
ಮೈಸೂರು ಅನಂತಸ್ವಾಮಿ
October 25
೨೫–೧೦–೧೯೩೬ ೯–೧–೧೯೯೫ ಸುಗಮಸಂಗೀತಕ್ಕೆ ಹೊಸ ಆಯಾಮ ನೀಡಿದ ಅನಂತಸ್ವಾಮಿಯವರು ಹುಟ್ಟಿದ್ದು ಮೈಸೂರು. ತಂದೆ ಸುಬ್ಬರಾಯರು, ತಾಯಿ ಕಮಲಮ್ಮನಿಗೆ ಸಂಗೀತದ ಬಗ್ಗೆ ವಿಶೇಷ ಒಲವು. ಬಾಲ್ಯದಲ್ಲೇ ಸುಗಮ ಸಂಗೀತದ ಬಗ್ಗೆ ಗೀಳುಹಿಡಿಸಿದವರು ಗೆಳೆಯ ರಾಮಚಂದ್ರರಾವ್. ಭಾವಪೂರ್ಣವಾಗಿ ಬೇಂದ್ರೆ, ಕುವೆಂಪು ಕವನಗಳನ್ನು ಹಾಡುತ್ತಿದ್ದುದೇ ಇವರ ಮೇಲೆ ಬೀರಿದ ಪ್ರಭಾವ. ಉದ್ಯೋಗಕ್ಕಾಗಿ ಸೇರಿದ್ದು ಬೆಂಗಳೂರಿನ ಎಲೆಕ್ಟ್ರಾನಿಕ್ ರಾಡಾರ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್. ದುಡಿದದ್ದು ಕನ್ನಡ ಸಾಹಿತ್ಯ ಹಾಗೂ ಸುಗಮ ಸಂಗೀತ ಕ್ಷೇತ್ರ. ಕಾಳಿಂಗರಾವ್ ಕಂಪನಿಗೆ ಸೇರಿ ಕೆಲಕಾಲ ಮ್ಯಾಂಡೋಲಿನ್ ನುಡಿಸಿದ ಕೀರ್ತಿ. ಕಾಳಿಂಗರಾವ್ರವರಿಂದ ಮದರಾಸಿಗೆ ಹೋಗಿ ಜಿ.ಕೆ.ವೆಂಕಟೇಶ್, ಎಂ.ಎಸ್.ವಿಶ್ವನಾಥ್, ದಿವಾಕರ್ ಮುಂತಾದ ಸಂಗೀತ ನಿರ್ದೇಶಕರ ಗರಡಿಯಲ್ಲಿ ಸಂಗೀತ ಸಂಯೋಜನೆ, ಸುಗಮಸಂಗೀತ ಕ್ಷೇತ್ರದಲ್ಲಿ ದುಡಿಯಲು ನಿರ್ಧರಿಸಿ ಬಂದುದು ಮೈಸೂರಿಗೆ. ಕುವೆಂಪು, ಬೇಂದ್ರೆ, ಕೆ.ಎಸ್.ನ, ಜಿ.ಪಿ.ರಾಜರತ್ನಂ, ಟಿ.ಪಿ.ಕೈಲಾಸಂ, ಗೀತೆಗಳಿಗೆ ಹಾಕಿದ ಹೊಸರಾಗಗಳು, ಆಕಾಶವಾಣಿಯಿಂದ ಪ್ರಸಾರ. ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದಂತೆ ಕ್ಯಾಸೆಟ್ ಯುಗಕ್ಕೂ ಹಾಡಿದ ನಾಂದಿ. ನಿಸಾರರ ನಿತ್ಯೋತ್ಸವಕ್ಕೆ ರಾಗಸಂಯೋಜನೆ, ಹಾಡುಗಾರಿಕೆ. ಭಾವಸಂಗಮ, ಕೆಂದಾವರೆ (ಅಡಿಗರ ಕವನಗಳು); ಪ್ರೇಮತರಂಗ (ಕೆ.ಎಸ್.ನ); ಹೇಳತೇನ ಕೇಳ (ಕಂಬಾರ); ಜೋಡಿ ಕಹಳೆ (ಮಕ್ಕಳಿಗಾಗಿ); ದುಂದುಭಿ (ಪ್ರಮುಖರ ಕವನಗಳು); ರತ್ನನ ಪದಗಳು (ಜಿ.ಪಿ.ರಾ); ತಾರಕ್ಕ ಬಿಂದಿಗೆ (ಪುರಂದರ ದಾಸರು); ಭಾವೋತ್ಸವ; ನೀಲಾಂಜನ (ಲ.ನ. ಭಟ್ಟ); ಕಡೆಯ ಕ್ಯಾಸೆಟ್ ನಿಸಾರರ ‘ಸುಮಧುರ’ ಒಳಗೊಂಡಂತೆ ಇಪ್ಪತ್ತಾರು ಕ್ಯಾಸೆಟ್ಟುಗಳಿಗೆ ಸಂಗೀತ ನಿರ್ದೇಶನ, ಹಾಡುಗಾರಿಕೆ. ಯಾರು ಹಿತವರು, ಪುಣ್ಯಕೋಟಿ, ಚಿತ್ರಕೂಟ, ಶಿವಯೋಗಿ ಅಕ್ಕಮಹಾದೇವಿ, ಘಳಿಗೆ, ಮಾಡಿ ಮಡಿದರು ಮುಂತಾದ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು. ಇದೇದಿನಹುಟ್ಟಿದಕಲಾವಿದರು ಜಯಲಕ್ಷ್ಮೀ ಆಳ್ವ – ೧೯೩೩ ವಿ. ಗೋಪಾಲ್- ೧೯೪೮ ವಿಜಯಲಕ್ಷ್ಮೀ – ೧೯೫೭
* * *