
- This event has passed.
ಬಿ.ಎಸ್.ನಾರಾಯಣರಾವ್
September 25
೨೫.೦೯.೧೯೧೮ ೦೭.೦೩.೧೯೯೯ ವಿಲಾಸಿರಂಗ ಭೂಮಿಯ ನಟ, ನಿರ್ದೇಶಕರಾಗಿ ಪ್ರಸಿದ್ಧರಾಗಿದ್ದ ನಾರಾಯಣರಾವ್ ಹುಟ್ಟಿದ್ದು ಬೆಂಗಳೂರು. ತಂದೆ ಬಿ.ವಿ.ಸುಬ್ಬರಾಯರು, ತಾಯಿ ಲಕ್ಷ್ಮಮ್ಮ. ಸುಬ್ಬರಾಯರದು ಬಹುಮುಖ ವ್ಯಕ್ತಿತ್ವ. ಸಾಹಿತ್ಯ, ಸಂಗೀತ, ವಾಣಿಜ್ಯ, ಸಾಮಾಜಿಕ ಅಭಿವೃದ್ಧಿಗಳ ಕಾಳಜಿ. ರವೀಂದ್ರನಾಥ ಠಾಕೂರರು ಇವರ ಮನೆಗೆ ಬಂದಾಗ ಹಾಲು ಹಸುಳೆಗೆ ನಾರಾಯಣನೆಂದು ನಾಮಕರಣ ಮಾಡಿ ಕಲಾವಿದನಾಗು ಎಂದು ಹರಸಿದರು. ಆರ್ಯ ವಿದ್ಯಾಶಾಲೆಯಲ್ಲಿದ್ದಾಗಲೇ ನಾಟಕದಲ್ಲಿ ಅಭಿನಯ ಪ್ರಾರಂಭ. ನ್ಯಾಷನಲ್ ಹೈಸ್ಕೂಲು ಸೇರಿದ ಮೇಲೆ ಕೈಲಾಸಂರವರ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರ. ಹಿಂದಿ ನಾಟಕ ದುರ್ಗಾದಾಸ್ನಲ್ಲಿ ಪ್ರಮುಖಪಾತ್ರ. ಕೈಲಾಸಂರವರ ಕರ್ಣ, ಅಮ್ಮಾವ್ರಗಂಡ, ಗಂಡಸ್ಕತ್ರಿ, ಹೋಂರೂಲು ಮುಂತಾದ ನಾಟಕಗಳ ನಟ. ಕರ್ನಾಟಕ – ಹಿಂದಿ ಅಮೆಚ್ಯೂರ್ಸ್ ಸಂಸ್ಥೆ ಸ್ಥಾಪಿಸಿ ಅನಕೃರವರ ಮದುವೆಯೋ ಮನೆ ಹಾಳೋ ನಾಟಕ ಪ್ರದರ್ಶನ. ನ್ಯಾಷನಲ್ ಹೈಸ್ಕೂಲಿನ ಹಳೇವಿದ್ಯಾರ್ಥಿಸಂಘದ ಕಾರ್ಯದರ್ಶಿಯಾಗಿ ಉಂಡಾಡಿಗುಂಡ, ಬಹದ್ದೂರ್ ಗಂಡ ನಾಟಕ ಪ್ರಯೋಗ. ಅಣ್ಣ ಬಿ.ಎಸ್.ವೆಂಕಟರಾಂರೊಡನೆ ಸ್ಥಾಪಿಸಿದ್ದು ಛಾಯಾಕಲಾವಿದರು. ಕೆಂಪೇಗೌಡ ರಸ್ತೆಯಲ್ಲಿದ್ದ ಶ್ರೀ ಥಿಯೇಟರ್ ಬಾಡಿಗೆ ಪಡೆದು ಪರ್ವತವಾಣಿಯವರ ಬಹದ್ದೂರ್ ಗಂಡ ೧೭೫ ಪ್ರದರ್ಶನ ಕಂಡ ಜನಪ್ರಿಯ ನಾಟಕ. ರವಿ ಕಲಾವಿದರು ಸಂಸ್ಥೆ ಸೇರಿ ಸುಮಾರು ೨೫ ವರ್ಷ ಉಪಾಧ್ಯಕ್ಷರ ಜವಾಬ್ದಾರಿ. ಕಾಕನಕೋಟೆಯ ಕಾಕ ಮತ್ತು ರಣಧೀರ ಕಂಠೀರವ ಪ್ರಸಿದ್ಧಿ ತಂದ ಪಾತ್ರಗಳು. ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಸುಮಾರು ೨೫ ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ ಮತ್ತು ನಿರ್ದೇಶನ. ಡಾ. ಎಚ್.ಕೆ. ರಂಗನಾಥರ ಜಾಗೃತಭಾರತಿ, ಕೆ.ವಿ. ಅಯ್ಯರ್ರ ಚೇಳು ಅಜ್ಜ ಚೇಳು ಹೆಸರುಗಳಿಸಿದ ನಾಟಕಗಳು. ೧೯೬೭ ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ೮೦ರ ದಶಕದಲ್ಲಿ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಆಗಿ ಸಲ್ಲಿಸಿದ ಸೇವೆ.
* * *