೧೨–೯–೧೯೦೫ ೧೧–೧೦–೧೯೯೫ ವೃತ್ತಿ ರಂಗಭೂಮಿಗೆ ಹೇಳಿ ಮಾಡಿಸಿದಂತಹ ಶಾರೀರ, ಶರೀರ ಎರಡೂ ಕೂಡಿ ಅಪ್ರತಿಮ ಕಲಾವಿದೆ ಎನಿಸಿದ್ದ ಸುಂದರಮ್ಮ ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಪಿಟೀಲು ವಿದ್ವಾಂಸರಾಗಿದ್ದ ಮಳವಳ್ಳಿ ಸುಬ್ಬಣ್ಣ. ತಾಯಿ ಲಕ್ಷ್ಮೀದೇವಮ್ಮ. ತಂದೆಯಿಂದಲೇ ಎರಡು ವರ್ಷ ಕರ್ನಾಟಕ ಸಂಗೀತದ ಪಾಠ. ಏಳನೆಯ ವಯಸ್ಸಿಗೇ ರಂಗಭೂಮಿ ಪ್ರವೇಶ. ತಂದೆಯವರು ನಡೆಸಲು ಪ್ರಾರಂಭಿಸಿದ ಶ್ರೀಕೃಷ್ಣ ವಿಲಾಸ ನಾಟಕ ಸಭಾ ಮಂಡಲಿಯ ನಾಟಕಗಳಾದ ಪಾಂಡುವಿಜಯ, ಸದಾರಮೆ, ಗುಲೇಬಕಾವಲಿ, ಚೋರಕಥೆ, ಸಾರಂಗಧರ, ವಸಂತ ಮಿತ್ರವಿಜಯ, ಮುಂತಾದ ನಾಟಕಗಳಲ್ಲಿ ಬಾಲನಟಿ ಪಾತ್ರ. ವಿರಾಟಪರ್ವದ ದ್ರೌಪದಿ, ಸುಭದ್ರಾ ಪರಿಣಯದ ಸುಭದ್ರೆ ಪಾತ್ರ ಬಹು ಹೆಸರು ತಂದು ಕೊಟ್ಟ ನಾಟಕಗಳು. ಕೊಟ್ಟೂರಪ್ಪ, ಜಿ. ನಾಗೇಶರಾಯರು, ಬಿ.ಎ. ಗುರುಮೂರ್ತಪ್ಪ, ಚಿಕ್ಕಬಸವರಾಜು ಮುಂತಾದ ನಟ ಭಯಂಕರರೊಡನೆ ನಾಯಕಿಯಾಗಿ ಗಳಿಸಿದ ಖ್ಯಾತಿ. ವಾಸುದೇವಾಚಾರ್ಯರಲ್ಲಿ ಮತ್ತು ಪಿಟೀಲು ತಾಯಪ್ಪನವರಲ್ಲಿ ಸಂಗೀತಾಭ್ಯಾಸ. ೧೮ನೆ ವಯಸ್ಸಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಮುಂದೆ ನಾಟಕದಲ್ಲಿ ಪಾತ್ರವಹಿಸಿದ್ದಲ್ಲದೆ ಬೇಸಿಗೆ ಅರಮನೆಯಲ್ಲಿ ನಡೆಸಿಕೊಟ್ಟ ಸಂಗೀತ ಕಚೇರಿ. ಮದರಾಸಿನ ಓಡಿಯನ್ ಕಂಪನಿಯಿಂದ ರಂಗ ಗೀತೆಗಳ ಧ್ವನಿಮುದ್ರಿಕೆ, ಮಾರ್ಕಂಡೇಯ ಚಲನಚಿತ್ರದಲ್ಲಿ ಪಾತ್ರಧಾರಿ, ಚಾಮುಂಡೇಶ್ವರಿ ನಾಟಕಸಭಾ ಆಡಳಿತ ವಹಿಸಿಕೊಂಡು ರಾಜ್ಯದ ಹಲವಾರು ಕಡೆ ಅನೇಕ ನಾಟಕಗಳ ಪ್ರದರ್ಶನ. ಬಂದ ೩೦,೦೦೦ ರೂಗಳನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾನ. ೧೯೬೨ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರಶಸ್ತಿ. ಜೀವನ ಚರಿತ್ರೆ ಅಭಿನಯ ಶಾರದೆ ಪ್ರಕಟಿತ. ಇದೇ ದಿನ ಹುಟ್ಟಿದ ಕಲಾವಿದ ಪ್ರಕಾಶ್ ಎಸ್ – ೧೯೪೮
* * *