೦೯.೦೩.೧೯೪೧ ೧೩.೦೪.೨೦೦೮ ವೃತ್ತಿಯಿಂದ ವಕೀಲರಾಗಿದ್ದರೂ ಪ್ರವೃತ್ತಿಯಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಲಲಿತಕಲೆ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಸರಿತಾ ಕುಸುಮಾಕರ ದೇಸಾಯಿಯವರು (ಮದುವೆಗೆ ಮುಂಚಿನ ಹೆಸರು ಸರಸ್ವತಿ ರಾಯಸಂ) ಹುಟ್ಟಿದ್ದು ಈಗಿನ ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಲ್ಲಿ ಮಾರ್ಚ್ ೯ರ ೧೯೪೧ರಲ್ಲಿ. ತಂದೆ ರಾಘವೇಂದ್ರ ರಾಯಸಂ, ತಾಯಿ ಸರಸ್ವತಿ, ಪ್ರಾರಂಭಿಕ ಶಿಕ್ಷಣ ಹರಪನಹಳ್ಳಿಯಲ್ಲಿ. ಕಾಲೇಜು ಓದಲು ಹೈದರಾಬಾದಿನ ಆರ್.ಬಿ.ವಿ.ಆರ್.ಆರ್.ರೆಡ್ಡಿಯವರ ಕಾಲೇಜು ಸೇರಿದರೂ ಕಾರಣಾಂತರದಿಂದ ಸೇರಿದ್ದು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟರ್ಮೀಡಿಯೇಟ್ಗೆ. ವೈದ್ಯೆಯಾಗಬೇಕೆಂಬ ಹಂಬಲದಿಂದ ವಿಜ್ಞಾನದ ವಿಷಯಗಳನ್ನು ಆಯ್ಕೆ ಮಾಡಿಕೊಂಡರೂ ಇಲ್ಲೂ ವಿದ್ಯೆ ಕೈಗೂಡದೆ ವಾಪಸ್ಸಾದುದು ಹರಪನ ಹಳ್ಳಿಗೆ, ಮನೆಯಲ್ಲಿ ಕುಳಿತು ಕಲಿತದ್ದು ಹಿಂದಿ-ರಾಷ್ಟ್ರಭಾಷಾ ವಿಶಾರದ. ಪರೀಕ್ಷೆಯಲ್ಲಿ ಬಿ ಗ್ರೇಡ್ ಪಡೆದು ಉತ್ತೀರ್ಣರಾದರು ಪುನಃ ವಿದ್ಯಕಲಿಯಲು ಕಾಲಕೂಡಿಬಂದುದು ಮದುವೆಯ ನಂತರವೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ೧೯೭೧ರಲ್ಲಿ ಬಿ.ಎ. ಮತ್ತು ೧೯೭೪ರಲ್ಲಿ ಪಡೆದ ಎಲ್.ಎಲ್.ಬಿ. ಪದವಿಗಳು. ಸಮಾಜಸೇವಕ, ವಕೀಲ, ರಾಜಕಾರಣಿ ಗಂಡನೊಡನೆ ವಕೀಲಿ ವೃತ್ತಿ ಪ್ರಾರಂಭ. ಸರಕಾರಿ, ಅರೆಸರಕಾರಿ ಕಚೇರಿಗಳು, ರೈಲ್ವೆ ಕೆನರಾಬ್ಯಾಂಕ್, ಗುಲಬರ್ಗ ವಿಶ್ವವಿದ್ಯಾಲಯ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ಬ್ಯಾಂಕ್ ಆಫ್ ಮೈಸೂರು, ಕರ್ನಾಟಕ ಮಿಲ್ಕ್ಫೆಡರೇಷನ್, ಸಿಂಡೀಕೇಟ್ ಬ್ಯಾಂಕ್ ಮುಂತಾದವುಗಳ ಕಾನೂನು ಸಲಹೆಗಾರರಾಗಿಯೂ ಕಾರ್ಯ ನಿರ್ವಹಣೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಬೆಳೆದ ಒಲವು. ಹರಪನಹಳ್ಳಿಯಲ್ಲಿದ್ದಾಗ ಪ್ರತಿದಿನ ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತದ ಕಥೆಗಳು, ಪುರಾಣದ ಸಂಗತಿಗಳನ್ನು ರೋಚಕವಾಗಿ ವಿವರಿಸುತ್ತಿದ್ದಾಗ ಸರಿತಾ ರವರ ಮನಸ್ಸಿನಲ್ಲಿಯೂ ಕಥೆಗಾರ್ತಿಯೊಬ್ಬಳು ರೂಪ ತಳೆಯತೊಡಗಿದ್ದಳು. ಇದಕ್ಕೆ ನೀರೆರೆದು ಪೋಷಿಸಿದವರು. ಅಣ್ಣನಂತದ್ದ ಬೀಚಿಯವರು. ಜೀವವನಾನುಭವ, ಸಾಹಿತ್ಯದ ಅನುಭವ ಪಡೆಯಲು ಸತತವಾಗಿ ಓದಿದ್ದು ಕಾರಂತರು, ಗೋಕಾಕರು, ತರಾ.ಸು ಅ.ನ.ಕೃ. ಮುಂತಾದವರುಗಳ ಕಾದಂಬರಿಗಳು. ಹೈದರಾಬಾದಿನ ಡಿ.ಕೆ. ಭೀಮಸೇನರಾಯರ ಮನೆಯಲ್ಲಿ ಬಾಡಿಗೆಗಿದ್ದ ಅಕ್ಕಭಾವರೊಡನೆ ಇದ್ದಾಗ, ಅನೇಕ ಸಾಹಿತಿಗಳು ಭೀಮಸೇನರಾಯರನ್ನು ಕಾಣಲು ಬರುತ್ತಿದ್ದುದರಿಂದ ಇವರಿಗೂ ಆದ ಸಾಹಿತ್ಯದ ಲಾಭ, ಬರೆದದ್ದು ಅನೇಕ ಕಥೆಗಳು. ಹಿರಿಯ ಸಾಹಿತಿಗಳು ಕೊಟ್ಟ ಸಲಹೆ, ಬರೆದ ಕಥೆಗಳು ಸುಧಾ, ಮಯೂರ, ಕಸ್ತೂರಿ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿತ. ‘ಕಾಶಿಯಲ್ಲಿ ಕಂಡದ್ದೇನು’ ಕಥಾ ಸಂಕಲನಕ್ಕೆ ಬೀಚಿಯವರು ಮುನ್ನುಡಿ ಬರೆದು ಹಾರೈಸಿದರೆ, ‘ನಾನುಲಕ್ಕಿ’ (ಕಥಾಸಂಕಲನ) ಹಾಗೂ ‘ಸ್ಪಂದನ’ (ವೈಚಾರಿಕ ಬರಹಗಳ ಸಂಕಲನ) ಕ್ಕೆ ಎಲ್.