೦೮.೦೫.೧೯೨೭ ಸಂಗೀತ, ನೃತ್ಯ, ಭೌತ ವಿಜ್ಞಾನ, ಪುರಾತತ್ವ ಶಾಸ್ತ್ರಿಗಳಲ್ಲಿ ಖ್ಯಾತರೆನಿಸಿರುವ ಸತ್ಯನಾರಾಯಣರು ಹುಟ್ಟಿದ್ದು ಮೈಸೂರು. ಸಂಗೀತಗಾರರ ಮನೆತನ. ತಂದೆ ರಾಮಯ್ಯ ತಾಯಿ ವರಲಕ್ಷ್ಮಮ್ಮ, ಅಣ್ಣಂದಿರಾದ ರಾ. ಚಂದ್ರಶೇಖರಯ್ಯ, ರಾ. ಸೀತಾರಾಮ್ರವರು ಮೈಸೂರು ಸಹೋದರರೆಂದೇ ಗಾಯನದಲ್ಲಿ ಪ್ರಖ್ಯಾತರಾದರೆ ರಾ. ವಿಶ್ವೇಶ್ವರನ್ ರವರು ವೀಣೆಯಲ್ಲಿ ಪ್ರಸಿದ್ಧರು. ಸ್ಕೂಲಿಗೆ ಹೋಗಲು ತಕರಾರು ಮಾಡಿದರೂ ಓದಿನಲ್ಲಿ ಸದಾ ಮುಂದು. ಎಸ್.ಎಸ್.ಎಲ್.ಸಿ.ಯಲ್ಲಿ ರ್ಯಾಂಕ್. ಪ್ರತಿವರ್ಷವೂ ಹಲವಾರು ಬಹುಮಾನಗಳು. ಅರಮನೆಯ ಸ್ಕಾಲರ್ಶಿಪ್ ಜನರಲ್ ಮೆರಿಟ್ ಸ್ಕಾಲರ್ಶಿಪ್ಗಳಿಂದ ಶಾಲೆಯ ಶಿಕ್ಷಣ. ಬರವಣಿಗೆಯೂ ಅಷ್ಟೆ. ಭಿನ್ನವಾದ ವಿಚಾರಗಳಿಂದ ಕೂಡಿದ ಉತ್ತರ. ನಾಲ್ವರು ಮಕ್ಕಳ ಸುಪ್ತವಾಗಿದ್ದ ಸೃಜನಶೀಲತೆಗೆ ನೀರೆರೆದವರು ತಾಯಿಯೇ. ಪ್ರತಿಯೊಬ್ಬರಿಗೂ ಅವರವರಿಗೆ ಇಷ್ಟವಾದ ಹಾದಿಯಲ್ಲಿ ತರಬೇತಿ. ಮನೆಯಲ್ಲಿ ಸಾಂಸ್ಕೃತಿಕ ವಾತಾವರಣ. ಕೈಲಾಸಂ ರವರ ಟೊಳ್ಳುಗಟ್ಟಿ, ಬಂಡ್ವಾಳವಿಲ್ಲದ ಬಡಾಯಿ, ಅಮ್ಮಾವ್ರಗಂಡ ಮುಂತಾದ ನಾಟಕಗಳ ಪ್ರಯೋಗ. ಮೊದ್ದುಮಣಿ ಪಾತ್ರಗಳಿಗೆ ಹೇಳಿ ಮಾಡಿಸಿದ ಮುಖ ಸತ್ಯನಾರಾಯಣರದ್ದು. ಉತ್ತಮ ಭಾಷಣಕಾರರು. ಥಿಯರಿ ಆಫ್ ರಿಲೆಟಿವಿಟಿ ಬಗ್ಗೆ ಭಾಷಣಕೊಡಬೇಕಾದ ಸಂದರ್ಭದಲ್ಲಿ ಬಂದ ಹಲವಾರು ಪ್ರಶ್ನೆಗಳಿಂದ ಕಲಿತ ಪಾಠ. ತಲಸ್ಪರ್ಶಿ ಅಧ್ಯಯನ ನಡೆಸಬೇಕೆಂಬ ಛಲ. ತಾಯಿಯ ಪ್ರೇರಣೆಯಿಂದ ಪ್ರಾರಂಭಿಸಿದ ’ವರಲಕ್ಷ್ಮೀ ಮ್ಯೂಸಿಕ್ ಅಕಾಡೆಮಿ’ ಹಲವಾರು ಶಾಖೆಗಳು. ವಿದ್ಯಾರ್ಥಿಗಳಿಗೆ ಕಲಿಸಿದ ಸಂಗೀತ. ಮನೆಯಲ್ಲಿ ನಡೆಸುತ್ತಿದ್ದ ರಾಮೋತ್ಸವಕ್ಕೆ ಮೈಸೂರು ವಾಸುದೇವಾಚಾರ್ಯ, ದ್ವಾರಂ, ವೆಂಕಟಗಿರಿಯಪ್ಪ ಮುಂತಾದವರೆಲ್ಲ ಪಾಲ್ಗೊಳ್ಳುತ್ತಿದ್ದುದೇ ವಿಶೇಷ. ಸಂಗೀತಗಾರರಾದ ಟೈಗರ್ ವರದಾಚಾರ್, ಬೂದಲೂರು ಕೃಷ್ಣಮೂರ್ತಿ ಮುಂತಾದವರೊಡನೆ ಸಂಪರ್ಕ. ಮನೆಯಲ್ಲಿ ಸದಾ ಸಂಗೀತದ ಚರ್ಚೆ. ಗಾಯನಕ್ಕೆ ಬೇಕಾದ ಶಾಸ್ತ್ರ ಸಂಬಂಧ, ವಾದನ ಶೈಲಿ, ಲಕ್ಷ್ಯ-ಲಕ್ಷಣ ಗಳೆರಡಕ್ಕೂ, ವಾದನ-ಬೋಧನೆಗಳಿಗೂ ನೀಡಿದ ಮಹತ್ತರ ಕೊಡುಗೆ. ಮೈಸೂರು ಶಾರದಾ ವಿಲಾಸ್ ಕಾಲೇಜಿನ ವಿಜ್ಞಾನ ಉಪನ್ಯಾಸಕರಾಗಿ, ಇನಾರ್ಗ್ಯಾನಿಕ್ ಕೆಮಿಸ್ಟ್ರಿಯ ಪ್ರೊಫೆಸರಾಗಿ ಸಲ್ಲಿಸಿದ ಸೇವೆ. ಕರ್ನಾಟಕದ ಸಂಗೀತವಾಹಿನಿ, MUSIC OF MADHWA MONKS, ನೃತ್ಯ ನಿರ್ಣಯ, ಬೃಹದ್ದೇಶಿ, ಪುಂಡರೀಕ ಮಾಲಾಗಳಿಗೆ ಬರೆದ ಪ್ರವೇಶಿಕಾ ಗ್ರಂಥಗಳು. ಯೋಗ, ವ್ಯಾಕರಣ, ಮಂತ್ರ-ತಂತ್ರ, ಸಂಗೀತಶಾಸ್ತ್ರ, ಪ್ರಯೋಗನೃತ್ಯ, ವೇದವೇದಾಂತ, ಮೀಮಾಂಸೆ, ಛಂದಸ್ಸು ಹೀಗೆ ಪ್ರತಿಯೊಂದು ವಿಷಯದಲ್ಲೂ ಅಧಿಕೃತವಾಗಿ ಮಾತನಾಡಬಲ್ಲ ಏಕೈಕ ವ್ಯಕ್ತಿ ರಾ. ಸತ್ಯನಾರಾಯಣರವರು. ಇದೇ ದಿನ ಹುಟ್ಟಿದ ಕಲಾವಿದರು ಮಣಿ ಅಯ್ಯರ್.ಸಿ.ಆರ್ – ೧೯೧೫ ನಾರಾಯಣ ಎಲ್.ನಾಥನ್ – ೧೯೨೧ ಬಿ.ಆರ್.ಜಿ.ರಾವ್- ೧೯೩೫ ಲತಾ ನಾಡಿಗೇರ್-೧೯೫೧ ಯಮುನಾರಾಣಿ – ೧೯೭೫

