
ಮಲ್ಪೆ ಶಂಕರನಾರಾಯಣ ಸಾಮಗ
December 11
೧೧-೧೨-೧೯೧೧ ೧-೮-೧೯೯೯ ಯಕ್ಷಗಾನ ಪಟುವಾಗಿ, ಹರಿಕಥಾ ದಾಸರಾಗಿ, ಗಾಂಧಿವಾದಿಯಾಗಿ ಜನಾನುರಾಗಿ, ವ್ಯಕ್ತಿ ಎನಿಸಿದ್ದ ಶಂಕರನಾರಾಯಣ ಸಾಮಗರು ಹುಟ್ಟಿದ್ದು ಉಡುಪಿಯ ಬಳಿಯ ಮಲ್ಪೆಯಲ್ಲಿ. ತಂದೆ ಲಕ್ಷ್ಮೀನಾರಾಯಣ ಸಾಮಗ, ತಾಯಿ ಲಕ್ಷ್ಮೀ ಅಮ್ಮ. ಓದಿದ್ದು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ.ವರೆಗೆ. ಸ್ವಾತಂತ್ರ್ಯ ಚಳುವಳಿಯ ಗಾಳಿ ಬೀಸತೊಡಗಿದಾಗ ಗಾಂಧೀಜಿಯವರ ವಿಚಾರಧಾರೆಗೆ ಮನಸೋತು ಹಿಡಿದ ಚಳುವಳಿ ದಾರಿ, ಹರಿದಾಸ ವೃತ್ತಿ ಆರಂಭಿಸಿ ಗಾಂಧೀಜಿ ವಿಚಾರಧಾರೆಯನ್ನು ಹರಿಕಥೆಯ ಮೂಲಕ ಪ್ರಚಾರಪಡಿಸಿದವರಲ್ಲಿ ಅಗ್ರಗಣ್ಯರು. ಚಳುವಳಿಯಿಂದ ಎರಡುಬಾರಿ ಸೆರೆಮನೆವಾಸ. ಸೆರೆವಾಸದ ಸಮಯವನ್ನು ಜ್ಞಾನಾರ್ಜನೆಗಾಗಿ ಬಳಸಿಕೊಂಡು ಹಿರಿಯ ಕೈದಿಗಳಿಂದ ಕಲಿತ ಯಕ್ಷಗಾನ ಅರ್ಥವಂತಿಕೆ. ಯಕ್ಷಗಾನದ ಪ್ರಮುಖ ಪ್ರಭೇದವಾದ ತಾಳಮದ್ದಲೆಗೆ ತಾರ್ಕಿಕಜ್ಞಾನ, ಸ್ಮರಣಶಕ್ತಿ, ಪಾಂಡಿತ್ಯದಿಂದ ಕೊಟ್ಟ ಹೊಸರೂಪ, ಕರಾವಳಿ ಕರ್ನಾಟಕದಾದ್ಯಂತ ಗ್ರಾಮೀಣ ಕಲೆಯ ಪ್ರಚಾರ. ದೇವಿಮಹಾತ್ಮೆ, ಯಕ್ಷಗಾನ, ಸೌರಭ, ದೇವರು ಕೃತಿಗಳ ರಚನೆ, ಪ್ರಕಟಣೆ, ಸರಕಾರ ಕೊಟ್ಟ ಭೂಮಿಯಲ್ಲಿ ‘ಗಾಂಧೀ ಗುಡಿ’ ತೆರೆದು ಕೃಷಿಕರಿಗೆ ನೀಡಿದ ಮಾರ್ಗದರ್ಶನ. ನಲವತ್ತು ವರ್ಷಕಾಲ ಮಾಡಿದ ಯಕ್ಷಗಾನ ಕಲಾಸೇವೆ. ಯಕ್ಷಗಾನ ಕಲಾಸೇವೆಗಾಗಿ ಕೇಂದ್ರ ಸರಕಾರದಿಂದ ಪ್ರಶಸ್ತಿ, ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಆಶುವೈಭವ’, ಯಕ್ಷಗಾನಕ್ಕೆ ಸಂದ ದೊಡ್ಡಗೌರವ. ಇದೇ ದಿನ ಹುಟ್ಟಿದ ಕಲಾವಿದರು : ಶ್ರೀನಿವಾಸನ್ ಟಿ.ಆರ್. – ೧೯೨೭ ನೀಳ ಜಿ.ವಿ. – ೧೯೩೯ ಗೋವಿಂದರಾಜ್ ಬಿ.ಎಲ್. – ೧೯೪೫ ಕಾಶಿ ಎಂ. – ೧೯೬೦
* * *