೨೬-೯-೧೯೦೪ ೧೭-೧೦-೧೯೮೪ ರಂಗಭೂಮಿಗೆ ಹೊಸದಿಕ್ಕು ತೋರಿದ ಶ್ರೀರಂಗ ಕಾವ್ಯನಾಮದ ರಂಗಾಚಾರ್ಯರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಅಗರಖೇಡದಲ್ಲಿ. ‘ಆದ್ಯ’ರು ಎಂಬುದು ಜಹಗೀರದಾರರ ಮನೆತನಕ್ಕೆ ಉತ್ತರಾಮಠದ ಸ್ವಾಮಿಗಳು ನೀಡಿದ ವಿಶೇಷಣ. ಆದ್ಯರಂಗಾಚಾರ್ಯರಾದರು. ತಂದೆ ವಾಸುದೇವಾಚಾರ್ಯ, ತಾಯಿ ರಮಾಬಾಯಿ. ಪ್ರಾರಂಭಿಕ ಶಿಕ್ಷಣ ಅಗರಖೇಡ. ಬಿಜಾಪುರದಲ್ಲಿ ಮಾಧ್ಯಮಿಕ, ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪದವಿ. ಲಂಡನ್ನಿನ ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್ನಲ್ಲಿ ಭಾಷಾಶಾಸ್ತ್ರದಲ್ಲಿ ಪಡೆದ ಎಂ.ಎ. ಪದವಿ (೧೯೨೫-೨೮) ವಿದ್ಯಾರ್ಥಿ ದೆಸೆಯಿಂದಲೇ ನಾಟಕ ರಚನೆಯ ಹುಚ್ಚು. ರಚಿಸಿದ ಮೊದಲ ಕೃತಿ ‘ಉದರ ವೈರಾಗ್ಯ’ ೧೯೩೦ರಲ್ಲಿ ಪ್ರಕಟಿತ. ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಸಹಾಯಕ ಉಪನ್ಯಾಸಕರಾಗಿ ನೇಮಕ. ನಂತರ ೧೯೫೪ರಲ್ಲಿ ಕೇಂದ್ರ ಸಮಾಚಾರ ಮತ್ತು ಪ್ರಸಾರ ಇಲಾಖೆ. ೧೯೫೬ರಲ್ಲಿ ಬೆಂಗಳೂರು ಆಕಾಶವಾಣಿಯ ನಾಟಕ ವಿಭಾಗದ ನಿರ್ದೇಶಕರ ಹುದ್ದೆ. ಬಾಲ್ಯದಲ್ಲೇ ಗ್ರಾಮೀಣ ರಂಗಭೂಮಿ ಬೀರಿದ ಪ್ರಭಾವ. ಬಿಜಾಪುರ ಮತ್ತು ಪುಣೆಯ ಕಂಪನಿಯ ನಾಟಕಗಳು ಬಣ್ಣದ ಬದುಕಿನ ರುಚಿ ತೋರಿದವು. ಇಂಗ್ಲೆಂಡಿನಲ್ಲಿದ್ದಾಗ ೩ ವರ್ಷ ವಿವಿಧ ರಂಗಭೂಮಿಯ ಪರಿಚಯ. ರಚಿಸಿದ ನಾಟಕಗಳು ಹಲವಾರು-ದರಿದ್ರ ನಾರಾಯಣ, ಹರಿಜನ್ವಾರ, ಪ್ರಪಂಚ ಪಾಣಿಪತ್ತು, ಸಂಧ್ಯಾಕಾಲ, ಕರ್ತಾರನ ಕಮ್ಮಟ, ಶೋಕಚಕ್ರ, ಕತ್ತಲೆ-ಬೆಳಕು, ಕೇಳು ಜನಮೇಜಯ, ಸಿರಿಪುರಂದರ, ಏನು ಬೇಡಲಿ ನಿನ್ನ ಬಳಿಗೆ ಬಂದು, ಗುಮ್ಮನೆಲ್ಲಿಹ ತೋರಮ್ಮ, ಸಂಸಾರಿಗ ಕಂಸ, ಜರಾಸಂ, ಜೀವನ ಜೋಕಾಲಿ ಮುಂತಾದ ೩೪ ದೊಡ್ಡ ನಾಟಕಗಳು, ಐವತ್ತು ಏಕಾಂಕ ನಾಟಕಗಳು, ಹತ್ತು ಕಾದಂಬರಿಗಳು, ನೂರಿಪ್ಪತ್ತು ಹಾಸ್ಯ ಪ್ರಬಂಧಗಳು, ಭಗವದ್ಗೀತೆ, ಸಂಸ್ಕೃತ ನಾಟಕ, ಭಾಷಾಶಾಸ್ತ್ರ, ನಾಟ್ಯಶಾಸ್ತ್ರ, ಹಾಸ್ಯರಸ ವಿವೇಚನೆ, ಕಾಳಿದಾಸ ಈ ವಿಷಯಗಳ ಮೇಲೆ ಬರೆದ ಒಂಬತ್ತು ಗ್ರಂಥಗಳೂ ಸೇರಿ ಒಟ್ಟು ೧೦೦ಕ್ಕೂ ಹೆಚ್ಚು ಕೃತಿ ರಚನೆ. ಹಾಸ್ಯನಾಟಕಕಾರ, ಪ್ರತಿಭಾಶಾಲಿ, ಕ್ರಾಂತಿಕಾರ, ನವ್ಯನಾಟಕಕಾರ, ಪ್ರಯೋಗಶೀಲ ಹೀಗೆ ಒಂದೊಂದು ನಾಟಕ ಬರೆದಾಗಲೂ ಸಂದ ಬಿರುದುಗಳು. ಸಂದ ಗೌರವ ಪ್ರಶಸ್ತಿಗಳು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (೧೯೫೫). ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸರಕಾರದ ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡಮಿ ನಾಟಕಕಾರ ಪ್ರಶಸ್ತಿ, ಕೇಂದ್ರನಾಟಕ ಅಕಾಡಮಿ ಫೆಲೋಷಿಪ್, ರಾಜ್ಯ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಆಕಾಶವಾಣಿ ಮತ್ತು ದೂರದರ್ಶನದ ಎಮಿರಿಟಸ್ ಪ್ರೊಡ್ಯೂಸರ್ ಪ್ರಶಸ್ತಿ, ಕರ್ನಾಟಕ ಮತ್ತು ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್. ಇದೇ ದಿನ ಹುಟ್ಟಿದ ಸಾಹಿತಿಗಳು : ಶ್ರೀನಿವಾಸ ತೋಫಖಾನೆ – ೧೯೨೬ ನಂಜೇಗೌಡ ಹಾರೋಹಳ್ಳಿ – ೧೯೨೮

