- This event has passed.
ಎನ್.ಎಸ್.ಚಿದಂಬರರಾವ್
September 28, 2023
೨೮-೯-೧೯೩೬ ೬-೧-೨೦೦೧ ಪ್ರಖ್ಯಾತ ಕಥೆಗಾರರಾದ ಎನ್.ಎಸ್. ಚಿದಂಬರರಾವ್ರವರು ಹುಟ್ಟಿದ್ದು ದಾವಣಗೆರೆ ಬಳಿಯ ಹದಡಿ ಎಂಬ ಹಳ್ಳಿಯಲ್ಲಿ. ತಂದೆ ಎನ್. ಶಂಕರಪ್ಪ ನೂಲೇನೂರು, ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಚನ್ನಗಿರಿ. ಓದಿನಲ್ಲಿ ಸದಾಮುಂದು. ಎಸ್.ಎಸ್.ಎಲ್.ಸಿ.ಯಲ್ಲಿ ಏಳನೆಯ ರ್ಯಾಂಕ್, ಇಂಟರ್ ಮೀಡಿಯೆಟ್ನಲ್ಲಿ ೨ನೆಯ ರ್ಯಾಂಕ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿ. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್ಸ್) ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ. ಹಿಂದಿ ರಾಷ್ಟ್ರಭಾಷಾ ಪ್ರವೀಣ. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಇಡಿ ಪರೀಕ್ಷೆಯಲ್ಲಿ ಪಡೆದ ೫ನೆಯ ರ್ಯಾಂಕ್. ಉದ್ಯೋಗಕ್ಕಾಗಿ ಸೇರಿದ್ದು ಚಿಕ್ಕ ಜಾಜೂರಿನಲ್ಲಿ ಹಿಂದಿ ಅಧ್ಯಾಪಕರಾಗಿ. ನಂತರ ಮಲ್ಲಾಡಿಹಳ್ಳಿ ರಾಘವೇಂದ್ರ ಗುರೂಜಿಯವರ ಅಪೇಕ್ಷೆಯ ಮೇರೆಗೆ, ಸರಕಾರಿ ಕೆಲಸ ತೊರೆದು ಸೇರಿದ್ದು ಖಾಸಗಿ ವಿದ್ಯಾಸಂಸ್ಥೆ. ಮಲ್ಲಾಡಿಹಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ, ಶಿಕ್ಷಣ ತರಬೇತು ಸಂಸ್ಥೆಯ ಅಕ್ಷಕರಾಗಿ ವಿವಿಧ ಸೇವೆ. ನಿವೃತ್ತಿಯ ನಂತರವೂ ಮಲ್ಲಾಡಿಹಳ್ಳಿ ಶಿಕ್ಷಣ ಸಂಸ್ಥೆಯ ಆಡಳಿತಾಕಾರಿಯಾಗಿ ಮುಂದುವರಿಕೆ. ಬೆಳೆದ ಸಾಹಿತ್ಯಾಭಿರುಚಿಯಿಂದ ಬರೆದ ಮೊದಲ ಕಥೆ ‘ಶಾಂತಿ’. ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡು ಸಿಕ್ಕ ಉತ್ತೇಜನದಿಂದ ಬರೆದ ಕಥೆಗಳ ಸಂಖ್ಯೆ ೫೧೨. ಸಣ್ಣ ಕಥಾಕ್ಷೇತ್ರದಲ್ಲಿ ಇದೊಂದು ದಾಖಲೆಯೂ ಹೌದು. ಕಥಾಸಂಕಲನಗಳು-ಸರಿಯುವ ತೆರೆಗಳು, ಸಂದಿಗ್ಧ, ಶರನ್ನವರಾತ್ರಿ, ಸಿಗ್ನಲ್ ಬೀಳಲಿಲ್ಲ. ಸಂಪಾದಿತ-ಅಲೆಗಳು, ಕಾದಂಬರಿ-ಬೆಂಕಿಯ ನೆರಳು, ನಿರ್ದೇಶನ. ಜೀವನ ಚರಿತ್ರೆ-ಎಚ್ಚಮನಾಯಕ, ರಾಘವೇಂದ್ರ ಗುರೂಜಿಯವರ ಆತ್ಮಕಥೆ ನಿರೂಪಣೆ. ಇವರ ಕಂಠ ಸಿರಿಯಿಂದ ನಡೆಸಿಕೊಟ್ಟ ನೂರಾರು ಗಮಕವಾಚನ ಕಾರ್ಯಕ್ರಮಗಳು. ನೂರಾರು ಭಕ್ತಿ ಗೀತೆಗಳಿಗೆ ರಾಗ ಸಂಯೋಜನ ಹಾಗೂ ಗಾಯನ. ನಾಟಕಾಭಿನಯ ಭಾಷಣಕಲೆಯಲ್ಲೂ ಅದ್ವಿತೀಯರು. ಚಿತ್ರದುರ್ಗದ ಇಂಟರ್ ಮೀಡಿಯೆಟ್ ಕಾಲೇಜು, ಮೈಸೂರು ಮಹಾರಾಜ ಕಾಲೇಜಿನಲ್ಲಿ ನಾಟಕ ಪಾತ್ರಧಾರಿ. ಮಲ್ಲಾಡಿಹಳ್ಳಿ ರಾಘವೇಂದ್ರ ಗುರೂಜಿ, ಚಳ್ಳೇಕೆರೆ ಪೌರರಿಂದ ಚನ್ನಗಿರಿ ತಾಲ್ಲೂಕ ಸಾಹಿತ್ಯ ಪರಿಷತ್, ಹೊಳಲ್ಕೆರೆ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷತೆ ಪ್ರಜಾವಾಣಿ ದೀಪಾವಳಿ ವಾರ್ಷಿಕ ಕಥಾಸ್ಪರ್ಧೆಯ ಬಹುಮಾನಿತರಲ್ಲಿ ಮೂರನೆಯರು ಹೀಗೆ ಸಂದ ಹಲವಾರು ಗೌರವಗಳು. ಆಕಸ್ಮಿಕಕ್ಕೊಳಗಾಗಿ ತೀರಿಕೊಂಡದ್ದು ೬.೧.೨೦೦೧ರಲ್ಲಿ. ಇದೇ ದಿನ ಹುಟ್ಟಿದ ಸಾಹಿತಿಗಳು : ಪಾ.ಶ. ಶ್ರೀನಿವಾಸ – ೧೯೩೪ ಶಾರದಾಗೋಪಾಲ್ – ೧೯೬೦