
ಬಾ.ರಾ. ಗೋಪಾಲ್
October 21
೨೧-೧೦-೧೯೨೦ ೧೬-೬-೧೯೯೭ ಪ್ರಸಿದ್ಧ ಇತಿಹಾಸತಜ್ಞ, ಶಿಲಾಶಾಸನ ತಜ್ಞರಾದ ಬಾ.ರಾ. ಗೋಪಾಲ್ರವರು ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ. ತಂದೆ ಬಾಲಕೃಷ್ಣನ್, ತಾಯಿ ಜಾನಕಿ. ಪ್ರಾರಂಭಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ. ತುಮಕೂರು ಇಂಟರ್ ಮೀಡಿಯೆಟ್ ಕಾಲೇಜಿನಿಂದ, ಇಂಟರ್ ಮೀಡಿಯೆಟ್ನಲ್ಲಿ ೧೩ನೇ ರ್ಯಾಂಕ್, ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. (ಆನರ್ಸ್), ೧೯೫೩ರಲ್ಲಿ ಎಂ.ಎ. ಪದವಿ. ಮದರಾಸಿನ ಲಾ ಕಾಲೇಜಿಗೆ ಸೇರಿದರೂ ಇತಿಹಾಸ, ಶಾಸನ ಶಾಸ್ತ್ರದತ್ತ ಒಲವು. ಎಂ.ಶೇಷಾದ್ರಿಯವರ ಮಾರ್ಗದರ್ಶನದಲ್ಲಿ ೧೯೬೪ರಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ “ಕಲ್ಯಾಣ ಚಾಲುಕ್ಯರು ಮತ್ತು ಕಲಚೂರಿಗಳು” (ಇಂಗ್ಲಿಷ್ನಲ್ಲಿ) ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಕನ್ನಡ, ತೆಲುಗು, ತಮಿಳು, ಸಂಸ್ಕೃತದಲ್ಲಿ ಪಡೆದ ಪಾಂಡಿತ್ಯ. ಆಂಧ್ರ, ತಮಿಳುನಾಡು, ಕರ್ನಾಟಕದ ಶಿಲಾಶಾಸನಗಳ ಅಧ್ಯಯನ-ಕಾರ್ಯಕ್ಷೇತ್ರ. ಮೈಸೂರಿನ ಇತಿಹಾಸ ಸಂಶೋಧನಾ ಕೇಂದ್ರದಲ್ಲಿ ಸಂಪಾದಕರ ಹೊಣೆ. ಎಪಿಗ್ರಾಫಿಯಾ ಕರ್ನಾಟಕದ ಎಂಟು ಸಂಪುಟಗಳ ಪ್ರಕಟಣೆ. ಇಂದಿಗೂ ಆಕರ ಗ್ರಂಥಗಳು. ೧೯೭೯ರಲ್ಲಿ ಮೈಸೂರು ವಿ.ವಿ.ದಲ್ಲಿ ಸ್ಥಾಪಿಸಿದ ದಕ್ಷಿಣ ಭಾರತ ಇತಿಹಾಸ ಸಂಶೋಧನಾ ಕೇಂದ್ರದಲ್ಲಿ ರೀಡರಾಗಿ, ಶಿಲಾಶಾಸನ ತಜ್ಞರಾಗಿ ನೇಮಕ, ಇತಿಹಾಸ ವಿಭಾಗದ ಪ್ರೊಫೆಸರಾಗಿ, ವಿಭಾಗದ ಮುಖ್ಯಸ್ಥರಾಗಿ ಬಡ್ತಿ. ನಂತರ ಅನಂತಪುರದ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನೇಮಕ. ೧೯೯೦ರಲ್ಲಿ ನಿವೃತ್ತರಾಗುವವರೆವಿಗೂ ಸಲ್ಲಿಸಿದ ಸೇವೆ. ಇಂಗ್ಲಿಷ್, ಕನ್ನಡದಲ್ಲಿ ರಚಿಸಿದ ಕೃತಿಗಳ ಸಂಖ್ಯೆ ೪೮. ನೂರಾರು ಲೇಖನಗಳು ಅಧ್ಯಕ್ಷೀಯ ಭಾಷಣಗಳು, ಶಿಲಾಶಾಸನಗಳ ಇತಿಹಾಸ, ರಾಜ ವಂಶಾವಳಿ, ಸಾಹಿತ್ಯ, ಸಂಸ್ಕೃತಿ ಮೊದಲಾದ ವಿಷಯಗಳ ಮೇಲೆ ನಿಯತ ಕಾಲಿಕೆಗಳಿಗೆ ಲೇಖನಗಳು ೩೦೦ಕ್ಕೂ ಹೆಚ್ಚು. ಕನ್ನಡ ಕೃತಿಗಳು-ಕನ್ನಡ ನಾಡಿನ ಐತಿಹಾಸಿಕ ಮಹಾಪುರುಷರು, ಬಾದಾಮಿ ಚಾಲುಕ್ಯರು, ಐಹೊಳೆ, ಬನವಾಸಿ, ಹೊರನಾಡಿನಲ್ಲಿ ಆಳಿದ ರಾಜವಂಶಗಳು, ಕಲ್ಯಾಣದ ಚಾಲುಕ್ಯರು, ವಿಜಯನಗರದ ವಾಸ್ತುಶಿಲ್ಪ ಪ್ರಮುಖವಾದುವು. ಹಲವಾರು ಇತಿಹಾಸ ಸಂಸ್ಥೆಗಳಿಂದ ಸಂದ ಗೌರವ. ಭುವನೇಶ್ವರದಲ್ಲಿ ನಡೆದ ೩೮ನೇ ಇತಿಹಾಸ ಕಾಂಗ್ರೆಸ್ ಸಮ್ಮೇಳನ, ೧೯೮೦ರಲ್ಲಿ ಆಂಧ್ರದಲ್ಲಿ ನಡೆದ ಇತಿಹಾಸ ಸಮ್ಮೇಳನ, ತಮಿಳುನಾಡಿನ ಈರೋಡಿನ ಸಮ್ಮೇಳನ, ಚಿತ್ರದುರ್ಗದಲ್ಲಿ ನಡೆದ ೫ನೇ ಇತಿಹಾಸ ಸಮ್ಮೇಳನದ ಅಧ್ಯಕ್ಷತೆ. ದಕ್ಷಿಣ ಭಾರತ ಹಿಸ್ಟರಿ ಕಾಂಗ್ರೆಸ್, ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಇತಿಹಾಸ ವಿದ್ವಾಂಸರೆಂಬ ಗೌರವ, ಸನ್ಮಾನ. ಎಪಿಗ್ರಾಫಿ ಸೊಸೈಟಿ ಆಫ್ ಇಂಡಿಯಾದಿಂದ ತಾಮ್ರಪತ್ರ ಮತ್ತು ಪ್ರಶಸ್ತಿ. ಇವರ ಹೆಸರಿನಲ್ಲಿ ಇತಿಹಾಸ ತಜ್ಞರಿಗೆ ಪ್ರತಿವರ್ಷ ಪ್ರಶಸ್ತಿ ಪ್ರಧಾನ. ಇದೇ ದಿನ ಹುಟ್ಟಿದ ಸಾಹಿತಿಗಳು : ಲೀಲಾ ಶೇಖರ್ – ೧೯೩೧ ಚಂದ್ರಕಾಂತ ಕುಸನೂರ – ೧೯೩೧ ಕುಸುಮ ಲತಾ – ೧೯೫೨ ಸೀತಾರಾಮಪ್ರಭು (ರಮಾತನಯ) – ೧೯೩೯ ಎಚ್.ಆರ್. ರಘುನಾಥಭಟ್ – ೧೯೪೬-೯.೧.೦೫