೨೪-೪-೧೯೧೮ ೨೪-೪-೧೯೯೦ ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿ, ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ಒಂದರಲ್ಲಿ ಕೆಲಸ. ಎ.ಆರ್. ಕೃಷ್ಣಶಾಸ್ತ್ರಿ, ಎ.ಎನ್. ನರಸಿಂಹಯ್ಯ, ಸಿ.ಆರ್. ನರಸಿಂಹಶಾಸ್ತ್ರಿಗಳ ನೆರವಿನಿಂದ ಓದಿ ಎಂ.ಎ. ಪದವಿ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆ. ಹದಿನಾಲ್ಕನೇ ವಯಸ್ಸಿನಲ್ಲಿ ಪದ್ಯ ಬರೆದು ಸೈ ಎನ್ನಿಸಿಕೊಂಡವರು. ಮೊದಲ ಕವನ ಸಂಕಲನ ಮೇಘನಾದ, ನಂತರ ಕನ್ನಡ ಗೀತ, ಅಮೃತಬಿಂದು, ಮಂಜುಗೀತ, ರಸಯಜ್ಞ ಮುಂತಾದುವು. ವಿಮರ್ಶೆ- ಬೇಂದ್ರೆ, ಹೊಸಗನ್ನಡ ಸಾಹಿತ್ಯಶೈಲಿ, ಕವೀಂದ್ರ ರವೀಂದ್ರ, ಕಾವ್ಯಸೂತ್ರ, ಪ್ರತಿಭೆ, ಸಂಸ್ಕೃತ ಕನ್ನಡಗಳ ಬಾಂಧವ್ಯ. ವಿನೋದ-ವಿಡಂಬನೆ-ಬೇತಾಳ ಕುಣಿತ, ಭಾಷಣ ಭೈರವರ ಒಡ್ಡೋಲಗ. ವೈಚಾರಿಕ ಕೃತಿಗಳು-ಭಾರತೀಯ ವಾಙ್ಞಯ, ಸ್ವಾತಂತ್ರ ಮೀಮಾಂಸೆ, ಮಾತೃಶ್ರೀ, ವೇದರಹಸ್ಯ, ನೆಹರೂ ಉವಾಚ, ರಮಣ ಮಾರ್ಗ, ಕಾಳಿದಾಸನ ಕಾವ್ಯ ಸೌರಭ ಮುಂತಾದುವಲ್ಲದೆ ಯಕ್ಷಗಾನ, ಸಂಪಾದಿತ, ನಾಟಕ, ಆತ್ಮಕಥೆ, ಇತಿಹಾಸ ಕೃತಿ ರಚನೆ. ಸಂದ ಪ್ರಶಸ್ತಿ ಗೌರವಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ತೀನಂಶ್ರೀ ಸ್ಮಾರಕ ಬಹುಮಾನ, ಮೈಸೂರು. ವಿ.ವಿ. ಸುವರ್ಣ ಮಹೋತ್ಸವ, ಮೂರು ಸಾವಿರ ಮಠ ಹುಬ್ಬಳ್ಳಿ, ಲೋಕ ಶಿಕ್ಷಣ ಟ್ರಸ್ಟ್, ಕೇಂದ್ರ ಸರಕಾರದ ರಕ್ಷಣಾ ಶಾಖೆ, ದೇವರಾಜ ಬಹದ್ದೂರ್ ಬಹುಮಾನಗಳು, ಹಲವಾರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ. ತಂದೆಯ ಹೆಸರನ್ನು ಶಾಶ್ವತಗೊಳಿಸುವಲ್ಲಿ ಮಗ ರಾಜಶೇಖರ ಹೆಬ್ಬಾರರು ಇತರರೊಡಗೂಡಿ ಬಿ.ಎಚ್. ಶ್ರೀಧರ ಪ್ರಶಸ್ತಿ ಸ್ಥಾಪಿಸಿ ಪ್ರತಿವರ್ಷ ಕನ್ನಡದ ಉತ್ತಮ ಕೃತಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಿದ್ದಾರೆ. ಇದೇ ದಿನ ಹುಟ್ಟಿದ ಸಾಹಿತಿಗಳು : ಶಾರದಾ ಶೆಣೈ – ೧೯೩೯ ಲೀಲಾ ಕಲಕೋಟಿ – ೧೯೫೦ ಎನ್. ರಾಮನಾಥ್ – ೧೯೬೨

