Loading Events

« All Events

  • This event has passed.

ಬಿ.ಎ. ಸನದಿ

August 18

೧೮..೧೯೩೩ ಕಥೆಗಾರ, ಅನುವಾದಕ, ವಿಮರ್ಶಕ, ನಾಟಕಕಾರ ಎಲ್ಲಕ್ಕಿಂತ ಹೆಚ್ಚಾಗಿ ಆದರ್ಶ ಶಿಕ್ಷಕರೆನಿಸಿರುವ ಬಾಬಾ ಸಾಹೇಬ ಅಹಮದ್‌ ಸಾಹೇಬ ಸನದಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಸಿಂಧೋಳಿ ಎಂಬ ಹಳ್ಳಿಯಲ್ಲಿ ೧೯೩೩ ರ ಆಗಸ್ಟ್‌ ೧೮ ರಂದು. ತಂದೆ ಅಹಮದ್‌ ಸಾಹೇಬ, ತಾಯಿ ಆಯಿಶಾಬಿ. ‘ಸನದಿ’ ಇವರ ಮನೆತನದ ಹೆಸರು. ಪಟೇಲ, ಶಾನುಭೋಗ, ಕುಲಕರ್ಣಿ ಎಂಬಂತೆ ಹುದ್ದೆಯ ಹೆಸರು, ‘ಸನದು’ ಎಂದರೆ ಅಧಿಕಾರ ಪತ್ರ. ಸರಕಾರದ ಈ ಪತ್ರಗಳನ್ನೂ ಒಂದು ಕಡೆಯಿಂದ ಮತ್ತೊಂದೆಡೆಗೆ ಕೊಂಡೊಯ್ಯಲು ನೇಮಿಸಿದ ಅಧಿಕೃತ ವ್ಯಕ್ತಿಗಳೆ ‘ಸನದಿ’ಯಾಗಿ. ಈ ಮನೆತನ ‘ಸನದಿ’ ಮನೆತನವಾಗಿದೆ. ಪ್ರಾರಂಭಿಕ ಶಿಕ್ಷಣ ಸಿಂಧೋಳಿ. ನಾಲ್ಕನೆಯ ತರಗತಿಯಲ್ಲಿ ಪ್ರತಿಭಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೊರೆತ ಶಿಷ್ಯವೇತನದಿಂದ ಬೆಳಗಾವಿಯ ಜಿ.ಎ. ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ, ಲಿಂಗರಾಜ ಕಾಲೇಜಿನಿಂದ ಬಿ.ಎ. ಪದವಿ (೧೯೫೪). ಬೇಡಕಿಹಾಳ, ಶಮನೇವಾಡಿ ಹೈಸ್ಕೂಲುಗಳಲ್ಲಿ ಅಧ್ಯಾಪಕರಾಗಿ ವೃತ್ತಿ ಪ್ರಾರಂಭ. ಅಧ್ಯಾಪಕ ವೃತ್ತಿಯಲ್ಲಿದ್ದಾಗಲೇ ಬಿ.ಎಡ್‌ ಪದವಿ ಮತ್ತು ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಸಂಸ್ಕೃತ ಹಾಗೂ ಕನ್ನಡದಲ್ಲಿ ಪಡೆದ ಸ್ನಾತಕೋತ್ತರ ಪದವಿಗಳು. ೧೯೫೭ರಲ್ಲಿ ರಾಜ್ಯ ಸರಕಾರದ ಹುದ್ದೆಗೆ ಆಯ್ಕೆಯಾಗಿ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ವಾರ್ತಾ ಇಲಾಖೆಗೆ ಸೇರಿ (ಬೆಂಗಳೂರು) ಪಂಚಾಯತ್‌ ರಾಜ್‌ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಕಲಬುರ್ಗಿಗೆ ವರ್ಗಾವಣೆಗೊಂಡು ವಿಭಾಗದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ಅಹಮದಾಬಾದಿಗೆ ವರ್ಗವಾಗಿ ಪಶ್ಚಿಮ ವಲಯದ ಪ್ರದರ್ಶನಾಧಿಕಾರಿಯಾಗಿ, ೧೯೭೨ ರಲ್ಲಿ ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಕಾರಿಯಾಗಿ, ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ೧೯೯೧ ರಲ್ಲಿ ನಿವೃತ್ತಿ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಬರೆದ ಹಲವಾರು ಕವನಗಳು ಜಯಕರ್ನಾಟಕ, ಜಯಂತಿ, ನವಯುಗ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇದೇ ಸಂದರ್ಭದಲ್ಲಿ ‘ಪತಿವ್ರತಾ ಪ್ರಭಾವ’ ಎಂಬ ನಾಟಕವನ್ನು  ರಚಿಸಿದ್ದು ಸಿಂಧೋಳಿಯಲ್ಲಿ ಪ್ರದರ್ಶನಗೊಂಡು ಕವಿ, ನಾಟಕಕಾರರಾಗಿ ಪ್ರಖ್ಯಾತಿ ಪಡೆದರು. ಶಮನೇವಾಡಿಯಲ್ಲಿ ಹೈಸ್ಕೂಲು ಅಧ್ಯಾಪಕರಾಗಿದ್ದಾಗ ಸ್ನೇಹ ಪ್ರಕಾಶನದಿಂದ ಪ್ರಕಟಿಸಿದ ಮೊದಲ ಕವನ ಸಂಕಲನ ಆಶಾಕಿರಣ (೧೯೫೭). ನಂತರ ‘ನೆಲಸಂಪಿಗೆ’, ‘ತಾಜಮಹಲು’, ‘ಹಿಮಗಿರಿಯ ಮುಡಿಯಲ್ಲಿ’ ಯಿಂದ ಹಿಡಿದು ‘ನಮ್ಮ ಪ್ರೀತಿ’ಯವರೆಗೆ ೧೮ ಕವನ ಸಂಕಲನಗಳು ಮತ್ತು THIRSTY WORDS ಎಂಬ ಒಂದು ಇಂಗ್ಲಿಷ್‌ ಕವನ ಸಂಕಲನವು ಪ್ರಕಟವಾಗಿದೆ. ಈಗ್ಗೆ ಕೆಲವು ವರ್ಷಗಳ ಹಿಂದೆ ಆಕಾಶವಾಣಿಯ ಭಾವಗೀತೆಗಳ ಕಾರ್ಯಕ್ರಮದಲ್ಲಿ ಆಗಾಗ್ಗೆ ಕೇಳಿಬರುತ್ತಿದ್ದ ಪ್ರಸಿದ್ಧ ಗೀತೆ ಎಂದರೆ ‘ದಾರಿಯಮೊರೆ’. ಹುಟ್ಟು-ಸಾವುಗಳ ಬದುಕಿನ ಅನಂತತೆಯಂತೆ ಸಾಗುವ ದಾರಿಯ ಅನಂತತೆಯನ್ನು ವರ್ಣಿಸುವ ಎಲ್ಲಿ ಹುಟ್ಟಿತೊ ಎಲ್ಲಿ ಮುಟ್ಟಿತೊ ಈ ಅನಂತ ದಾರಿ! ಬಂದರು ಅಡೆತಡೆ, ಇದಕೇತರ ಭಿಡೆ ನಡೆವುದೊಂದೆ ಗುರಿ! ಲೆಕ್ಕವಿಲ್ಲದೀ ಭೇದಗಳಳಿಯುವ ಬದುಕಿಳಿಯಲಿ ಧರೆಗೆ! ಮನುಜ ಕುಲದ ಭಾವೈಕ್ಯವೆ ಉತ್ತರ ಈ ದಾರಿಯ ಮೊರೆಗೆ! ಕಡೆಗೆ ಭಾವೈಕ್ಯತೆಯನ್ನು ಬಿಂಬಿಸುವಲ್ಲಿ ಕವನ ಅಂತ್ಯವಾಗುತ್ತದೆ. ಈ ಕವನವು ಮಹಾರಾಷ್ಟ್ರ ಸರಕಾರದ ಪಿ.