
- This event has passed.
ಸಿದ್ಧರಾಮ ಜಂಬಲದಿನ್ನಿ
September 20
೨೦.೦೯.೧೯೧೮ ೩೧.೧೨.೧೯೮೮ ಹಿಂದೂಸ್ತಾನಿ ಸಂಗೀತದ ಮಹಾನ್ ಗಾಯಕರೆನಿಸಿದ್ದ ಸಿದ್ಧರಾಮ ಜಂಬಲದಿನ್ನಿಯವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಜಂಬಲದಿನ್ನಿ. ತಂದೆ ಚನ್ನಬಸವಪ್ಪ, ತಾಯಿ ಅವ್ವಮ್ಮ, ಕಲಾವಿದರ ಮನೆತನ. ನಿಜಗುಣೆಪ್ಪನವರಿಂದ ಎರಡು ವರ್ಷ ಸಂಗೀತ ಪಾಠ. ಪಂಚಾಕ್ಷರಿ ಗವಾಯಿಗಳು ಶಿಷ್ಯನಾಗಿ ಸ್ವೀಕರಿಸಿ ಸೇರಿಸಿದ್ದು ಕೋಟೆಕಲ್ಶಾಲೆ. ಹಾಡುಗಾರಿಕೆಯ ಜೊತೆಗೆ ತಬಲ, ಹಾರ್ಮೋನಿಯಂ ಕಲಿಕೆ, ಸಂಚಾರಿ ಸಂಗೀತ ಶಾಲೆಯ ಗದಿಗೆಪ್ಪನವರೊಡನೆ ಬಿಜಾಪುರ, ಧಾರವಾಡ, ದಾವಣಗೆರೆ ಸುತ್ತಿ ಗಳಿಸಿದ ಅಪಾರ ಸಂಗೀತದ ಅನುಭವ. ಗೊಬ್ಬೂರು ಶರಣಯ್ಯನವರ ನಾಟಕ ಕಂಪನಿಯಲ್ಲಿ ಗಾಯಕ, ನಟರಾಗಿ ಹೇಮರೆಡ್ಡಿ ಮಲ್ಲಮ್ಮ ನಾಟಕದ ಮಲ್ಲಿಕಾರ್ಜುನಪಾತ್ರದಿಂದ ಗಳಿಸಿದ ಖ್ಯಾತಿ, ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯ ಸಂಘದ ವಧು-ವರ ನಾಟಕಕ್ಕೆ ಸಂಗೀತ ಸಂಯೋಜನೆ. ಮಲ್ಲಿಕಾರ್ಜುನ ಮನಸೂರರೊಂದಿಗೆ ಭಾರತಾದ್ಯಂತ ನೀಡಿದ ಸಂಗೀತ ಕಾರ್ಯಕ್ರಮ. ಆಕಾಶವಾಣಿಯ ರಾಷ್ಟ್ರೀಯ ಜಾಲದಲ್ಲಿ ಗುರು ಶಿಷ್ಯ ಪರಂಪರೆಯ ಗಾಯನ, ವಚನ ಗಾಯನಕ್ಕೆ ನೀಡಿದ ಹೊಸ ಆಯಾಮ. ಜೊತೆಗೆ ರಗಳೆ, ಭಾವಗೀತೆ, ಸುಪ್ರಭಾತ, ದಾಸರ ಪದಗಳು ಇವರ ಸಿರಿಕಂಠದಿಂದ ಹರಿದು ಬಂದವು. ಎಚ್.ಎಂ.ವಿ. ಕಂಪನಿಯಿಂದ ಧ್ವನಿಮುದ್ರಿಕೆ. ಮಲ್ಲಿಕಾರ್ಜುನ ಮನಸೂರರೊಂದಿಗೆ ಮೃತ್ಯುಂಜಯ ಸುಪ್ರಭಾತವಲ್ಲದೆ “ನುಡಿಯು ಕನ್ನಡ, ನಡೆಯು ಕನ್ನಡ, ಅಳಿಸಂಕುಳವೇ ಮಾಮರವೇ, ಬಾ ಬಸವರಾಜ” ಮುಂತಾದ ಹಾಡುಗಳಿಗೆ ನೀಡಿದ ದನಿ. ಹೈದರಾಬಾದ್ ವೀರಶೈವ ಸಭಾದಿಂದ ಸಂಗೀತ ಸುಧಾಕರ, ಕರ್ನಾಟಕ ಸಾಹಿತ್ಯ ಆಕಾಡೆಮಿಯ ಗಮಕಕಲಾನಿಧಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಕರ್ನಾಟಕ ಕಲಾತಿಲಕ, ರಾಯಚೂರಿನ ಕಲಾಮಂದಿರಕ್ಕೆ ‘ಸಿದ್ಧರಾಮ ಜಂಬಲದಿನ್ನಿ ಕಲಾಮಂದಿರ’ ವೆಂಬ ಹೆಸರು ಮುಂದಾದ ಗೌರವಗಳು. ಇದೇ ದಿನ ಹುಟ್ಟಿದ ಕಲಾವಿದರು ಕು.ರಾ. ಸೀತಾರಾಮಶಾಸ್ತ್ರಿ – ೧೯೨೦ ಷಣ್ಮುಖಪ್ಪ ಕಾಶಪ್ಪ ಯರಕದ – ೧೯೪೦ ಬಿ.ವಿ. ಪಾಂಡುರಂಗರಾವ್ – ೧೯೪೪ ಕಡಬ ಶ್ರೀನಿವಾಸ್ – ೧೯೬೧
* * *