
- This event has passed.
ಸಿ.ಎಚ್. ಲೋಕನಾಥ್
August 14
೧೪.೦೮.೧೯೨೭ ಶಿಸ್ತುಬದ್ಧ ಜೀವನದ, ರಂಗಭೂಮಿ, ಚಲನಚಿತ್ರದ ಮೇರು ನಟರಾದ ಲೋಕನಾಥ್ರು ಹುಟ್ಟಿದ್ದು ಬೆಂಗಳೂರು. ತಂದೆ ಹನುಮಂತಪ್ಪ, ತಾಯಿ ಗೌರಮ್ಮ. ಓದಿದ್ದು ಎಂಜಿನಿಯರಿಂಗ್. ವಾಣಿಜ್ಯ ವಹಿವಾಟಿನ ಕುಟುಂಬ. ೧೪ ರ ವಯಸ್ಸಿನಿಂದಲೇ ಜವಳಿ ಖರೀದಿಸಲು ಬೆಂಗಳೂರು – ಅಮೃತಸರ, ಬನಾರಸ್ ಮಧ್ಯೆ ಓಡಾಟ. ವ್ಯಾಯಾಮ ಕಲಿಯಲು ಕೆ.ವಿ. ಅಯ್ಯರ್ ಸಂಪರ್ಕಕ್ಕೆ ಬಂದು, ಇವರ ಗಂಡು ಧ್ವನಿಗೆ ಬೆರಗಾದ ಅಯ್ಯರ್ರಿಂದ ನಾಟಕದಲ್ಲಿ ಅಭಿನಯಿಸಲು ಪ್ರಚೋದನೆ. ೧೯೫೨ ರಲ್ಲಿ ರವಿ ಕಲಾವಿದರು ಸಂಸ್ಥೆ ಸೇರಿ ಅಭಿನಯಿಸಿದ ಮೊದಲ ನಾಟಕ ಬಂಡವಾಳವಿಲ್ಲದ ಬಡಾಯಿ, ಒಲ್ಲೆನೆಂದರೂ ಬಿಡದೆ ಮತ್ತೊಮ್ಮೆ ಬಣ್ಣ ಹಚ್ಚಿದ್ದು ದಾಶರಥಿ ದೀಕ್ಷಿತರ ಅಳಿಯ ದೇವರು ನಾಟಕ. ಸಂಪ್ರದಾಯಸ್ಥ ಕುಟುಂಬದ ವಿರೋಧದ ನಡುವೆ ರಂಗಭೂಮಿ ಪ್ರವೇಶ. ರವಿಕಲಾವಿದರು ಸಂಸ್ಥೆಯಲ್ಲಿ ರಕ್ತಾಕ್ಷಿ, ವಿಗಡವಿಕ್ರಮರಾಯ, ಬಿರುದಂತೆಂಬರ ಗಂಡ, ಬಹದ್ದೂರ್ ಗಂಡು, ಬಿಡುಗಡೆ, ಚಂದ್ರಹಾಸ, ಮನವೆಂಬ ಮರ್ಕಟ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿ ಪಡೆದ ಖ್ಯಾತಿ. ಮರಾಠಿ ನಾಟಕಗಳ ಅನುವಾದ ತನುವು ನಿನ್ನದೆ ಮನವು ನಿನ್ನದೆ, (೧೨೫ ಪ್ರದರ್ಶನ ಕಂಡ ನಾಟಕ), ನಾನೇನು ಹೇಳಬೇಕು, ಹಂಚುಬೆಳದಿಂಗಳ ನಿರ್ದೇಶನದ ಹೊಣೆ. ಬಿ.ವಿ. ಕಾರಂತರ ನಿರ್ದೇಶನದ ಗೋಸ್ಟ್, ಈಡಿಪಸ್, ನಾಗೇಶರ ನಿರ್ದೇಶನದ ನಾಟಕಗಳು, ಸಮುದಾಯದ ಪ್ರಸನ್ನರ ತಾಯಿ, ಗೆಲಿಲಿಯೋ ಮತ್ತಷ್ಟು ಖ್ಯಾತಿ ತಂದುಕೊಟ್ಟ ನಾಟಕಗಳು. ಕಾಲೇಜಿನ ಪಠ್ಯ ಪುಸ್ತಕವಾದ ಗೆಲಿಲಿಯೋ ನಾಟಕವನ್ನು ಪ್ರಪ್ರಥಮವಾಗಿ ನೋಡೋ ಟೆಕ್ಸ್ಟ್ ಆಗಿ ಪರಿವರ್ತಿಸಿ ವಿದ್ಯಾರ್ಥಿಗಳಿಗಾಗಿ ರಾಜ್ಯಾದ್ಯಂತ ಪ್ರದರ್ಶಿಸಿದ ನಾಟಕ. ಸಂಸ್ಕಾರದ ಮೂಲಕ ಚಿತ್ರರಂಗ ಪ್ರವೇಶಿಸಿ ಗೆಜ್ಜೆ ಪೂಜೆ, ಬಂಗಾರದ ಮನುಷ್ಯ, ದೂರದ ಬೆಟ್ಟ, ಭೂತಯ್ಯನ ಮಗ ಅಯ್ಯ, ಶರಪಂಜರ, ನಾಗರಹಾವು, ಬಂಗಾರದ ಪಂಜರ ಮಿಂಚಿನ ಓಟ, ಹೊಸ ನೀರು ಹೀಗೆ ಪಟ್ಟಿ ೫೭೦ ಕ್ಕೂ ಹೆಚ್ಚು ಬೆಳೆಯುತ್ತದೆ. ಆರ್ಯಭಟ ಪ್ರಶಸ್ತಿ, ಉತ್ತಮ ಪೋಷಕ ನಟ, ನಾಟಕ ಅಕಾಡಮಿ ಪ್ರಶಸ್ತಿ, ಸಂಘಸಂಸ್ಥೆಗಳಿಂದ ಸನ್ಮಾನ. ಅಭಿನಯಿಸಿದ ಚಿತ್ರದಂತೆ ಈ ಪ್ರಶಸ್ತಿ ಪಟ್ಟಿಯೂ ದೊಡ್ಡದೆ. ಇದೇ ದಿನ ಹುಟ್ಟಿದ ಕಲಾವಿದರು ಮಹೇಂದ್ರ ಕಿಶೋರ್ – ೧೯೩೨ ಗೀತಾ ರಮಾನಂದ್ – ೧೯೫೧ ವರಲಕ್ಷ್ಮೀ – ೧೯೫೩
* * *