೩೦-೦೧-೧೯೦೧ ೧೯೮೭ ತೈಲವರ್ಣ ಹಾಗೂ ಜಲವರ್ಣ ಚಿತ್ರ ರಚನೆಯಲ್ಲಿ ಸಿದ್ಧಹಸ್ತರೆನಿಸಿದ್ದ ಮಿಣಜಿಗಿಯವರು. ಹುಟ್ಟಿದ್ದು ವಿಜಾಪುರದಲ್ಲಿ. ತಂದೆ ವೀರಪ್ಪ ಶ್ರೀಮಂತ ವ್ಯಾಪಾರಿ, ತಾಯಿ ಶರಣವ್ವ. ಕಲೆ-ಸಂಗೀತದ ವಾತಾವರಣದಲ್ಲಿ ಬೆಳೆದ ಮಿಣಜಿಗಿಯವರು ಕಲಾ ಬದುಕಿನತ್ತ ಆಕರ್ಷಿತರಾದರು. ಪ್ರಾರಂಭಿಕ ಸಾಮಾನ್ಯ ಶಿಕ್ಷಣ ಪಡೆದುದು ಹುಟ್ಟಿದೂರಿನಲ್ಲೆ, ಮುಂದೆ ಓದಲಿಚ್ಚಿಸದೆ ಸೇರಿದ್ದು ಮುಂಬಯಿಯ ಜೆ.ಜೆ. ಕಲಾಮಂದಿರ. ಆರ್ಟ್ ಮಾಸ್ಟರ್ ಪರೀಕ್ಷೆಯಲ್ಲಿ ಪಡೆದದ್ದು ಪ್ರಥಮ ಶ್ರೇಣಿ. ಡಿಪ್ಲೊಮ ಇನ್ ಪೆಯಿಂಟಿಂಗ್ಸ್ನಲ್ಲೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರಥಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿದ್ದು ಲಂಡನ್ನಿನ ಕಾಲೇಜ್ ಆಫ್ ಆರ್ಟ್ಸ್. ವಿಲಿಯಮ್ ರೂಥನ್ ಸ್ಟೈನ್ ಮಾರ್ಗದರ್ಶನ. ನ್ಯಾಷನಲ್ ಗ್ಯಾಲರಿಯಲ್ಲಿದ್ದ ಎರಡು ಪ್ರಸಿದ್ಧ ಚಿತ್ರಗಳ ನಕಲುಮಾಡಿದಾಗ ಸ್ವತಂತ್ರ ಕೃತಿ ರಚಿಸಲು ಮಾರ್ಗದರ್ಶನ. ನಂತರ ರಚಿಸಿದ್ದು ಹಲವಾರು ಚಿತ್ರಗಳು. ಕರ್ನಾಟಕಕ್ಕೆ ಬಂದು ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಆರಂಭಿಸಿದ್ದ ಕರ್ನಾಟಕ ಆರ್ಟ್ಸ್ ಎಜುಕೇಷನ್ ಸಂಸ್ಥೆಯ ಕಲಾಮಂದಿರಕ್ಕೆ ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ, ಮಿಣಜಿಗಿಯವರ ಆಯ್ಕೆ. ಇದೇ ಮಹಂತೇಶ ಕಲಾವಿದ್ಯಾಲಯವಾಗಿ ರೂಪಗೊಳ್ಳಲು ಪಟ್ಟ ಅಪಾರ ಶ್ರಮ. ಬೆಂಗಳೂರಿನಲ್ಲಿ ಡ್ರಾಯಿಂಗ್ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮತ್ತು ದಾವಣಗೆರೆಯಲ್ಲಿ ಚಿತ್ರಕಲಾ ಹಾಗೂ ಕೈಗಾರಿಕಾ ಕಲಾ ಶಾಲೆ ತೆರೆಯಲು ವಹಿಸಿದ ಪ್ರಧಾನ ಪಾತ್ರ. ರಾಗಮಾಲಾ, ನಿಸರ್ಗ ಸಂಯೋಜನೆ, ಭಾವಚಿತ್ರ, ಶರಣ ಸಾಹಿತ್ಯ, ಬಾದಾಮಿ ಭಿತ್ತಿ ಚಿತ್ರಗಳ ಹಲವು ಬಗೆ, ಜೋಗ್ಫಾಲ್ಸ್, ಕಲಗೇರಿಯ ಸುಂದರ ದೃಶ್ಯ, ಹೆಸರು ತಂದ ನಿಸರ್ಗ ಚಿತ್ರಗಳು. ರಾಜ್ಯ ಲಲಿತಕಲಾ ಅಕಾಡಮಿ ಉಪಾಧ್ಯಕ್ಷ, ಕೇಂದ್ರ ಲಲಿತಕಲಾ ಅಕಾಡಮಿ ಸದಸ್ಯ, ರಾಜ್ಯ ಸಂಗೀತ ನಾಟಕ ಅಕಾಡಮಿ ಉಪಾಧ್ಯಕ್ಷ-ನಿರ್ವಹಿಸಿದ ಹುದ್ದೆಗಳು, ಜಪಾನಿನಲ್ಲಿ ನಡೆದ ಕಲಾ ಸಮ್ಮೇಳನದಲ್ಲಿ ಭಾಗಿ. ಮೈಸೂರು ದಸರ ಮಹೋತ್ಸವದಲ್ಲಿ ಕುಂಚಬ್ರಹ್ಮ, ಮೈಸೂರು ಲಲಿತಕಲಾ ಅಕಾಡಮಿ ಪ್ರಶಸ್ತಿ, ಕರ್ನಾಟಕ ಕಲಾ ಸಾರ್ವಭೌಮ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಮುಂತಾದ ಗೌರವಗಳು. ಇದೇ ದಿನ ಹುಟ್ಟಿದ ಕಲಾವಿದರು : ಎಚ್.ಎಸ್. ಇಂದಿರಾ – ೧೯೫೮
* * *