ಯು. ತರಗತಿಯ ಪಠ್ಯ ಪುಸ್ತಕದಲ್ಲೂ ಸೇರ್ಪಡೆಯಾಗಿದೆ. ಉದ್ಯೋಗ ನಿಮಿತ್ತ ಹಲವಾರು ಊರುಗಳಲ್ಲಿ ಸುತ್ತುತ್ತಾ, ಹೋದೆಡೆಯಲ್ಲೆಲ್ಲಾ ಕನ್ನಡ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದು ಇತರರಿಗೆ ಪ್ರೋತ್ಸಾಹಿಸಿ, ತಾವೂ ಬೆಳೆದ ಸನದಿಯವರು ಮುಂಬಯಿ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿಯೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದವರು. ೧೯೯೫ ರ ವರೆಗೆ ಬರೆದ ಕವನಗಳ ಸಮಗ್ರ ಕಾವ್ಯ ಸಂಪುಟ ‘ಸೂರ್ಯಪಾನ’ವನ್ನೂ ಮುಂಬಯಿಯ ಭಾವನ ಪ್ರಕಾಶನವು ಹೊರತಂದಿದೆ. ನಂತರ ಬರೆದ ಕವನಗಳು ಐದು ಸಂಕಲನಕದಲ್ಲಿ ಸೇರಿದ್ದರೆ ಸನದಿಯವರ ೭೫ ನೆಯ ವರ್ಷಾಚರಣೆಯ ಸಂದರ್ಭಕ್ಕಾಗಿ ‘ಬಿ.ಎ.ಸನದಿಯವರ ೭೫ ಭಾವಗೀತೆಗಳು’ ೨೦೦೮ ರಲ್ಲಿ ಪ್ರಕಟವಾಗಿದೆ. ಬರೆದ ಹಲವಾರು ಕಥೆಗಳು ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ‘ನೀರಿಲ್ಲದ ನಲ್ಲಿ’ ಸಂಕಲನದಲ್ಲಿ ೧೧ ಕಥೆಗಳಿದ್ದರೆ’ ‘ಅನುಭವ’ಸಂಕಲನದಲ್ಲಿ ೭ ಕಥೆಗಳಿವೆ. ಗ್ರಾಮೀಣ ಸಂಸ್ಕೃತಿಯನ್ನೇ ಮೂಲದ್ರವ್ಯವಾಗಿಟ್ಟುಕೊಂಡು ಬರೆದ ಕಥೆಗಳಲ್ಲಿ ಮಾನವೀಯ ಮೌಲ್ಯಗಳು, ಜೀವನ ಶ್ರದ್ಧೆ ಮಹತ್ವ ಪಡೆದ ಅಂಶಗಳು. ‘ನನ್ನದೊಂದ್ಮಾತು’ (೧೯೯೩) ಸನದಿಯವರ ಹರಟೆಗಳ ಸಂಕಲನ. ಈ ಸಂಕಲನದಲ್ಲಿ ಇಪ್ಪತ್ತೈದು ಹರಟೆಗಳಿವೆ. ಅತಿ ಸಾಮಾನ್ಯವೆನಿಸುವ ಸಣ್ಣ ಸಣ್ಣ ವಿಷಯಗಳನ್ನೇ ಆಯ್ಕೆಮಾಡಿಕೊಂಡು ಚರ್ಚೆಗೆ ಗುರಿಪಡಿಸಿ, ವ್ಯಂಗ್ಯದ ಮೊನಚಿನಿಂದ ಹರಟೆ ಹೊಡೆದಿದ್ದಾರೆ. ಶಿಕ್ಷಕರಾಗಿ ತಾವು ಗಳಿಸಿದ ಅನುಭವಗಳಿಂದ ಮಕ್ಕಳ ಮನಸ್ಸನ್ನೂ ಮುದಗೊಳಿಸಲು, ಆರೋಗ್ಯಕರ ಸಂಸ್ಕಾರವು ದೊರೆಯುವಂತಾಗಲೆಂದು ಹಾರೈಸಲು ಆಡುತ್ತ ಕಲಿ, ಹಾಡುತ್ತ ಕಲಿ, ಮಾಡುತ್ತಿ ಕಲಿ ಎಂಬ ಹೊಸ ಶಿಕ್ಷಣ ಧ್ಯೇಯವನ್ನೂ ಮನಸ್ಸಿನಲ್ಲಿಟ್ಟುಕೊಂಡು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಬಲ್ಲ ಪದ್ಯಗಳನ್ನೂ ರಚಿಸಿದ್ದು ಅವು ‘ಗುಲಾಬಿಗೊಂಚಲು’, ‘ಗೃಹಪಂಚಮಿ’, ‘ಜಿಲೇಬಿ ಝಣ್‌ ಝಣ್‌’, ‘ಹೂವಿನ ಹುಡುಗಿ’,. ‘ಹೊಸಾ ಹೊಸಾ ಹೂವು’ ಮುಂತಾದ ಸಂಕಲನಗಳಲ್ಲಿ ಸೇರಿವೆ. ಉರ್ದು ಮರಾಠಿ ಸಾಹಿತ್ಯದ ಪರಿಚಯವಿದ್ದುದರಿಂದ ಕನ್ನಡ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ತಮ್ಮ ಹರಿತವಾದ ವಿಚಾರಧಾರೆಯಿಂದ ನಿಕಷಕ್ಕೊಡ್ಡಿ ಬರೆದ ವಿಮರ್ಶಾ ಕೃತಿಗಳೆಂದರೆ ಕಾಲಗತಿ ಪ್ರಕಾಶನಕ್ಕಾಗಿ ‘ಜನಕಾವ್ಯದೃಷ್ಟಿ’ ಮತ್ತು ‘ಕಲೆ ಮತ್ತು ಮನುಷ್ಯ ಸಂಸ್ಕೃತಿ’ ಹಾಗೂ ಸಿರಿನುಡಿ ಪ್ರಕಾಶನಕ್ಕಾಗಿ ‘ಇಲ್ಲಿ ಸಲ್ಲುವವರು’ ಮುಂತಾದ ಕೃತಿಗಳಲ್ಲಿ ವಿವೇಚಿಸಿದ್ದಾರೆ. ಅನೇಹ ಹಿರಿಯ ಸಾಹಿತಿಗಳೊಡನೆ ಒಡನಾಟ ಹೊಂದಿದ್ದು, ಅವರುಗಳ ಅಂತರಾಳದ ವಿಚಾರಗಳನ್ನೂ ಆಪ್ತ ನೆಲೆಯಲ್ಲಿ ದಾಖಲಿಸಿರುವ ಕೃತಿ ‘ಗೌರವ’ (೧೯೯೩) ಒಂದು ಉತ್ತಮ ವ್ಯಕ್ತಿ ಚಿತ್ರ ಕೃತಿಯಾಗಿದ್ದು ಸಾಲಿ ರಾಮಚಂದ್ರರಾಯರು, ಬಸವರಾಜ ಕಟ್ಟೀಮನಿ, ಚನ್ನವೀರಕಣವಿ ಮುಂತಾದ ಇಪ್ಪತ್ತೊಂದು ಮಂದಿಯ ಬಗ್ಗೆ ಆಪ್ಯಾಯ ಮಾನವಾದ ಲೇಖನಗಳಿವೆ. ಸಂಪಾದನೆ ಪ್ರಕಾರದಲ್ಲಿಯೂ ದುಡಿದಿರುವ ಸನದಿಯವರು ‘ವಿಜಯದುಂದುಭಿ’ (ಕವನ ಸಂಕಲನ), ‘ಸನ್ಮಾನ ಮತ್ತು ಮುಂಬಯಿ ಕಥೆಗಳು’ (ಕಥಾಸಂಕಲನ), ‘ತುಂಗಾತರಂಗ’, ‘ಶರಣ ಪ್ರಸಾದ’ ಮುಂತಾದವು ಪ್ರಮುಖ ಸಂಪಾದಿತ ಕೃತಿಗಳಾದರೆ ‘ಬಂದೆಯಾ ಬಾರಾಯ’, ‘ನೀಲಾಂಬಿಕೆ’ ಎರಡು ನಾಟಕಗಳನ್ನೂ ರಚಿಸಿದ್ದಾರೆ. ಇದಲ್ಲದೆ ‘ರಕ್ತಮಾಂಗಲ್ಯ’ (ಕಾದಂಬರಿ), ನಮ್ಮ ಭಾರತ ದೇಶ, ಭಗವಾನ್‌ ಮಹಾವೀರ, ತಾನಸೇನ, ಮಿರ್ಜಾಗಾಲಿಬ್‌, ಬಾಬಾಸಾಹೇಬ್‌ ಅಂಬೇಡ್ಕರ್ ಬಾಲಪಟ್ಟ ಫಜೀತಿ, ಕ್ರಿಯೆ ಮತ್ತು ಸಂಬಂಧ (ಜಿ.ಕೆ. ಭಾಷಣಗಳು) ಮುಂತಾದವು ಅನುವಾದಿತ ಕೃತಿಗಳು. ಸನದಿಯವರ ವಿವಿಧ ಪ್ರಕಾರದ ಸಾಹಿತ್ಯ ಚಟುವಟಿಕೆಗಳನ್ನು ಕುರಿತು ‘ಮಾನವ್ಯಕವಿ’ (ಗೌರೀಶಕಾಯ್ಕಿಣಿ), ‘ಸೋಪಾನ’ (ಡಾ. ತಾಳ್ತಜೆ ವಸಂತಕುಮಾರ್) ‘ಸನದಿ ಸಾಹಿತ್ಯ ಸಮೀಕ್ಷೆ’ (ಡಾ. ಗುರುಪಾದ ಮರಿಗುಬ್ಬಿ), ‘ಮಾನವ್ಯಕವಿ ಬಿ.