ಎಸ್. ಶೇಷಗಿರಿರಾಯರು ಮುನ್ನುಡಿ ಬರೆದು ಶುಭ ಕೋರಿದರು. ಹರಪನ ಹಳ್ಳಿಯ ಟೆಂಟ್ ಸಿನಿಮಾದಿಂದ ಪ್ರಭಾವಿತರಾಗಿ ಕಲಿತದ್ದು ನೃತ್ಯ-ಭರತನಾಟ್ಯ, ಸಂಗೀತ, ಹೀಗೆ ಲಲಿತಕಲೆಗಳಲ್ಲಿಯೂ ಗಳಿಸಿದ ಪ್ರಾವೀಣ್ಯತೆ, ದೂರದರ್ಶನದ ಧಾರವಾಹಿಗಳಾದ ‘ಮನೆತನ’, ‘ಋಣಾನುಬಂಧ’ ಮತ್ತು ‘ಒಲವು-ಚೆಲುವು’ ಧಾರವಾಹಿಯಲ್ಲಿ ದಂಪತಿಗಳಿಬ್ಬರೂ ಅಭಿನಯಿಸಿ ಎಲ್ಲರ ಮೆಚ್ಚುಗೆ ಪಡೆದರು. ಸಾಹಿತ್ಯದಲ್ಲಿ ಅಭಿರುಚಿ ಇದ್ದಂತೆ ಕಲಾವಿದರು, ರಾಜಕಾರಣಿಗಳು ಇವರ ಆತಿಥ್ಯಪಡೆವರು ಬಹುಮಂದಿ ಜಾರ್ಜ್ಫರ್ನಂಡಿಸ್, ಮಧುಲಿಮಯೆ, ಮಧುದಂಡವತೆ, ಪ್ರಮೀಳಾ ದಂಡವತೆ, ರಾಜನಾರಾಯಣ್, ಜೆ.ಎಚ್. ಪಟೇಲ್, ರಾಮನಾಥಗೋಯಂಕ, ಖಾದ್ರಿ ಶಾಮಣ್ಣ ಮುಂತಾದವರುಗಳೆಲ್ಲರೂ ಈ ದಂಪತಿಗಳಿಂದ ಆತಿಥ್ಯಪಡೆದವರೇ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿದ್ದ ಸರಿತಾರವರು ಕನ್ನಡ ಕಾನೂನು ಪದ ಕೋಶ ರಚನಾ ಸಮಿತಿ, ಭಾರತೀಯ ಗೆಜೆಟಿಯರ್ ಕನ್ನಡ ಆವೃತ್ತಿ ಸಮಿತಿ, ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಸಮಿತಿ ಕನಾಟಕ ಸಾಹಿತ್ಯ ಅಕಾಡಮಿ (೧೯೮೦-೮೨) ಮುಂತಾದವುಗಳ ಸದಸ್ಯೆಯಾಗಿ ರಚನಾತ್ಮಕ ಕಾರ್ಯಗಳಲ್ಲಿ ಭಾಗಿ. ಇಂಗ್ಲಿಷ್, ಹಿಂದಿ, ಮರಾಠಿ, ತೆಲುಗು, ತಮಿಳು, ಕನ್ನಡ ಭಾಷೆಗಳ ಮೇಲೆ ಪಡೆದ ಪ್ರಭುತ್ವದಿಂದ ರಚಿಸಿದ ಕೃತಿಗಳು ಹಲವಾರು ಕಾಶಿಯಲ್ಲಿ ಕಂಡದ್ದೇನು ನಾನುಲಕ್ಕಿ, ದ್ರುವಮಿಲನ, ಮಿಡಿಗಾದ ಮಿಡುಕು ಮುಂತಾದ ಕಥಾ ಸಂಕಲನಗಳು, ಸ್ಪಂದನ-ವೈಚಾರಿಕ ಲೇಖನಗಳ ಸಂಕಲನ; ಹೀಗಿದ್ದರು ಬೀಚಿ-ಸಂಪಾದಿತ ಕೃತಿ ನಂತರ ಇದರ ವಿಸ್ತೃತ ಆವೃತ್ತಿ ‘ಇವರೇನಮ್ಮಬೀಚಿ’ ಕೃತಿಯು ೨೦೦೪ರಲ್ಲಿ ಪ್ರಕಟಿಸಿದ್ದಾರೆ. ಮಹಡಿ ಮನೆ-ಹಿಂದಿ ಸಾಹಿತಿ ಭಗವತಿ ಚರಣ ವರ್ಮ ಮತ್ತು ಮರಾಠಿ ಸಾಹಿತಿ ಶಂಕರರಾವ್ ಖರತ್ ಅವರ ಸಣ್ಣ ಕಥೆಗಳ ಅನುವಾದ; ನೆಲಕಡಲು-ಶ್ರೀಮತಿ ಮನ್ನೂ ಭಂಡಾರಿಯವರ ಜನಪ್ರಿಯ ಕಿರು ಕಾದಂಬರಿ ಮುಂತಾದ ಅನುವಾದಿತ ಕೃತಿಗಳು; ‘ಭೀಮೇಶ ಕೃಷ್ಣ’ – ಹರಿದಾಸ ಸಾಹಿತಿ ಹರಪನ ಹಳ್ಳಿ ಭೀಮಪ್ಪನವರ ಜೀವನ ಹಾಗೂ ಕೃತಿಪರಿಚಯ; ಹರಪನಹಳ್ಳಿ ಭೀಮಪ್ಪನವರ ಹಾಡುಗಳು; ಒಂದು ಅಧ್ಯಯನ-ಎಲ್ಲ ಹಾಡುಗಳ ವಿಶ್ಲೇಷಣಾತ್ಮಕ ಬರಹ; ‘ನಮ್ಮನ್ನು ಸಾಕಿದ ಪ್ರಾಣಿಗಳು’ – ಪ್ರಾಣಿ ದಯೆಯ ಬಗ್ಗೆ ಬರೆದ ವಿಶಿಷ್ಟ ಕೃತಿ-ಮುಂತಾದವುಗಳಿಲ್ಲದೆ ಕಾನೂನು ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಲೇಖನಗಳು. ಪ್ರಬಂಧಗಳು, ‘ಮಹಿಳಾ ಸಮಸ್ಯೆ, ಬಾಲ್ಯವಿವಾಹ ಕುರಿತ ಕಿರುನಾಟಕಗಳು, ದೂರದರ್ಶನಕ್ಕಾಗಿ ‘ಕಥೆಗಳಲ್ಲಿ ಕಾನೂನು’ ಮುಂತಾದ ಧಾರವಾಹಿಗಳು ಪ್ರಸಾರಗೊಂಡಿವೆ. ಭೀಮೇಶ ಕೃಷ್ಣ ಸಂಗೀತರೂಪಕಕ್ಕೆ ಅಖಿಲಭಾರತ ಆಕಾಶವಾಣಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ‘ಉತ್ತಮಲೇಖಕಿ’ ಕನ್ನಡ ಲೇಖಕಿಯರ ಪರಿಷತ್ತಿನಿಂದ ‘ವರ್ಷದ ಲೇಖಕಿ’ ಮುಂತಾದ ಪ್ರಶಸ್ತಿಗಳು ದೊರೆತಿವೆ. ಹಿತ್ಯೇಷಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಸಹನಾ’ (೨೦೦೬) ವಿದ್ಯೆ ಕಲಿಯಲು ಹಲವಾರು ಬಾರಿ ಅಡೆತಡೆಗಳುಂಟಾಗಿದ್ದರೂ ಛಲಬಿಡದೆ ಸಾಧಿಸಿದ್ದಲ್ಲದೆ, ವಿದ್ಯೆಗಾಗಿ ಹಳ್ಳಿಯಿಂದ ಗುಲಬರ್ಗ ಷಹರಕ್ಕೆ ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪೋಷಕರಾಗಿ, ಅಬಲೆಯರಿಗೆ ಆತ್ಮೀಯರಾಗಿ, ಕಾನೂನು ತಿಳುವಳಿಕೆ ನೀಡುವ ಕಾರ್ಯಕರ್ತೆಯಾಗಿ, ನೊಂದ ಹೃದಯಗಳಿಗೆ ಸಾಂತ್ವನ ಹೇಳುವ ಮಾತೆಯಾಗಿ, ಸದಾ ಹೋರಾಟದ ಬದುಕನ್ನೇ ಪ್ರೀತಿಸುತ್ತಿದ್ದ ಸರಿತಾ ಕುಸುಮಾಕರದೇಸಾಯಿಯವರು ಸಾಮಾಜಿಕ, ಸಾಂಸ್ಕೃತಿಕ ಜಗತ್ತಿನಿಂದ ದೂರವಾದದ್ದು ೨೦೦೮ರ ಏಪ್ರಿಲ್ ೧೩ರಂದು.

