೧೧-೫-೧೯೪೪ ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾಗಿರುವ ಬಾಬು ಕೃಷ್ಣಮೂರ್ತಿಯವರು ಹುಟ್ಟಿದ್ದು ಬೆಂಗಳೂರು. ತಂದೆ ವೆಂಕಟೇಶ ಶಾಸ್ತ್ರಿ, ತಾಯಿ ಸೀತಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತರಾಗಿದ್ದ ಇವರು ಆರಿಸಿಕೊಂಡ ಕ್ಷೇತ್ರವೂ ಪತ್ರಿಕೋದ್ಯಮವೇ. ೧೯೬೮-೭೨ರವರೆಗೆ ಲೇಖನ ಕಾವೇರಿಯ ಸಹ ಸಂಪಾದಕರಾಗಿ ವೃತ್ತಿ ಆರಂಭಿಸಿದ ಇವರು ನಂತರ ಸೇರಿದ್ದು ಕೊಟ್ಟಾಯಂ ನ ಮಂಗಳಂ ಪ್ರಕಾಶನದ ಮಂಗಳ ಸಾಪ್ತಾಹಿಕದ ಸಂಪಾದಕರಾಗಿ. ಇವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಹೊರಬಂದುವು. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದರನ್ನು ಕುರಿತು ಆರು ವರ್ಷಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’ ಬಹಳಷ್ಟು ಖ್ಯಾತಿ ತಂದುಕೊಟ್ಟ ಕೃತಿ. ಇದಾದ ನಂತರ ಬರೆದದ್ದು ‘ಅದಮ್ಯ’ ಮತ್ತೊಬ್ಬ ದೇಶಪ್ರೇಮಿ ವಾಸುದೇವ ಬಲವಂತ ಫಡ್ಕೆ ಕುರಿತದ್ದು. ‘ಸಿಡಿಮದ್ದು ನೆತ್ತರು ನೇಣುಗಂಬ’ ಹದಿನೆಂಟು ಸ್ವಾತಂತ್ರ್ಯಯೋಧರ ಕುರಿತಾದ ವ್ಯಕ್ತಿಚಿತ್ರಗಳು. ೧೮೮೫-೧೯೧೫ರವರೆಗೆ ನಡೆದ ಸ್ವಾತಂತ್ರ್ಯ ಸಂಗ್ರಾಮದ ಸಮಗ್ರ ಚಿತ್ರಣ ನೀಡುವ ಪುಸ್ತಕ ‘ರುರಾಭಿಷೇಕ’, ಇವರ ಮಹತ್ವದ ಕೃತಿ. ಮಕ್ಕಳಿಗಾಗಿ ‘ಮಿಲ್ಟ್ರಿ ತಾತ ಕಥೆ ಹೇಳ್ತಾರೆ’, ಅಲ್ಲೂರಿ ಸೀತಾರಾಮರಾಜು, ಚಂದ್ರಶೇಖರ ಆಜಾದ್, ಭಗತ್ಸಿಂಗ್, ಶ್ರೀ ಅರವಿಂದ್, ಮೇಡಂ ಭಿಕಾಜಿಕಾಮ, ಡಾ. ಸಿ.ಜಿ. ಶಾಸ್ತ್ರಿ ; ಒಂದು ಯಶೋಗಾಥೆ ಮುಂತಾದ ಕೃತಿಗಳ ರಚನೆ. ಇಸ್ಕಾನ್ ‘ಭಕ್ತಿ ವೇದಾಂತ ದರ್ಶನ’ಕ್ಕಾಗಿ, ಭಕ್ತಿವೇದಾಂತ ಪ್ರಭುಪಾದರ ಬಗ್ಗೆ ಧಾರಾವಾಹಿಯಾಗಿ ಅವರ ಜೀವನ ಚರಿತ್ರೆಯನ್ನು ಬರೆಯುತ್ತಿದ್ದಾರೆ. ಟಿ.ವಿ. ಹಾಗೂ ಚಿತ್ರರಂಗದಲ್ಲೂ ದುಡಿದ ಅನುಭವ. ಕನ್ನಡದ ಚಲನಚಿತ್ರ ರಾಘವೇಂದ್ರ ವೈಭವ (೧೯೮೧) ನಿರ್ದೇಶಕರಾಗಿ, ಪಡುವಾರಹಳ್ಳಿ ಪಾಂಡವರು, ನಿಗೂಢ ರಾತ್ರಿಗಳು, ಘರ್ಷಣೆ ಚಿತ್ರಕ್ಕಾಗಿ ಚಿತ್ರಕಥೆ, ಸಂಭಾಷಣೆ, ರಚನೆ. ಹಿಂದಿ ಚಿತ್ರ ‘ಶಹೀದ್-೧೯೩೧’ ಚಿತ್ರಕ್ಕಾಗಿ ಚಿತ್ರಕಥೆ, ವಸ್ತ್ರ ವಿನ್ಯಾಸದ ಸಲಹೆಗಾರರು. ಸ್ವತಃ ವ್ಯಂಗ್ಯ ಚಿತ್ರಕಾರರು. ಕೆಲಕಾಲ ಉದಯ ಕಲಾ ನಿಕೇತನದ ಗೌರವ ಪ್ರಾಂಶುಪಾಲರಾಗಿ ಉಪಾಧ್ಯಕ್ಷರಾಗಿ ಸೇವೆ. ದೊರೆತ ಗೌರವ ಪ್ರಶಸ್ತಿಗಳು. ೧೯೭೧ರಲ್ಲಿ ‘ಮಿಲ್ಟ್ರಿ ತಾತ ಕಥೆ ಹೇಳ್ತಾರೆ’ ಕೃತಿಗೆ ರಾಜ್ಯ ಸರಕಾರದ ಪ್ರಶಸ್ತಿ, ೧೯೭೪ರಲ್ಲಿ ‘ಅಜೇಯ’ ಮತ್ತು ೧೯೮೪ರಲ್ಲಿ ‘ಅದಮ್ಯ’ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೯೫ರಲ್ಲಿ ವಿಶ್ವೇಶ್ವರಯ್ಯ ಎಂಜನಿಯರಿಂಗ್ ಪ್ರತಿಷ್ಠಾನ ಪ್ರಶಸ್ತಿ, ಪತ್ರಿಕೋದ್ಯಮದ ಸೇವೆಗಾಗಿ ಕರ್ನಾಟಕ ಜ್ಯೋತಿ ಪ್ರಶಸ್ತಿ, ಶಿವಮೊಗ್ಗದ ‘ನಾವಿಕ’ ದಿನಪತ್ರಿಕೆಯ ರಜತ ಮಹೋತ್ಸವ ಪ್ರಶಸ್ತಿ, ರಂಗಭೂಮಿ ಕೊಡುಗೆಗಾಗಿ ಉದಯಕಲಾನಿಕೇತನದಿಂದ ಸನ್ಮಾನ ಮುಂತಾದುವು. ಇದೀಗ ಕರ್ಮವೀರ ವಾರಪತ್ರಿಕೆಯ ಸಂಪಾದಕರ ಜವಾಬ್ದಾರಿ. ಇದೇ ದಿನ ಹುಟ್ಟಿದ ಸಾಹಿತಿಗಳು : ವೈ.ಎನ್.ಎಸ್. ಮೂರ್ತಿ – ೧೯೩೨ ಸವಿತಾ ನಾಗಭೂಷಣ – ೧೯೬೧ ಜಿ.ಎನ್. ಲಕ್ಷ್ಮಣ ಪೈ – ೧೯೦೪-೨೮.೭.೧೯೭೫

