Loading Events

« All Events

ಎಂ.ಎಸ್.ಕೆ. ಪ್ರಭು

July 15

೧೫..೧೯೩೮ ೨೫..೨೦೦೦ ಗ್ರೀಕ್‌ ನಾಟಕಗಳಿಂದ ಭಾರತದ ಜಾನಪದ ಸಾಹಿತ್ಯದವರೆಗೆ, ವಿಜ್ಞಾನ ಲೇಖನಗಳಿಂದ ಉಪನಿಷತ್ತಿನವರೆಗೆ, ಅಸಂಗತ ನಾಟಕಗಳಿಂದ ನವೋದಯ ಕಾವ್ಯದವರೆಗೆ ಬಹುವಿಸ್ತಾರವಾದ ವ್ಯಾಸಂಗದಿಂದ ಬಹುಶ್ರುತರೆನಿಸಿದ್ದ ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು (ಎಂ.ಎಸ್‌.ಕೆ.ಪ್ರಭು)ರವರು ಹುಟ್ಟಿದ್ದು ೧೯೩೮ರ ಜುಲೈ ೧೫ರಂದು ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಮಂದಗೆರೆ ಎಂಬ ಗ್ರಾಮದಲ್ಲಿ. ತಂದೆ ಸೀತಾರಾಮಯ್ಯ, ತಾಯಿ ಸೀತಮ್ಮ. ಪ್ರಾಥಮಿಕ ಶಿಕ್ಷಣ ಮಂದಗೆರೆ ಹಾಗೂ ಹೊಳೆನರಸೀಪುರಗಳಲ್ಲಿ. ಪ್ರೌಢಶಿಕ್ಷಣ, ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಮೊದಲ ದರ್ಜೆಯಲ್ಲಿ ಎಂ.ಎ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಬೆಂಗಳೂರಿನ ಅಕೌಂಟೆಂಟ್‌ ಜನರಲ್‌ರವರ ಕಚೇರಿಯಲ್ಲಿ (೧೯೬೧-೭೭). ನಂತರ ಯು.ಪಿ.ಎಸ್‌.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಕಾಶವಾಣಿಯಲ್ಲಿ ಪ್ರೋಗ್ರಾಂ ಎಕ್ಸಿಕ್ಯುಟಿವ್‌ ಆಗಿ ಆಯ್ಕೆಯಾಗಿ ಭದ್ರಾವತಿ, ಧಾರವಾಡ, ಬೆಂಗಳೂರು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ ೧೯೯೬ರಲ್ಲಿ ನಿವೃತ್ತಿ. ಸಾಹಿತ್ಯ ಪ್ರೀತಿ ಇವರಿಗೆ ಬಂದುದು ತಂದೆ, ತಾತ, ಮುತ್ತಾತಂದಿರಿಂದ. ತಾತನವರು ಸ್ವತಃ ಹಾಡುಗಳನ್ನೂ ರಚಿಸುತ್ತಿದ್ದರು. ತಂದೆಯವರು ಕುಮಾರವ್ಯಾಸಭಾರತದ ಪದ್ಯಗಳನ್ನೂ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಪ್ರಭುವಿಗೂ ಇದೇ ಪ್ರವೃತ್ತಿ ಹರಿದುಬಂದು ಚಿಕ್ಕಂದಿನಿಂದಲೂ ಹರಿಕಥೆ, ನಾಟಕಗಳಲ್ಲಿ ಆಸಕ್ತಿ ಬೆಳೆದು ಹಳ್ಳಿಯಲ್ಲಿ ಇಡೀ ರಾತ್ರಿ ನಡೆಯುತ್ತಿದ್ದ ನಾಟಕವನ್ನೂ ನೋಡಿದ ನಂತರ ಅದರ ತದ್ವತ್‌ ನಟಿಸಿ ತೋರಿಸುವ ಅಭಿನಯ ಚತುರತೆಯ ಜೊತೆಗೆ ಜ್ಞಾಪಕಶಕ್ತಿಯೂ ಅಗಾಧವಾಗಿತ್ತು. ಪ್ರಸಿದ್ಧ ಕಾದಂಬರಿಕಾರರಾದ ಎಸ್‌.