ಎ. ಸನದಿ’ (ಬಿ.ವಿ. ಗುಂಜಟ್ಟಿ), ‘ಬಿ.ಎ. ಸನದಿ ಬದುಕು-ಬರೆಹ’ (ಡಾ.ಜಿ.ಎನ್‌. ಉಪಾಧ್ಯ) ಮುಂತಾದ ಕೃತಿಗಳು ಪ್ರಕಟವಾಗಿದ್ದರೆ ಇವರ ಜೀವನ ಸಾಧನೆ ಕುರಿತು ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಸ್ನೇಹಸಂಪದ’ (೧೯೯೬). ಇವರ ಸಮಗ್ರ ಸಾಹಿತ್ಯದ ಅಧ್ಯಯನ ನಡೆಸಿ ಮುಂಬಯಿ ವಿಶ್ವವಿದ್ಯಾಲಯದಿಂದ ದಾಕ್ಷಾಯಿಣಿ ಉಕ್ಕಲಿ ಯವರು ಡಾಕ್ಟರೇಟ್‌ ಪದವಿ (೨೦೦೩) ಪಡೆದಿದ್ದಾರೆ. ಇದಲ್ಲದೆ ಇವರು ರಚಿಸಿದ ‘ನೀಲಾಂಬಿಕೆ’ ನಾಟಕವು ಮರಾಠಿ ಭಾಷೆಗೂ, ಎರಡು ಕಾವ್ಯ ಕೃತಿಗಳು ನವೆಂಪಯ್ಣ್‌’, ಕಾವ್ಯ (ಕೊಂಕಣಿ) ಮತ್ತು ‘ಅಡ್ಡ ಬೂರೊಂಡೆ,’ ಕಾವ್ಯ್ (ತುಳು ಭಾಷೆಗೂ) ಎಂಬ ಹೆಸರಿನಿಂದ ಅನುವಾದಗೊಂಡಿವೆ. ಸನದಿಯವರ ವೈವಿಧ್ಯಮಯ ಸಾಹಿತ್ಯ ಕೊಡುಗೆಗಾಗಿ ‘ತಾಜಮಹಲು’ ಕವನ ಸಂಕಲನಕ್ಕೆ ರಾಜ್ಯ ಸರಕಾರದ ಪ್ರಶಸ್ತಿ (೧೯೬೨), ‘ಪ್ರತಿಬಿಂಬ’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೬೭), ‘ಧ್ರುವ ಬಿಂದು’ ಕವನ ಸಂಕಲನಕ್ಕೆ ಭಾರತ ಸರಕಾರದ ಪುರಸ್ಕಾರ (೧೯೬೯), ‘ಇಲ್ಲಿ ಸಲ್ಲುವವರು’ ವಚನ ವಿಮರ್ಶಾ ಕೃತಿಗೆ ಕಾವ್ಯಾನಂದ ಪುರಸ್ಕಾರ (೧೯೮೪) ಮುಂತಾದ ಪ್ರಶಸ್ತಿಗಳಲ್ಲದೆ ದೆಹಲಿಯ ಕರ್ನಾಟಕ ಸಂಘದಿಂದ ದೆಹಲಿ ಕನ್ನಡಿಗ ಪರವಾಗಿ ‘ಶ್ರೇಷ್ಠ ಹೊರನಾಡ ಕನ್ನಡಿಗ’ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ಎಸ್‌.ಎನ್‌. ಭೂಸನೂರಮಠ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಗುರುನಾರಾಯಣ ಪ್ರಶಸ್ತಿಗಳಲ್ಲದೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಮುಂತಾದ ಪುರಸ್ಕಾರಗಳು ದೊರೆತಿವೆ.

Details

Date:
August 18
Event Category: