- This event has passed.
ಎಚ್ಚೆಸ್ಕೆ
August 26, 2023
೨೬-೮-೧೯೨೦ ೨೯-೮-೨೦೦೮ ಎಚ್ಚೆಸ್ಕೆ ಎಂಬ ಮೂರಕ್ಷರದಿಂದಲೇ ಪ್ರಸಿದ್ಧರಾಗಿರುವ ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ಯರು ಹುಟ್ಟಿದ್ದು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಹಳೆಯೂರು ಗ್ರಾಮ. ತಂದೆ ಎಚ್. ಶ್ರೀನಿವಾಸ ಅಯ್ಯಂಗಾರ್, ತಾಯಿ ಅಲಮೇಲಮ್ಮ. ಪ್ರಾರಂಭಿಕ ಶಿಕ್ಷಣ ಮೈಸೂರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಕಾಂ. ಪದವಿ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. (ಅರ್ಥಶಾಸ್ತ್ರ) ಪದವಿ. ಪತ್ರಿಕೋದ್ಯಮ ಮತ್ತು ಅಧ್ಯಾಪಕ ವೃತ್ತಿ ಜೊತೆ ಜೊತೆಗೆ. ಮೈಸೂರಿನ ಡಿ. ಬನುಮಯ್ಯ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ. ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ ಕನ್ನಡ ವಿಶ್ವಕೋಶದ ಮಾನವಿಕ ವಿಭಾಗದ ಸಂಪಾದಕರಾಗಿ, ಮಾನವಿಕ ಕರ್ನಾಟಕ ಎಂಬ ತ್ರೈಮಾಸಿಕ ಪತ್ರಿಕೆ ಸಂಪಾದಕರಾಗಿ, ನಿವೃತ್ತಿಯ ನಂತರವೂ ಬ್ಯಾಂಕಿಂಗ್ ಪ್ರಪಂಚ ಎಂಬ ತ್ರೈಮಾಸಿಕ ಪತ್ರಿಕೆಯ ಸಂಪಾದಕರು. ಸುಮಾರು ಐದು ದಶಕಗಳ ಸಾಹಿತ್ಯ ಬರವಣಿಗೆಯ ಕೈಂಕರ್ಯ. ಮಾತು ಮಿತ, ನೇರ, ಸರಳ, ಕೆಲವೇ ಪದಗಳಲ್ಲಿ ಮೂಡಿಸುವ ವ್ಯಕ್ತಿ ಚಿತ್ರ. ಕಿರಿದರಲ್ಲಿ ಪಿರಿದರ್ಥ ಎಚ್ಚೆಸ್ಕೆ ಬರಹದ ಗುಣ. ಎಚ್ಚೆಸ್ಕೆ, ಸಮದರ್ಶಿ, ವಿಚಾರಪ್ರಿಯ, ವಾರದ ವ್ಯಕ್ತಿ, ವ್ಯಕ್ತಿ-ವಿಷಯ ಮುಂತಾದ ಹೆಸರುಗಳಲ್ಲಿ ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಅಂಕಣ ಬರಹ. ಇತರ ಪತ್ರಿಕೆಗಳಲ್ಲೂ ಲೇಖನ, ವಿಮರ್ಶೆ, ಕಥೆ, ಲಲಿತ ಪ್ರಬಂಧ, ವ್ಯಕ್ತಿಚಿತ್ರಗಳ ಪ್ರಕಟಣೆ. ಹಲವಾರು ಕೃತಿ ಪ್ರಕಟಿತ. ಕಾದಂಬರಿಗಳು-ಮುಕ್ತಿಮಾರ್ಗ, ಬಯಕೆಯ ಬಲೆ, ಕುರುಕ್ಷೇತ್ರ. ಕವನ ಸಂಕಲನ-ದವನದಕೊನೆ. ಲಲಿತ ಪ್ರಬಂಧ-ಕಳ್ಳ ಹೊಕ್ಕ ಮನೆ, ಜೇಡರ ಬಲೆ, ಸುರಹೊನ್ನೆ, ಚಂದ್ರಕಾಂತಿ, ಮೇಘಲಹರಿ, ಹವಳದ ಸರ. ಜೀವನಚರಿತ್ರೆ, ವ್ಯಕ್ತಿಚಿತ್ರ-ಶ್ರೀರಾಮಾನುಜ, ಎತ್ತರದ ವ್ಯಕ್ತಿಗಳು, ಡಾ. ವಿ.ಕೆ.ಆರ್.ವಿ. ರಾವ್, ಬದುಕು-ಬೆಳಕು, ಬೆಳಕು ಚೆಲ್ಲಿದ ಬದುಕು, ಲಾಲ್ ಬಹದ್ದೂರ್ ಶಾಸ್ತ್ರಿ, ಬಿ.ಆರ್. ಅಂಬೇಡ್ಕರ್, ಬಿ.ಆರ್. ಪಂತುಲು, ಯಮುನಾಚಾರ್ಯ, ಜಯಪ್ರಕಾಶ್ ನಾರಾಯಣ್. ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ-ವ್ಯಾವಹಾರಿಕ ಕನ್ನಡ, ವಾಣಿಜ್ಯ ಶಾಸ್ತ್ರ ಪರಿಚಯ, BUSINESS ENGLISH, ಬ್ಯಾಂಕಿಂಗ್ ಹೆಜ್ಜೆ ಗುರುತುಗಳು. ಹಲವಾರು ಸಂಪಾದಿತ ಕೃತಿಗಳು. ಇವರ ಹಲವಾರು ಕೃತಿಗಳು ಪಿ.ಯು. ಮತ್ತು ಪದವಿ ತರಗತಿಗಳಿಗೆ ಪಠ್ಯಪುಸ್ತಕಗಳಾಗಿ ಆಯ್ಕೆ. ಗೌರವ ಪ್ರಶಸ್ತಿಗಳು-ಹಾ.ಮಾ.ನಾ. ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸರಕಾರದ ಬಹುಮಾನ, ಕ.ಸಾ.ಪ. ಭಾಸ್ಕರರಾಯ ಸ್ಮಾರಕ ಬಹುಮಾನ ಮುಂತಾದುವು. ಹಿತೈಷಿಗಳು ಅರ್ಪಿಸಿದ ಷಷ್ಟ್ಯಬ್ದಿಗ್ರಂಥ-ಎಚ್ಚೆಸ್ಕೆಯವರ ಆಯ್ದ ಬರಹಗಳು. ೭೫ರ ಅಭಿನಂದ ಗ್ರಂಥ ‘ಸಮದರ್ಶಿ.’ ಇದೇ ದಿನ ಹುಟ್ಟಿದ ಸಾಹಿತಿಗಳು : ಟಿ.ವಿ. ವೆಂಕಟಾಚಲಶಾಸ್ತ್ರಿ – ೧೯೩೩ ಟಿ.ಪಿ. ಅಶೋಕ – ೧೯೫೫ ರಹಮತ್ ತರೀಕೆರೆ – ೧೯೫೯ ಎಂ.ಎಸ್. ವೇದಾ – ೧೯೬೫