೧೬.೦೧.೧೯೪೬ ಸೂತ್ರಧಾರ ನಾಟಕ ತಂಡದ ಸಂಸ್ಥಾಪಕ ಸದಸ್ಯರಾದ ರಾಮಯ್ಯನವರು ಹುಟ್ಟಿದ್ದು. ಕನಕಪುರದ ತಾಲ್ಲೂಕಿನ ದೊಡ್ಡ ಆಲನಹಳ್ಳಿ. ತಂದೆ ವೆಂಕಟೇಶಯ್ಯ, ತಾಯಿ ಮಂಗಳಮ್ಮ. ಓದಿದ್ದು ಬಿ.ಎಸ್ಸಿ., ಎಲ್.ಎಲ್.ಬಿ. ಉದ್ಯೋಗಕ್ಕೆ ಸೇರಿದ್ದು ವಿಮಾ ಇಲಾಖೆ. ೨೯ ವರ್ಷದ ಸರಕಾರಿ ಸೇವೆಯ ನಂತರ ಸ್ವಯಂ ನಿವೃತ್ತಿ ಪಡೆದು ಈಗ ವಕೀಲಿ ವೃತ್ತಿ. ಹವ್ಯಾಸಕ್ಕಾಗಿ ಆಯ್ದುಕೊಂಡದ್ದು ರಂಗಭೂಮಿ. ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ. ೧೯೬೭ರಲ್ಲಿ ಎಂ.ಇ.ಎಸ್. ಕಾಲೇಜಿನ ‘ಸಂಧ್ಯಾಕಾಲ’ ನಾಟಕದ ಮೂಲಕ ಹವ್ಯಾಸಿ ರಂಗಭೂಮಿಗೆ ಪಾದಾರ್ಪಣ. ವಿಮಾ ಇಲಾಖೆಗೆ ಸೇರಿದ ನಂತರ ಸಚಿವಾಲಯ ಕ್ಲಬ್ ಮುಖಾಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ನಾಟಕದಲ್ಲಿ ಭಾಗಿ, ಆರ್. ನಾಗೇಶ್ ರವರಿಂದ ಗುರುತಿಸಲ್ಪಟ್ಟು ಈಡಿಪಸ್, ಚೋಮ, ಆ ಸ್ಫೋಟ, ಕಫನ್, ಕಾಮಗಾರಿ, ದೊಡ್ಡಪ್ಪ, ರಣಹದ್ದು, ಕತ್ತಲೆ ಬೆಳಕು, ಹುತ್ತದಲ್ಲಿ ಹುತ್ತ, ಜೈಸಿದ ನಾಯಕ, ತೆರೆಗಳು, ಸೀತಾಪಹರಣ, ಮುಂತಾದ ನಾಟಕಗಳಲ್ಲಿ ಪಾತ್ರಧಾರಿ. ಸೂತ್ರಧಾರ ನಾಟಕ ತಂಡವನ್ನು ಕಟ್ಟಿದ್ದಲ್ಲದೆ ಸೂತ್ರಧಾರ ವಾರ ಪತ್ರಿಕೆಯ ಸಂಪಾದಕರಾಗಿ ೧೯೮೬ ರಿಂದ ೧೯೯೩ ರವರೆಗೆ ರಂಗ ಚಟುವಟಿಕೆಗಳನ್ನು ಪ್ರತಿಬಿಂಬಿಸಿದ ಖ್ಯಾತಿ. ರಂಗಭೂಮಿ ಏಳುಬೀಳುಗಳು, ಕನ್ನಡದಲ್ಲಿ ಹಾಸ್ಯ ನಾಟಕಗಳು, ನೇಪಥ್ಯ ಸಂಚಿಕೆ, ರಂಗಶಿಕ್ಷಣ ಮುಂತಾದ ಹಲವಾರು ವಿಶೇಷ ಸಂಚಿಕೆಗಳ ಪ್ರಕಟಣೆ. ಆಕಾಶವಾಣಿ, ದೂರದರ್ಶನ ನಾಟಕಗಳಲ್ಲೂ ಭಾಗಿ. ವಾರ್ತಾ ಮತ್ತು ಪ್ರಚಾರ ಇಲಾಖೆ ನಡೆಸಿದ ಸುಮಾರು ೩೦೦ ನಾಟಕಗಳಲ್ಲಿ ಭಾಗಿ. ಕಲಾಕ್ಷೇತ್ರದ ಮೆಟ್ಟಿಲು ಮಹಿಮೆ ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿದ್ದು ಇದೀಗ ೩ನೇ ಸಂಪುಟಕ್ಕೆ ಸಿದ್ಧತೆ. ವಕೀಲರಾಗಿರುವುದಷ್ಟೇ ಅಲ್ಲದೆ ‘ನ್ಯಾಯಾಂಗ ರಂಗ’ ನಾಟಕ ತಂಡದ ಸ್ಥಾಪನೆಗೆ ಸಿದ್ಧತೆ. ಪನ್ ಮಾಡುವ ಹವ್ಯಾಸದಿಂದ ಪನ್ನು ಸ್ವಾಮಿ, ಪನ್ನೇಶ್ವರ ರಾಮ, ಪನ್ಜುರ್ಲಿ ಎಂಬ ಹೆಸರುಗಳೂ ಇವರ ಹೆಸರಿನೊಂದಿಗೆ ಅಂಬಿಕೊಂಡಿವೆ. ಕರ್ನಾಟಕ ನಾಟಕ ಅಕಾಡಮಿಯಿಂದ ೨೦೦೦ದ ವಾರ್ಷಿಕ ಪ್ರಶಸ್ತಿ ಪುರಸ್ಕೃತರು. ಇದೇ ದಿನ ಹುಟ್ಟಿದ ಕಲಾವಿದರು : ಬಸವ ಪ್ರಭು ನಿಂಗಪ್ಪ ಈಟಿ – ೧೯೨೪ ಪುಷ್ಪಲತಾ ಚಂದ್ರಹಾಸ – ೧೯೬೩
* * *