೧೦-೩-೧೯೧೪ ೨೪-೮-೨೦೦೬ ಪ್ರಬಂಧಕಾರರೆಂದೇ ಪ್ರಸಿದ್ಧಿ ಪಡೆದ ಶ್ರೀ ವಾಡಪ್ಪಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಅಣ್ಣಿಗೇರಿ. ತಂದೆ ರಾಘವೇಂದ್ರರಾವ್, ತಾಯಿ ಜೀವೂಬಾಯಿ. ಪ್ರಾಥಮಿಕ ವಿದ್ಯಾಭ್ಯಾಸ ಅಣ್ಣಿಗೇರಿಯಲ್ಲಿ. ಮಾಧ್ಯಮಿಕ ಶಾಲೆಗೆ ಸೇರಿದ್ದು ಚಿಕ್ಕೋಡಿಯ ಆರ್.ಡಿ. ಹೈಸ್ಕೂಲು. ಕಾಲೇಜಿಗೆ ಸೇರಿದ್ದು ಕರ್ನಾಟಕ ಕಾಲೇಜು ಧಾರವಾಡ, ಬಿ.ಎ. (ಆನರ್ಸ್), ಎಂ.ಎ. ಬಿ.ಟಿ. ಎಲ್ಲ ಪದವಿಗಳನ್ನೂ ಮುಂಬೈ ವಿಶ್ವವಿದ್ಯಾಲಯದಿಂದ ಪಡೆದದ್ದು. ೧೯೪೪ರಲ್ಲಿ ಅಧ್ಯಾಪಕರಾಗಿ ಕರ್ನಾಟಕ ಹೈಸ್ಕೂಲು ಸೇರಿ ನಿವೃತ್ತಿಯವರೆವಿಗೂ ಅಲ್ಲೇ ಸೇವೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಹಲವಾರು ನಾಟಕ, ಸಣ್ಣ ಕಥೆ, ಪ್ರಬಂಧ ಸಂಕಲನಗಳ ಕೃತಿರಚನೆ-ಪ್ರಕಟಣೆ. ಪ್ರಬಂಧ ರಚನೆಯತ್ತ ಪ್ರಮುಖ ಒಲವು. ಆರು ಪ್ರಬಂಧ ಸಂಕಲನಗಳು ಪ್ರಕಟಿತ. ಗಾಳಿಗುದರಿ, ತಾರಕಂಬಗಳು, ಸುಳಿಗಾಳಿ, ಗುಬ್ಬೀಗೂಡು, ಹುಚ್ಚು ಹರಟೆಗಳು, ಅಂಗಳದಲ್ಲಿ ಮಂಗಗಳು ಮುಂತಾದುವು. ಎರಡು ಕಥಾಸಂಕಲನ ಪ್ರಕಟಿತ-ಯಾರು ಹೊಣೆ, ಜೀವನ ರಂಗ (ಬೆಟಗೇರಿ ಕೃಷ್ಣಶರ್ಮರ ಮುನ್ನುಡಿಯೊಡನೆ). ನಾಟಕ-ರಾಯರ ಸೋಲು, ನಿತ್ಯನಾಟಕಗಳು. ಹಲವಾರು ಪತ್ರಿಕೆಗಳಲ್ಲಿ ನಾಡಿನ ಪ್ರಮುಖ ಬರಹಗಾರರ ಕೃತಿ ವಿಮರ್ಶೆ. ಧಾರವಾಡದ ರೇಡಿಯೋ ಕೇಂದ್ರದಿಂದ ಹಲವಾರು ಹರಟೆಗಳು, ಚಿಂತನಗಳು, ಭಾಷಣಗಳು, ವಿಮರ್ಶೆಗಳ ಪ್ರಸಾರ. ವಿಮರ್ಶಾ ಗ್ರಂಥಗಳು ಪ್ರಕಟಣೆಗೆ ಕಾದಿವೆ. ಪ್ರಕಟಿತ ಕವನ ಸಂಕಲನಗಳು-ಮುಳ್ಳು ಕಂಟಿ, ಗುಡುಗು ಮಿಂಚು ಮುಂತಾದುವು. ಸಂದ ಗೌರವ ಪ್ರಶಸ್ತಿಗಳು ಹಲವಾರು. ತಾರಕಂಬಗಳು ಪ್ರಬಂಧ ಸಂಕಲನವು ಬಿ.ಎ. ತರಗತಿ ಪಠ್ಯಪುಸ್ತಕವಾಗಿ ಆಯ್ಕೆ. ಕೊಪ್ಪಳದಲ್ಲಿ ನಡೆದ ೬೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಗ್ರ ಸಾಹಿತ್ಯ ಸೇವೆಗಾಗಿ ಸನ್ಮಾನ. ೧೯೯೦ರಲ್ಲಿ ನರಗುಂದದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ. ಜೀವನ ತರಂಗ ಕಥಾ ಸಂಕಲನಕ್ಕೆ ೧೯೫೭ರಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ. ತಾರಕಂಬಗಳು ಪ್ರಬಂಧ ಸಂಕಲನಕ್ಕೆ ೧೯೫೮ರಲ್ಲಿ ರಾಜ್ಯ ಪ್ರಶಸ್ತಿ. ೧೯೯೧ರಲ್ಲಿ ರಾಜ್ಯೋತ್ಸವ ಪ್ರಶಸ್ತಿ. ೨೦೦೦ದಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ. ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಸನ್ಮಾನ. ಮಿಂಚಿನ ಬಳ್ಳಿ ಪ್ರಕಟಣೆಯ ೨೫ನೇ ವಾರ್ಷಿಕ ಸಮಾರಂಭದಲ್ಲಿ ಸನ್ಮಾನ ಮುಂತಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ಹರಿಣಿ ಮಾಧವರಾವ್ – ೧೯೨೭ ಪದ್ಮಾವತಿ. ಪಿ.ಎಲ್. – ೧೯೨೮ ಕೆ.ವೆಂಕಣ್ಣಾಚಾರ್ – ೧೯೩೬ ಸಿ.ಎಚ್. ಮರಿದೇವರು – ೧೯೩೮ ಡಾ. ವಿಜಯಾ – ೧೯೪೨