ಎಲ್‌. ಭೈರಪ್ಪನವರು ಕರ್ನಾಟಕದಿಂದ ಹೊರಗಿರುವಾಗ ಇವರಿಗೂ ಕರ್ನಾಟಕಕ್ಕೂ ಬೌದ್ಧಿಕ ಕೊಂಡಿಯಾಗಿದ್ದವರು ಎಂ..ಎಸ್‌.ಕೆ.ಪ್ರಭುರವರು, ಭೈರಪ್ಪನವರ ಬರಹಗಳ ಮೊದಲ ಓದುಗರಾಗಿದ್ದರು. ಕರ್ನಾಟಕದಲ್ಲಿ ನಡೆಯುತ್ತಿದ್ದ ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳನ್ನು ಭೈರಪ್ಪನವರಿಗೆ ತಿಳಿಸುತ್ತಿದ್ದರು. “ಗುಜರಾತು ಮತ್ತು ದಿಲ್ಲಿಯಲ್ಲಿದ್ದಾಗ ಕನ್ನಡ ಸಾಹಿತ್ಯವನ್ನು ಚರ್ಚಿಸಲು ನನಗೆ ಬೇರೆ ಯಾರೂ ಇರಲಿಲ್ಲ. ಕರ್ನಾಟಕಕ್ಕೆ ಬರುವುದೆಂದರೆ ಪ್ರಭುವಿನೊಡನೆ ಚರ್ಚಿಸುವುದು, ಕೆಲ ದಿನಗಳನ್ನು ಕಳೆಯುವುದು ಮುಖ್ಯ ಉದ್ದೇಶವಾಗಿರುತ್ತಿತ್ತು. ನನ್ನ ತಲೆಯಲ್ಲಿ ಮೊಳಕೆಯೊಡೆಯುತ್ತಿದ್ದ ವಸ್ತುಗಳನ್ನು ಹೇಳುವುದರಿಂದ ಹಿಡಿದು ಎಷ್ಟೋ ಸಾಹಿತ್ಯ ಸಮಸ್ಯೆಗಳನ್ನು ಅವರೊಡನೆ ಚರ್ಚಿಸುತ್ತಿದ್ದೆ. ಸ್ವತಃ ಸೃಜನಶೀಲ ಪ್ರತಿಭೆ ಇರುವ ಅವರು ನನ್ನ ಕಥೆಯ ವಸ್ತು, ಪಾತ್ರಗಳ ಅಂತರಂಗವನ್ನು ಹೊಕ್ಕು ಅರಿತು ಸಲಹೆ ಸೂಚನೆಗಳನ್ನೂ ಕೊಡುತ್ತಿದ್ದರು” ಎಂದು ಭೈರಪ್ಪನವರು ತಮ್ಮ ಆತ್ಮ ವೃತ್ತಾಂತದ ‘ಭಿತ್ತಿ’ಯಲ್ಲಿ ಬರೆದುಕೊಂಡಿದ್ದಾರೆ. ಭೈರಪ್ಪನವರೊಡನೆ ಬೌದ್ಧಿಕ ಸ್ತರದಲ್ಲಿ ಚರ್ಚಿಸುವಂತಹ ಸಮಾನ ಪ್ರತಿಭೆ ಪ್ರಭುಗಳಲ್ಲಿತ್ತೆಂದರೆ ಪ್ರಭುವಿನ ವಿದ್ವತ್‌ ಅರ್ಥವಾದೀತು. ಆಕಾಶವಾಣಿಗೆ ಸೇರಿದ ನಂತರ ನಾಟಕ ಸ್ಪರ್ಧೆಯಲ್ಲಿ ಅವರ ‘ಕುರಿತೇಟು’ ನಾಟಕವು’ ಸರ್ಟಿಫಿಕೇಟ್‌ ಆಫ್‌ ಮೆರಿಟ್‌’ ಗಳಿಸಿದ್ದರೆ ಗಿರೀಶ್‌ ಕಾರ್ನಾಡರ ‘ಮಾನಿಷಾದ’ ನಾಟಕವನ್ನೂ ಇಂಗ್ಲಿಷಿಗೆ ಅನುವಾದಿಸಿದ್ದು ಆಕಾಶವಾಣಿಯ ವಾರ್ಷಿಕ ಸ್ಪರ್ಧೆಯಲ್ಲೂ ಪ್ರವೇಶ ಪಡೆದಿತ್ತು. ಇದಲ್ಲದೆ ಹಲವಾರು ಶಬ್ದ ಚಿತ್ರಗಳನ್ನೂ ನಿರ್ಮಿಸಿದ್ದು ಅವುಗಳಲ್ಲಿ ಐನ್‌ಸ್ಟೀನ್‌ರ ‘ಸಂಸಾರಾಲಯ’ ಮತ್ತು ‘ಅವತಾರ’ ಮುಖ್ಯವಾದವುಗಳು. ಸಂಸಾರಾಲಯದಲ್ಲಿ ಕ್ವಾಂಟಮ್‌ ಫಿಸಿಕ್ಸ್‌ನ ಮೂಲತತ್ತ್ವಗಳನ್ನೂ ಆಧಾರವಾಗಿಟ್ಟುಕೊಂಡು ನಾಲ್ಕನೆಯ ಆಯಾಮದ ಬಗೆಗೆ ಪರಿಶೋಧಿಸಿದರೆ, ಅವತಾರದಲ್ಲಿ ವಿಕಾಸವಾದದ ಭಾರತೀಯ ಕಲ್ಪನೆಯನ್ನೂ ಡಾರ್ವಿನ್‌ ಸಿದ್ಧಾಂತದೊಡನೆ ತೌಲನಿಕವಾಗಿ ವಿವೇಚಿಸುವ ಅಪರೂಪದ ಶಬ್ದ ಚಿತ್ರಗಳನ್ನೂ ನಿರ್ಮಿಸಿದ್ದರು. ಆಗಾಗ್ಗೆ ಬರೆದ ಕಥೆಗಳನ್ನು ಸಂಕಲಿಸಿ ಹೊರತಂದ ಸಂಕಲನಗಳೆಂದರೆ ಬೆತ್ತಲೆ ಅರಸನ ರಾಜ ರಹಸ್ಯ (೧೯೮೧), ಮುಖಾಬಲೆ (೧೯೯೧), ವಿದೇಶಿಕತೆಗಳು (೧೯೯೭), ಮತ್ತು ಕಾಣೆಯಾದ ಟೋಪಿ. ಮೊದಲ ಕಥಾ ಸಂಕಲನದಲ್ಲಿ ಆರು ಕತೆಗಳಿದ್ದು ಅವರ ಪ್ರಾರಂಭದ ದಿನಗಳ ಕತೆಯಾಗಿದ್ದರೂ ಸಮರ್ಥಕತೆಗಳಾಗಿವೆ. ಎರಡನೆಯದರಲ್ಲಿ ಪ್ರಬುದ್ಧತೆಯಿಂದ ಕೂಡಿದ ಹೊಸಹಾದಿಯ ಆರು ಕತೆಗಳಾದರೆ ಮೂರು ಮತ್ತು ನಾಲ್ಕನೆಯದು ರಷ್ಯನ್‌,ಜರ್ಮನ್‌, ಇಟಾಲಿಯನ್‌, ಮೆಕ್ಸಿಕನ್‌, ಜಪಾನ್‌ ಭಾಷೆಗಳಿಂದ ಅನುವಾದಿಸಿದ ಕತೆಗಳ ಸಂಕಲನಗಳು. ನಾಟಕ ರಚನೆಯಲ್ಲಿ ವಿಶೇಷ ಒಲವಿದ್ದು ಬರೆದ ಮೂರು ನಾಟಕಗಳ ಸಂಕಲನ ‘ಬಕ’ (೧೯೭೭). ಮತ್ತೆರಡು ನಾಟಕಗಳಾದ ‘ತಪ್ಪಿಸಿಕೊಂಡಿದ್ದಾರೆ’ ಮತ್ತು ‘ಕಡೇಗಲ್ಲಿ ಕಡೇಮನೆ’ ಗಳು‘ಬಕ’ ಸಂಕಲನದಲ್ಲಿ ಸೇರಿವೆ. ಇವುಗಳಲ್ಲದೆ ಪ್ರಸಿದ್ಧ ನಾಟಕಕಾರ ಅಯನೆಸ್ಕೊವಿನ ‘ಲರ್ವಾಸ್‌ಮುರ್’ ನಾಟಕದ ರೂಪಾಂತರ ‘ಮಹಾಪ್ರಸ್ಥಾನ’ (೧೯೮೧) ಮತ್ತು ರೋಮ್‌ನ ದೊರೆ ಸಿಸಿರೊ ನ ಇತಿಹಾಸಕ್ಕೆ ಸಂಬಂಧಿಸಿದ ಘಟನೆಗಳ ಸುತ್ತ ರಚಿಸಿದ ನಾಟಕ ಸಿಸಿರೊ (೧೯೯೫) ಪ್ರಕಟಗೊಂಡಿವೆ. ರೋಮ್‌ನ ಚರಿತ್ರೆ ಆಧರಿಸಿ ಕನ್ನಡದಲ್ಲಿ ಬಂದಿರುವ ನಾಟಕಗಳಲ್ಲಿ ಬಹುಶಃ ಮೊದಲನೆಯದು. ಪತ್ರಿಕೆಗಳಲ್ಲಿ ಪ್ರಕಟಗೊಂಡ ಮತ್ತೆರಡು ನಾಟಕಗಳೆಂದರೆ ಮುಸ್ಸಂಜೆಯಲ್ಲಿ ನಡೆದ ಘಟನೆಯು ೧೯೭೪ ರ ಕ್ಷಿತಿಜದ ಸಂಚಿಕೆಯಲ್ಲಿ ಮತ್ತು ‘ಶಬ್ದಕ್ಕಂಜಿದೊಡೆಂತಯ್ಯ’ ನಾಟಕವು ೧೯೭೭ ರ ಕರ್ಮವೀರ ದೀಪಾವಳಿ ವಿಶೇಷಾಂಕದಲ್ಲಿಯೂ ಪ್ರಕಟಗೊಂಡಿವೆ. ಮತ್ತೆರಡು ನಾಟಕಗಳೆಂದರೆ ‘ಗುಲಾಮನ ಸ್ವಾತಂತ್ರ್ಯಯಾತ್ರೆ’ (೨೦೦೨), ಒಳ್ಳೆಯ ಸಮಯ ಮತ್ತು ಇತರ ನಾಟಕಗಳು (೨೦೦೨). ಪ್ರಥಮ ವಿಶ್ವ ಕನ್ನಡ ಸಮ್ಮೇಳನದ (೧೯೮೫) ಸಂದರ್ಭದಲ್ಲಿ ಪ್ರಕಟಗೊಂಡ ಸಾಹಿತ್ಯಮಾಲೆಯಲ್ಲಿ ಚಂದ್ರಕಾಂತ ಕುಸನೂರರು ಸಂಪಾದಿಸಿರುವ ‘ಏಕಾಂಕ ನಾಟಕಗಳು’ ಪುಸ್ತಕದಲ್ಲಿ ಇವರ ‘ಸಾರ್ವಜನಿಕ ರಸ್ತೆ ಅಲ್ಲ’ ನಾಟಕವು ಸೇರ್ಪಡೆಯಾಗಿದೆ. ಫ್ಯಾಂಟಸಿ ಕತೆಗಳು ಮತ್ತು ಪತ್ತೇದಾರಿ ಕಥೆಗಳ ಬಗ್ಗೆಯೂ ವಿಶೇಷ ಒಲವಿದ್ದು ಹಲವಾರು ಫ್ಯಾಂಟಸಿ’ ಮತ್ತು ವಿರೋಧವಿಲಾಸ (ವಕ್ರೋಕ್ತಿವಿಲಾಸ) ೧೯೯೯ ರಲ್ಲಿ ಪ್ರಕಟಿಸಿದ್ದಾರೆ. ವಿರೋಧವಿಲಾಸದಲ್ಲಿ ಹೆಸರಿಗಷ್ಟೇ ಹಾಸ್ಯಲೇಖನಗಳೆನ್ನಿಸಿದ್ದರೂ ಚಿಂತನಶೀಲ ಬರಹಗಳಾಗಿವೆ. ಇತರರೊಡನೆ ಸೇರಿ ಸಂಪಾದಿಸಿದ ಕೃತಿಗಳೆಂದರೆ ಎಲ್ಲರ ಮೂಗಿನ ಕತೆ (೧೯೯೮) ಮತ್ತು ಪತ್ತೆದಾರಿಕತೆಗಳ ಸಂಗ್ರಹ ಶೋಧ (೨೦೦೦) ಪ್ರಕಟವಾಗಿವೆ. ಮಕ್ಕಳಿಗಾಗಿ ರಚಿಸಿದ ಕೃತಿ‘ಪೋಕರಿಪಾಪಣ್ಣನ ಪರಾಕು’. ಅವರ ಬಕ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿಪ್ರಶಸ್ತಿ (೧೯೭೯) ಮತ್ತು ವರ್ಧಮಾನ ಉದಯೋನ್ಮುಖ ಪ್ರಶಸ್ತಿಯು (೧೯೮೨); ಸಿಸಿರೊ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೯೫) ಮತ್ತು ಸಮತೆಂತೋ ನಾಟಕ ರಚನಾ ಸ್ಫರ್ಧೆಯಲ್ಲಿ ಮೂರನೆಯ ಬಹುಮಾನವು, ‘ಕುರಿತೇಟು’ ನಾಟಕಕ್ಕೆ ಆಕಾಶವಾಣಿಯ ವಾರ್ಷಿಕ ಪ್ರಶಸ್ತಿಗಳು ದೊರೆತಿವೆ. ಉಚ್ಚಮಟ್ಟದ ಅವರ ಬೌದ್ಧಿಕ ಸ್ತರದ ಚಿಂತನೆ, ಬರಹಗಳಿಗೆ ಅವರಿಗೆ ಸಲ್ಲಬೇಕಿದ್ದ ಗೌರವ, ಪ್ರಶಸ್ತಿಗಳು ದೊರೆಯದಿದ್ದರೂ ಅವರೆಂದೂ ಅದರ ಬಗ್ಗೆ ತಲೆಕೆಡಿಸಿಕೊಂಡವರಲ್ಲ, ಹೆಚ್ಚು ಮಾತನಾಡದ ಸೃಜನಶೀಲ ವ್ಯಕ್ತಿತ್ವದ ಪ್ರಭುರವರು ಸಾಹಿತ್ಯಲೋಕದಿಂದ ಕಣ್ಮರೆಯಾದದ್ದು ೨೦೦೦ ದ ಜನವರಿ ೨೫ ರಂದು.

Details

Date:
July 15
Event Category: