರು ಸಾಹಿತ್ಯಲೋಕದಿಂದ ದೂರವಾದದ್ದು ೨೦೦೫ ರ ಆಗಸ್ಟ್ ೨೦ ರಂದು.

