
- This event has passed.
ಬಿ.ಎಸ್. ರುಕ್ಕಮ್ಮ
September 23
೨೩-೯-೧೯೩೪ ಪ್ರಕಾಶಕಿ, ಲೇಖಕಿ, ಅಧ್ಯಾಪಕಿ ರುಕ್ಕಮ್ಮನವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಬಿ.ಟಿ.ಶ್ರೀನಿವಾಸ ಅಯ್ಯಂಗಾರ್ಯರು, ತಾಯಿ ಸೀತಮ್ಮ. ವಿಜ್ಞಾನ ಶಿಕ್ಷಕರು, ಕ್ರೀಡಾಪಟು ಮತ್ತು ಸ್ಕೌಟ್ ಕಮೀಷನರ್ ಆಗಿದ್ದ ತಂದೆಯವರಿಂದ ಆದ ಅಗಾಧ ಪ್ರಭಾವ. ಶಿಕ್ಷಣವೆಲ್ಲ ಮೈಸೂರಿನಲ್ಲೆ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಮೂಢ ನಂಬಿಕೆಗಳ ನಿವಾರಣೆ, ವೈಜ್ಞಾನಿಕ ವಿಚಾರ ಪ್ರಚಾರ, ಮಾನವಧರ್ಮ ಅನುಸರಣೆ ಇವೇ ಮುಂತಾದುವುಗಳನ್ನು ಬೋಸುತ್ತಿದ್ದ ಕುವೆಂಪುರವರಿಂದ ಪ್ರೇರಣೆ. ಪತಿಯಾದ ಪ.ವಿ. ಚಂದ್ರಶೇಖರರೊಡನೆ ಕೃತಿ ರಚನೆ, ಪ್ರಕಟಣೆ. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಅಧ್ಯಾಪಕಿ ವೃತ್ತಿ. ಯುವರಾಜ ಕಾಲೇಜು, ಮಹಾರಾಣಿ ಕಾಲೇಜು (ಮೈಸೂರು), ಮಂಡ್ಯದ ಬಾಲಕರ ಕಾಲೇಜು, ಬಾಲಕಿಯರ ಕಾಲೇಜುಗಳಲ್ಲಿ ಅಧ್ಯಾಪಕಿಯಾಗಿ, ಸಹ ಪ್ರಾಧ್ಯಾಪಕಳಾಗಿ ೧೯೯೨ ನಿವೃತ್ತಿ. ಎಳವೆಯಿಂದಲೇ ಸಾಹಿತ್ಯದಲ್ಲಿ ಮೂಡಿದ ಆಸಕ್ತಿ. ಹಲವಾರು ಕೃತಿ ರಚನೆ. ವಿಜ್ಞಾನ ಸಾಹಿತ್ಯ-ಕೀಟಗಳ ಒಡನಾಡಿ ಫೇಬರ್, ಜೀವನ ಚರಿತ್ರೆ-ಆಲ್ಬರ್ಟ್ ಷೂಡ್ಸರ್, ಮೇರಿಕ್ಯೂರಿ (ಇದು ಪದವಿಪೂರ್ವ ತರಗತಿಗಳಿಗೆ ಪಠ್ಯಪುಸ್ತಕವಾಗಿ ಮೈಸೂರು ವಿ.ವಿ. ಮತ್ತು ತಿರುಪತಿ ವಿಶ್ವವಿದ್ಯಾಲಯದ ಬಿ.ಕಾಂ. ತರಗತಿಗೆ ಪಠ್ಯವಾಗಿ ಆಯ್ಕೆ). ಮಕ್ಕಳ ಸಾಹಿತ್ಯ-ಪಾಪು ಅಮ್ಮನಿಗೆ ಹೇಳಿದ ಕಥೆಗಳು, ಶಾಲೆಯ ಮಕ್ಕಳು, ಮೇಕೆ ಮತ್ತು ಮೂರು ಮರಿಗಳು, ಜಿಂಬಿ ಮತ್ತು ಜಾನಿ, ನಂದ ಗೋಪಿ ಮತ್ತು ಕೃಷ್ಣ, ವ್ಯಾಪಾರಿ ಮಂಗಣ್ಣ, ಕಚ, ಹರಿಹರ. ಸಂಪಾದಿತ-ಸದ್ಯುಕ್ತ ಕೌಮುದೀ ಸಂಗ್ರಹ, ಪಂಚಾಮೃತ, ಮಕ್ಕಳ ಸಾಹಿತ್ಯ (ರಾಜ್ಯ ಸಾಹಿತ್ಯ ಅಕಾಡಮಿಗಾಗಿ). ಗದ್ಯಕೃತಿಗಳು-ಅಶ್ವತ್ಥಾಮನ್, ಸರಳ ಸಚಿತ್ರ ವ್ಯಾಕರಣ, ಸಂಸ್ಕೃತದ ನೂರು ಕಥೆಗಳು. ಇವುಗಳಲ್ಲಿ ಕೆಲವು ಕೃತಿಗಳು ರುಮೇನಿಯ ಸರಕಾರ, ಭಾರತ ಭಾರತಿ ಪುಸ್ತಕ ಸಂಪದ, ನೆಹರು ಬಾಲ ಪುಸ್ತಕಾಲಯದಿಂದ ಪ್ರಕಟಿತ. ಇದಲ್ಲದೆ ಕುವೆಂಪು, ಟಿ.ಎಸ್.ವೆಂಕಣ್ಣಯ್ಯ, ಗೊರೂರು, ಆರ್ಯಾಂಬ ಪಟ್ಟಾಭಿ ಮುಂತಾದ ಸಂಭಾವನ ಗ್ರಂಥಗಳಿಗೆ ಬರೆದ ಲೇಖನಗಳು. ರಾಜ್ಯಮಟ್ಟದ ಲೇಖಕಿಯರ ಸಮ್ಮೇಳನ, ಕನ್ನಡ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯ ಸಮ್ಮೇಳನ (ಗುಲಬರ್ಗಾ) ಮುಂತಾದ ಸಮ್ಮೇಳನಗಳಲ್ಲಿ ಪ್ರಬಂಧ ಮಂಢನೆ. ಸಂದ ಗೌರವಗಳು. ಹೈದರಾಬಾದ್ ಸಾಹಿತ್ಯ ಸಮ್ಮೇಳನ, ಮೈಸೂರಿನ ಮಕ್ಕಳ ಸಾಹಿತ್ಯ ಸಮ್ಮೇಳನ, ಕರ್ನಾಟಕ ಲೇಖಕಿಯರ ಪರಿಷತ್, ಸವಿಗನ್ನಡ ಬಳಗ, ಮುಂತಾದುವುಗಳಿಂದ ಪ್ರಶಸ್ತಿ, ಸನ್ಮಾನ. ಗುಲಬರ್ಗಾ ಮಕ್ಕಳ ಸಾಹಿತ್ಯ ಸಮ್ಮೇಳನದ ವಿಜ್ಞಾನಗೋಷ್ಠಿಯ ಅಧ್ಯಕ್ಷತೆ ಮುಂತಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ಜಯಲಕ್ಷ್ಮೀ ಸೀತಾಪುರ – ೧೯೫೨ ಸುವರ್ಣಾಕಾಡನಕುಪ್ಪೆ – ೧೯೫೩ ಜಲಜಾ. ಕೆ.ಜಿ. – ೧೯೫೪ ಡಾ. ಅನಿಲಕಮತಿ – ೧೯೫೫ ಸಮತಾ ದೇಶಮಾನೆ – ೧೯೬೮