
ಮಲ್ಲಿಕಾರ್ಜುನ ಮನ್ಸೂರ್
December 31
೩೧-೧೨-೧೯೧೦ ೧೨-೯-೧೯೯೨ ಜೈಪುರ ಘರಾಣೆಯ ಶ್ರೇಷ್ಠ ಸಂಗೀತರತ್ನರೆನಿಸಿದ್ದ ಮಲ್ಲಿಕಾರ್ಜುನ ಮನ್ಸೂರರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಮನ್ಸೂರು ಗ್ರಾಮ. ತಂದೆ ಭೀಮರಾಯಪ್ಪ, ತಾಯಿ ನೀಲಮ್ಮ. ಓದಿಗಿಂತ ಸಂಗೀತ ನಾಟಕಗಳತ್ತ ಹರಿದ ಮನಸ್ಸು. ಹತ್ತನೆಯ ವಯಸ್ಸಿನಲ್ಲೇ ವಿಶ್ವಗುಣಾದರ್ಶ ನಾಟಕ ಮಂಡಲಿ ಸೇರಿ ಪ್ರಹ್ಲಾದ ನಾಟಕದಲ್ಲಿ ಪ್ರಹ್ಲಾದನ ಪಾತ್ರಧಾರಿ. ಸಂಗೀತ, ಅಭಿನಯಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿದ ಯುವಕ. ವಾಮನರಾವ ಮಾಸ್ತರ ನಾಟಕ ಕಂಪನಿಯ ಬಾಲನಟನ ಪಾತ್ರಧಾರಿ. ಪಂ. ನೀಲಕಂಠ ಬುವಾರವರ ಬಳಿ ಸಂಗೀತ ಶಿಕ್ಷಣ. ಉಸ್ತಾದ್ ಮಂಜೀಖಾನ್, ಅಲ್ಲಾದಿಯಾಖಾನ್, ಬುರ್ಜಿಖಾನ್ ಇವರ ಬಳಿ ಮುಂದುವರಿದ ಶಿಕ್ಷಣ. ಎಚ್.ಎಂ.ವಿ. ಕಂಪನಿ ಹೊರತಂದ ಧ್ವನಿಮುದ್ರಿಕೆಗಳಿಂದ ಮಹಾರಾಷ್ಟ್ರದಲ್ಲೂ ಗಳಿಸಿದ ಖ್ಯಾತಿ, ವಚನಗಳ, ತತ್ತ್ವಪರಗಳನ್ನು ಹಾಡಿ ಗಳಿಸಿದ ಅಪಾರ ಜನಮನ್ನಣೆ, ಆಕಾಶವಾಣಿ ರಾಷ್ಟ್ರೀಯ ಜಾಲದಲ್ಲಿ ಹಲವಾರು ಬಾರಿ ಸಂಗೀತ ಕಚೇರಿ ಪ್ರಸಾರ. ಧಾರವಾಡ, ಪುಣೆ, ಮುಂಬಯಿ, ಬೆಂಗಳೂರು ಆಕಾಶವಾಣಿ ಕೇಂದ್ರಗಳ ಸಲಹೆಗಾರರು. ಗದಗಿನಲ್ಲಿ ಸಂಗೀತ ರತ್ನ, ಅಥಣಿಯಲ್ಲಿ ಗಂಧರ್ವರತ್ನ, ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ, ಮಧ್ಯಪ್ರದೇಶ ಸರಕಾರದ ಕಾಳಿದಾಸ ಸಮ್ಮಾನ್, ಖಾನ್ ಸಾಹೇಬ ಹಾಫಿಜ ಅಲಿಖಾನ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್, ‘ಸಂಗೀತ ರತ್ನ’ ಗೌರವ ಗ್ರಂಥ ಸಮರ್ಪಣೆ ಮುಂತಾದ ಗೌರವಗಳು. ಇದೇ ದಿನ ಹುಟ್ಟಿದ ಕಲಾವಿದರು : ಟಿ.ಪಿ. ಅಕ್ಕಿ – ೧೯೦೮ ಪ್ರೊ. ಯು.ಎಸ್. ಕೃಷ್ಣರಾವ್ – ೧೯೧೨ ಶ್ರೀಪಾದ ಕಾಳಪ್ಪ ಸೋನಾರ್ – ೧೯೧೬ ಚಿದಂಬರ ಕೃಷ್ಣ ಜೋಶಿ – ೧೯೩೧ ಶೈಲಶ್ರೀ ಸುದರ್ಶನ್ – ೧೯೪೬
* * *